ಕಣ್ಣೂರು: ಇದೆಂಥ ವಿಚತ್ರ ನೋಡಿ? ಹಲಸಿನ ಹಣ್ಣು ತಲೆ ಮೇಲೆ ಬಿದ್ದು, ಬೆನ್ನು ಮೂಳೆ ಹಾನಿಗೊಳಗಾಗಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದ. ಆತನನ್ನು ಪರೀಕ್ಷಿಸಿದ ವೈದ್ಯರು ಆತನಿಗೆ ಕರೊನಾ ಸೋಂಕು ಇರುವುದಾಗಿ ತಿಳಿಸಿದ್ದಾರೆ…!
ಕೇರಳದ ಕಾಸರಗೋಡು ಜಿಲ್ಲೆಯ ಆಟೋ ರಿಕ್ಷಾ ಚಾಲಕನೊಬ್ಬನಿಗೆ ಹಲಸಿನ ಹಣ್ಣು ತಲೆ ಮೇಲೆ ಬಿದ್ದಿತ್ತು. ತಲೆಗೆ ಗಾಯವಾಗದಿದ್ದರೂ ಬೆನ್ನು ಮೂಳೆಗೆ ಹಾನಿಯಾಗಿತ್ತು. ಆತ ಆಸ್ಪತ್ರೆಗೆ ದಾಖಲಾದ. ನಡೆದ ಘಟನೆಯನ್ನೆಲ್ಲ ವೈದ್ಯರಿಗೆ ವಿವರಿಸಿದ. ದುರಾದೃಷ್ಟವೇ ಇರಬೇಕು, ಆತನ ಬೆನ್ನುಬಿದ್ದದ್ದು ಹಲಸಲ್ಲ, ಕರೊನಾ. ಈ ಸೋಂಕು ಹೇಗೆ ತಗುಲಿತು ಎಂಬುದು ಸ್ಪಷ್ಟವಾಗಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
“ಕಾಸರಗೋಡಿನ ಬೇಲೂರಿನ ನಿವಾಸಿಯಾದ ಆತನಿಗೆ ಬೆನ್ನುಮೂಳೆಗೆ ಗಾಯವಾಗಿದ್ದು, ಕೈ ಕಾಲುಗಳು ದುರ್ಬಲಗೊಂಡಿವೆ. ಆದ್ದರಿಂದ ಆತನಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಅಗತ್ಯವಾಗಿತ್ತು. ಯಾವುದೇ ತುರ್ತು ಶಸ್ತ್ರಚಿಕಿತ್ಸೆಗೊಳಗಾಗುವ ವ್ಯಕ್ತಿಯನ್ನು ಮೊದಲು ಕೋವಿಡ್ ಪರೀಕ್ಷೆಗೊಳಪಡಿಸುವುದು ವೈದ್ಯಕೀಯ ನಿಯಮಾವಳಿಯಾಗಿದೆ. ಆದ್ದರಿಂದ ಆ ವ್ಯಕ್ತಿಯನ್ನು ಪರೀಕ್ಷಿಸಿದಾಗ ಸೋಂಕು ಇರುವುದು ಪತ್ತೆಯಾಗಿದೆ ಎಂದು ಕಣ್ಣೂರು ಪೆರಿಯಾರಮ್ ಮೆಡಿಕಲ್ ಕಾಲೇಜಿನ ಅಧೀಕ್ಷಕ ಡಾ.ಕೆ. ಸುದೀಪ್ ದೃಢಪಡಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ ಹುಟ್ಟಿದ ‘ಲಾಕ್ಡೌನ್ ಯಾದವ್’….!
ಆಟೋ ಚಾಲಕನಿಗೆ ಇತ್ತೀಚಿನ ಪ್ರಯಾಣದ ಇತಿಹಾಸ ಅಥವಾ ಯಾವುದೇ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕವಿಲ್ಲ. ತನ್ನ ಆಟೋರಿಕ್ಷಾದಲ್ಲಿ ಪ್ರಯಾಣಿಕರಿಂದ ಆತನಿಗೆ ಸೋಂಕು ಪತ್ತೆಯಾಗಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಅಲ್ಲದೇ, ಒಮ್ಮೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದನಂತೆ, ಅಲ್ಲಿಂದ ಆತನಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಇದೆಲ್ಲವನ್ನೂ ಪರಿಶೀಲಿಸಲಾಗುತ್ತಿದೆ ಎಂದು ಎಂದು ಅವರು ಹೇಳಿದರು.
ಅವನ ಕುಟುಂಬದವರನ್ನು ಕ್ವಾರಂಟೈನ್ನಲ್ಲಿಡಲಾಗುತ್ತದೆ. ಆತನ ಪ್ರಾಥಮಿಕ ಸಂಪರ್ಕಗಳನ್ನು ಕಂಡುಹಿಡಿಯುವ ಕಾರ್ಯ ಆರಂಭವಾಗಿದೆ.