ತಿರುವನಂತಪುರ: ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಕೇರಳ ಸರ್ಕಾರ ಇನ್ನೊಂದು ಪ್ರಮುಖ ನಿರ್ಧಾರ ಕೈಗೊಂಡಿದೆ.
ರಾಜ್ಯದಲ್ಲಿ ಇನ್ನುಮುಂದೆ ಎಲ್ಲಿಯೂ ರಸ್ತೆ ಬದಿ ಮೀನು ಮಾರಾಟ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಮೀನುಗಾರಿಕಾ ಸಚಿವರಾದ ಜೆ.ಮರ್ಸಿಕುಟ್ಟಿ ಅಮ್ಮಾ ಈ ಸೂಚನೆ ನೀಡಿದ್ದು, ರಸ್ತೆ ಬದಿ ಅಲ್ಲಲ್ಲಿ ಕುಳಿತು ಮೀನು ಮಾರಾಟ ಮಾಡುತ್ತಿರುವವರು ಈಗಲೇ ನಿಲ್ಲಿಸಬೇಕು ಎಂದಿದ್ದಾರೆ.
ಕೊವಿಡ್-19 ಸೋಂಕಿನ ಭಯದಿಂದಾಗಿ ಮೀನು ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು. ಆದರೆ ಈಗ ಕರೊನಾ ನಿಯಂತ್ರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡು, ಮತ್ತೆ ಮಾರುಕಟ್ಟೆಗಳನ್ನು ತೆರೆಯಲು ನಿರ್ಧಾರ ಮಾಡಲಾಗಿದೆ. ಮೀನುಗಾರರ ಒಕ್ಕೂಟ ಮತ್ತು ಮೀನುಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎನ್ಜಿಒಗಳು, ಮೀನು ಮಾರಾಟ ಮಾಡಲು ಅನುಮತಿ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿವೆ. ಹಾಗಾಗಿ ಮೀನು ಮಾರುಕಟ್ಟೆಗಳನ್ನು ತೆರೆಯಲು ತೀರ್ಮಾನ ಮಾಡಲಾಗಿದೆ. ಆದರೆ ಕೆಲವು ಮಾರ್ಗಸೂಚಿಗಳನ್ನು ನೀಡಬೇಕಾಗಿದೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಈ ರಸ್ತೆ ಬದಿ ಮೀನು ಮಾರಾಟ ಮಾಡುತ್ತಿರುವವರು ನಿಲ್ಲಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.
ಹೀಗಿದ್ದಾಗ್ಯೂ ಎಲ್ಲಾದರೂ ಈ ಮೀನು ಮಾರುಕಟ್ಟೆಗಳು ಕಾರ್ಯ ನಿರ್ವಹಿಸುತ್ತಿದ್ದರೆ ಸ್ಥಳೀಯ ಆಡಳಿತಗಳು ಅದನ್ನು ನಮ್ಮ ಗಮನಕ್ಕೆ ತರಬೇಕು ಎಂದೂ ತಿಳಿಸಿದ್ದಾರೆ. (ಏಜೆನ್ಸೀಸ್)