| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯದಲ್ಲಿನ ಉಪ ನೋಂದಣಿ ಕಚೇರಿಗಳಲ್ಲಿ ಜೂ.30ರ ಒಳಗೆ ಕಾವೇರಿ 2.0 ತಂತ್ರಾಂಶ ಸಂಪೂರ್ಣ ಜಾರಿ ಮಾಡಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಯೋಜನೆ ರೂಪಿಸಿದೆ. ರಾಜ್ಯದ 292 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ 2.0 ಸಾಫ್ಟ್ವೇರ್ ಜಾರಿ ಕುರಿತು ದಿನಾಂಕ ನಿಗದಿ ಮಾಡಿದ್ದು, ಎರಡು ವಾರಗಳ ಕಾಲ ಪ್ರಯೋಗಿಕವಾಗಿ 35 ಜಿಲ್ಲೆಗಳಲ್ಲಿ (ಸಬ್ ರಿಜಿಸ್ಟ್ರಾರ್ ದಾಖಲೆಯಂತೆ) ಜೂನ್ ಅಂತ್ಯದವರೆಗೂ ಹಂತಹಂತವಾಗಿ ಜಾರಿಗೆ ತರಲಾಗುತ್ತದೆ. ಇದರಲ್ಲಿನ ಸಾಧನ-ಬಾಧಕಗಳನ್ನು ಅಧ್ಯಯನ ನಡೆಸಿ ಲೋಪದೋಷಗಳನ್ನು ಸರಿಪಡಿಸಲಾಗುತ್ತದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೊಡ್ಡಬಳ್ಳಾಪುರ ಸಬ್ ರಿಜಿಸ್ಟ್ರಾರ್ನಲ್ಲಿ ಅಧಿಕೃತವಾಗಿ ಜಾರಿಗೆ ತರಲು ನಿರ್ಧರಿಸಲಾಗುತ್ತದೆ. ಈಗಾಗಲೆ ಪ್ರಯೋಗಿಕವಾಗಿ ಚಿಂಚೋಳಿ, ಬೆಳಗಾವಿ ಮತ್ತು ಮಂಡ್ಯ ಸಬ್ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ 2.0 ತಂತ್ರಾಂಶ ಅಳವಡಿಕೆ ಮಾಡಲಾಗಿದೆ. ಇದರ ಜತೆಗೆ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲಿಫ್ಟ್-ಶೌಚಗೃಹ ಸೇರಿ ಎಲ್ಲ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಕಾವೇರಿ-2 ಹೊಸ ತಂತ್ರಾಂಶ ಸೇವೆಯಿಂದ ನೋಂದಣಿಗೆ ಬರುವ ಜನರು ಸಮಯ ನಿಗದಿ ಮಾಡಿಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದು ಕೆಲವೇ ನಿಮಿಷಗಳಲ್ಲಿ ಸೇವೆ ಪಡೆಯಬಹುದು. ಪಾಸ್ಪೋರ್ಟ್ ಸೇವೆ ಮಾದರಿ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಜುಲೈನಲ್ಲಿ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ 2.0 ಜಾರಿಗೆ ತರಬೇಕೆಂಬ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ಪಣತೊಟ್ಟಿದ್ದಾರೆ.
ಇದನ್ನೂ ಓದಿ: ಈ ಯಂತ್ರವೊಂದಿದ್ದರೆ ಸಾಕು, ಕಳ್ಳರಿಗೆ ‘ಹೊಗೆ’ನೇ; ಕಳವಿಗೆ ಬಂದವರು ಧೂಮಕ್ಕೆ ಹೆದರಿ ಪರಾರಿ!?
ಅತ್ಯಂತ ಸರಳ ಸಾಫ್ಟ್ವೇರ್
ಜುಲೈನಲ್ಲಿ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ 2.0 ತಂತ್ರಾಂಶ ಜಾರಿಗೆ ತರಲಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿ, ಸಿಬ್ಬಂದಿ, ವಕೀಲರು, ಸಾರ್ವಜನಿಕರು ಸೇರಿದಂತೆ ಸಂಬಂಧಪಟ್ಟವರಿಗೆ ಹಂತ ಹಂತವಾಗಿ ಕಾರ್ಯಾಗಾರ ನಡೆಸಿ ಕಾವೇರಿ 2.0 ಕುರಿತು ಅರಿವು ಮೂಡಿಸಲಾಗುತ್ತದೆ. ಹೊಸ ಸೇವೆ ಆರಂಭದಲ್ಲಿ ಕಷ್ಟ ಎನಿಸಿದರೂ ಇದು ಮೊದಲಿಗಿಂತ ಜನಸ್ನೇಹಿ ಸೇವೆಯಾಗಿದೆ. ಪ್ರತಿಯೊಬ್ಬರು ಸಹಕರಿಸಬೇಕೆಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತೆ ಡಾ.ಬಿ.ಆರ್. ಮಮತಾ ತಿಳಿಸಿದ್ದಾರೆ.
ರಾಜ್ಯವ್ಯಾಪಿ ಕಾವೇರಿ 2.0 ತಂತ್ರಾಂಶ ಜಾರಿ
——————————-
ಜಿಲ್ಲೆ: ಅನುಷ್ಠಾನ
——————————-
ಚಿಕ್ಕಬಳ್ಳಾಪುರ: ಏ.1ರಿಂದ 18
ರಾಮನಗರ: ಏ.12ರಿಂದ 21
ಕೋಲಾರ: ಏ.17ರಿಂದ ಮೇ 2
ದಾವಣಗೆರೆ: ಏ.25ರಿಂದ ಮೇ 3
ಬೆಂ.ಗ್ರಾಮಾಂತರ: ಮೇ 2ರಿಂದ 12
ಚಿತ್ರದುರ್ಗ: ಮೇ 6ರಿಂದ 19
ಶಿವಮೊಗ್ಗ: ಮೇ 15ರಿಂದ 29
ತುಮಕೂರು: ಮೇ 23ರಿಂದ 30
ಬಸವನಗುಡಿ: ಮೇ 29ರಿಂದ ಜೂ.5
ಗಾಂಧಿನಗರ: ಜೂ.1ರಿಂದ 6
ಜಯನಗರ: ಜೂ.5ರಿಂದ 12
ರಾಜಾಜಿನಗರ: ಜೂ.9ರಿಂದ 16
ಶಿವಾಜಿನಗರ: ಜೂ.14ರಿಂದ 20
ಮಂಡ್ಯ: ಏ.1ರಿಂದ 20
ಚಾಮರಾಜನಗರ: ಏ.13ರಿಂದ 27
ಕೊಡಗು: ಏ.21ರಿಂದ ಮೇ 4
ಚಿಕ್ಕಮಗಳೂರು: ಏ.28ರಿಂದ ಮೇ 12
ಮೈಸೂರು: ಮೇ 8ರಿಂದ 31
ಹಾಸನ: ಮೇ 25ರಿಂದ ಜೂ.21
ಉಡುಪಿ: ಜೂ. 7ರಿಂದ 21
ದಕ್ಷಿಣಕನ್ನಡ: ಜೂ. 15ರಿಂದ ಜು. 3
ಕಲುಬುರಗಿ: ಏ. 1ರಿಂದ 17
ಯಾದಗಿರಿ: ಏ. 12ರಿಂದ 21
ಬೀದರ್: ಏ. 18ರಿಂದ 29
ಕೊಪ್ಪಳ: ಏ. 25ರಿಂದ ಮೇ 6
ರಾಯಚೂರು: ಮೇ 2 ರಿಂದ 11
ಬಳ್ಳಾರಿ: ಮೇ 8ರಿಂದ 22
ವಿಜಯನಗರ: ಮೇ 16ರಿಂದ 26
ಬೆಳಗಾವಿ: ಏ. 1 ರಿಂದ 24
ವಿಜಯಪುರ: ಏ. 18ರಿಂದ 29
ಕಾರವಾರ: ಏ. 25ರಿಂದ ಮೇ 12
ಧಾರವಾಡ: ಮೇ 8ರಿಂದ ಮೇ 22
ಗದಗ: ಮೇ 17ರಿಂದ ಜೂ. 1
ಹಾವೇರಿ: ಮೇ 25ರಿಂದ ಜೂ. 8
ಬಾಗಲಕೋಟೆ: ಜೂ. 3ರಿಂದ 21
ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!