ಮಂಡ್ಯ: ಸ್ವಂತ ಹಣದಲ್ಲಿ 16 ಕೆರೆಗಳನ್ನು ನಿರ್ಮಿಸಿ ಸಮಾಜಮುಖಿ ಕೆಲಸದಲ್ಲಿ ಮಗ್ನರಾಗಿದ್ದ ಕೆರೆ ಕಾಮೇಗೌಡ ಅವರು ಅನಾರೋಗ್ಯಕ್ಕೀಡಾಗಿದ್ದಾರೆ.
ಜು.28ರಂದು ನಡೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದರು. ಇದಾದ ಮರುದಿನ ಕಾಮೇಗೌಡರು ಜಮೀನಿನಲ್ಲಿ ಕೆಲಸ ಮಾಡುವಾಗ ಗಿಡದ ಕಡ್ಡಿ ತಗುಲಿ ಬಲಗಾಲಿಗೆ ಗಾಯವಾಗಿತ್ತು. ಬಳಿಕ ಇವರನ್ನು ಭೇಟಿ ಮಾಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಕಾರಣ ಚಿಕಿತ್ಸೆ ಪಡೆದಿರಲಿಲ್ಲ. ಇದರಿಂದಾಗಿ ಕಾಲು ಹೂದಿಕೊಂಡಿತ್ತು. ಇದನ್ನೂ ಓದಿರಿ ಕೆಎಸ್ಆರ್ಟಿಸಿ ಸಿಬ್ಬಂದಿಗೆ 1 ವರ್ಷ ವೇತನ ರಹಿತ ರಜೆ, ಲಕ್ಷಕ್ಕೂ ಹೆಚ್ಚು ನೌಕರರ ಪಾಲಿಗೆ ಮರಣಶಾಸನ?
ಗುರುವಾರ ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಕಾಮೇಗೌಡರು ಚಿಕಿತ್ಸೆ ಪಡೆದಿದ್ದಾರೆ. ಡಿಸಿ ಅವರ ಸೂಚನೆ ಮೇರೆಗೆ ಡಿಎಚ್ಒ ಡಾ.ಎಚ್.ಪಿ.ಮಂಚೇಗೌಡ, ತಹಸೀಲ್ದಾರ್ ಚಂದ್ರಮೌಳಿ ಆಸ್ಪತ್ರೆಗೆ ಭೇಟಿ ನೀಡಿ ಕಾಮೇಗೌಡ ಅವರ ಆರೋಗ್ಯ ವಿಚಾರಿಸಿದರು.
ಗಾಯ ಸ್ವಲ್ಪಮಟ್ಟಿಗೆ ಉಲ್ಬಣಗೊಂಡಿರುವುದರಿಂದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದಕ್ಕೆ ಕಾಮೇಗೌಡರು ಒಪ್ಪಿಗೆ ನೀಡಿಲ್ಲ. ಮನೆಯಲ್ಲಿಯೇ ಚಿಕಿತ್ಸೆ ಕೊಡಿ ಎಂದು ಹಠಹಿಡಿದರು. ಎಷ್ಟೇ ಮನವೊಲಿಸಿದರೂ ಒಪ್ಪಲಿಲ್ಲ. ಅಂತಿಮವಾಗಿ ಮನೆಗೆ ಕರೆದುಕೊಂಡು ಹೋಗಿದ್ದು, ಪ್ರತಿದಿನ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲಿದ್ದಾರೆ.
ಸ್ವಂತ ಹಣದಲ್ಲಿ 16 ಕೆರೆಗಳನ್ನು ನಿರ್ಮಿಸಿ ಪ್ರಾಣಿ-ಪಕ್ಷಿಗಳಿಗೆ ಕುಡಿವ ನೀರೊದಗಿಸುತ್ತಿರುವ, ಅಂತರ್ಜಲ ವೃದ್ಧಿಗೆ ಪ್ರಮುಖ ಕೊಡುಗೆ ನೀಡಿದ, ಬೆಟ್ಟದ ತಪ್ಪಲಿನಲ್ಲಿ ಗಿಡನೆಟ್ಟು ಪರಿಸರ ಕಾಳಜಿ ಮೆರೆದ ಕಾಮೇಗೌಡರು ‘ಆಧುನಿಕ ಭಗೀರಥ’, ‘ಕೆರೆಗಳ ಮನುಷ್ಯ’ ಎಂದೇ ಹೆಸರುವಾಸಿ.
85 ವರ್ಷ ವಯಸ್ಸಿನ ಕಾಮೇಗೌಡರು ಕುಂದೂರು ಬೆಟ್ಟದ ತಪ್ಪಲಿನಲ್ಲಿ ಕೆರೆಗಳನ್ನು ನಿರ್ಮಿಸಿದ್ದು, ಇನ್ನಷ್ಟು ಸಮಾಜಮುಖಿ ಕಾರ್ಯ ಮಾಡುವ ಹಂಬಲ ಅವರದ್ದು. ಶೀಘ್ರವೇ ಗುಣಮುಖರಾಗಲಿ.
ಜಮೀನು ಸರ್ವೇ ಮಾಡಲು ಬಂದ ತಹಸೀಲ್ದಾರ್ ಎದೆಗೆ ಚಾಕು ಇರಿದು ಕೊಂದ ನಿವೃತ್ತ ಶಿಕ್ಷಕ