ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳ ನಿರೀಕ್ಷೆ 2ನೇ ದಿನವೂ ಹುಸಿಯಾಗಿದೆ.
ನಗರದ 5 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಭಾನುವಾರವೂ ಕೇವಲ 12 ದಸ್ತಾವೇಜುಗಳ ನೋಂದಣಿ ಆಗಿದ್ದು, ಶನಿವಾರ 25 ಪತ್ರಗಳು ನೋಂದಣಿ ಪೂರ್ಣವಾಗಿದ್ದವು.
ಆರ್ಥಿಕ ವರ್ಷದ ಕೊನೆಯ ತಿಂಗಳೆಂದು ಮಾರ್ಚ್ನಲ್ಲಿ ಸ್ಥಿರಾಸ್ತಿಗಳ ವಹಿವಾಟಿನಲ್ಲಿ ಹೆಚ್ಚಳ ಆಗಲಿದೆ. ಆದರಿಂದ 2ನೇ ಮತ್ತು 4ನೇ ಶನಿವಾರ ಮತ್ತು ಎಲ್ಲ ಭಾನುವಾರವೂ ಕಚೇರಿ ತೆರೆಯಬೇಕೆಂದು ನಿರ್ಧರಿಸಿದ್ದರು. ಬೆಂಗಳೂರು ನಗರ ಜಿಲ್ಲೆಯ ಚಾಮರಾಜಪೇಟೆ, ಇಂದಿರಾನಗರ, ರಾಜಾಜಿನಗರ, ಯಲಹಂಕ ಮತ್ತು ಜೆ.ಪಿ.ನಗರ ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು 2ನೇ ಶನಿವಾರ ಮತ್ತು ಭಾನುವಾರ ಕರ್ತವ್ಯ ನಿರ್ವಹಿಸಲಾಗಿತ್ತು.
ಪ್ರತಿದಿನ ಒಂದು ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿ 8 ರಿಂದ 10 ಸಬ್ ರಿಜಿಸ್ಟ್ರಾರ್ಗಳು ಇದ್ದು, ಅದರಲ್ಲಿ ತಲಾ ಕನಿಷ್ಠ 80 ರಿಂದ 120 ದಸ್ತಾವೇಜುಗಳು ನೋಂದಣಿ ಪೂರ್ಣವಾಗುತ್ತಿದ್ದವು. ರಜೆ ದಿನಗಳಲ್ಲಿ ಜಿಲ್ಲಾ ನೋಂದಣಾಧಿಕಾರಿ ವ್ಯಾಪ್ತಿಗೆ ತಲಾ ಒಂದು ಸಬ್ ರಿಜಿಸ್ಟ್ರಾರ್ ಕಚೇರಿ ತೆರೆದಿದ್ದು, ಆದರೂ ಜನರು ಬರುತ್ತಿಲ್ಲ.
ರಜೆ ದಿನಗಳಲ್ಲೂ ಸಬ್ ರಿಜಿಸ್ಟ್ರಾರ್ ಕಚೇರಿ ಸೇವೆ ಸಿಗುತ್ತದೆ ಎಂದು ಹೆಚ್ಚು ಪ್ರಚಾರವಾದರೇ ಜನರು ಬರುತ್ತಾರೆ ಎಂಬುದು ಕಂದಾಯ ಇಲಾಖೆ ಅಧಿಕಾರಿಗಳ ವಾದವಾಗಿದೆ. ಸಾಮಾನ್ಯವಾಗಿ ಸೌಲಭ್ಯ ಹೆಚ್ಚಾದಂತೆ ಬಳಸಿಕೊಳ್ಳುವ ವರ್ಗ ಇದ್ದೇ ಇರುತ್ತದೆ. ಆದರೆ, ರಜೆ ದಿನಗಳಲ್ಲಿ ಕಚೇರಿ ತೆರೆದಿರುತ್ತಾರೆ ಎಂದು ಹೊಸದಾಗಿ ಸೈಟ್, ಭೂಮಿ, ಕಟ್ಟಡ ಸೇರಿದಂತೆ ಸ್ಥಿರಾಸ್ತಿ ಖರೀದಿಸುವರ ಪ್ರಮಾಣ ಏರಿಕೆ ಆಗುವುದಿಲ್ಲ.
ಇದೊಂದು ಅವೈಜ್ಞಾನಿಕ ಆದೇಶವಾಗಿದೆ. ಬದಲಿಗೆ ಉಪ ನೋಂದಣಿ ಕಚೇರಿ ಅಧಿಕಾರಿ, ಸಿಬ್ಬಂದಿಗೆ ರಜೆ ದಿನವೂ ಕೆಲಸ ಮಾಡುವ ಶಿಕ್ಷೆ ವಿಧಿಸಿದಂತೆ ಕಾಣುತ್ತಿದೆ. ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಿಸಿದವರಿಗೆ ಬದಲಿ ರಜೆ ಅಥವಾ ಹೆಚ್ಚುವರಿ ಭತ್ಯೆದ ಬಗ್ಗೆ ಕಂದಾಯ ಇಲಾಖೆ ಸ್ಪಷ್ಟಪಡಿಸದ ಕಾರಣ ಅಧಿಕಾರಿ, ಸಿಬ್ಬಂದಿ ವರ್ಗದಲ್ಲಿ ಅಸಮಧಾನ ವ್ಯಕ್ತವಾಗಿದೆ.
ರಜೆ ದಿನೇ ನೋಂದಣಿಯಾದ ದಸ್ತಾವೇಜು
————————–
ಡಿಆರ್ ಕಚೇರಿ-ಶನಿವಾರ-ಭಾನುವಾರ
————————–
ಶಿವಾಜಿನಗರ- 13- 5
ಗಾಂಧಿನಗರ- 4 – 3
ಬಸವನಗುಡಿ- 2- 2
ಜಯನಗರ- 3- 1
ರಾಜಾಜಿನಗರ- 3- 1
————————–
ಒಟ್ಟು- 25- 12