ನವದೆಹಲಿ: ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ಕೌನ್ ಬನೇಗಾ ಕರೋಡ್ಪತಿ (ಕೆಬಿಸಿ) 13ನೇ ಆವೃತ್ತಿಯಲ್ಲಿ 25 ಲಕ್ಷ ರೂ. ಜಯಿಸಿದ್ದಾರೆ. ‘ಶಾನ್ದಾರ್ ಶನಿವಾರ್’ ವಿಶೇಷ ಸಂಚಿಕೆಯಲ್ಲಿ ಅವರು ಜಯಿಸಿದ ಹಣವನ್ನು ದತ್ತಿನಿಧಿಗೆ ಕೊಡುಗೆ ನೀಡಿದರು.
ಬಾಲಿವುಡ್ ಬಾದ್ಶಾ ಹಾಗೂ ನಿರೂಪಕ ಅಮಿತಾಭ್ ಬಚ್ಚನ್ ಜತೆಗೆ ಹಾಲಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಹಾಗೂ ಸೆಹ್ವಾಗ್ ಕ್ರಿಕೆಟ್ ಜೀವನದ ಹಲವು ಕ್ಷಣಗಳನ್ನು ಹಂಚಿಕೊಂಡರು. ಸೆಹ್ವಾಗ್ ಹಲವು ಹಿಂದಿ ಹಾಡುಗಳನ್ನು ಹಾಡಿ ಗಮನಸೆಳೆದರೆ, ಗಂಗೂಲಿ ಕೆಲಕಾಲ ನಿರೂಪಕರ ಸೀಟಿನಲ್ಲಿ ಕುಳಿತು ಅದರ ಅನುಭವವನ್ನೂ ಪಡೆದರು.
ಬಂಗಾಳಿ ಭಾಷೆಯಲ್ಲಿ ಈ ರಿಯಾಲಿಟಿ ಶೋವನ್ನು (ಕೆ ಹೋಬ್ ಬಂಗ್ಲರ್ ಕೋಟಿಪೊತಿ) ಕಳೆದ ಕೆಲವರ್ಷಗಳಿಂದ ಗಂಗೂಲಿ ಅವರೇ ನಿರೂಪಿಸುತ್ತಿದ್ದಾರೆ. ಗಂಗೂಲಿ-ಸೆಹ್ವಾಗ್ ಜೋಡಿಗೆ 50 ಲಕ್ಷ ರೂ. ಜಯಿಸುವ ಅವಕಾಶವಿದ್ದರೂ, ಆ ವೇಳೆಗೆ ಶೋ ಮುಕ್ತಾಯದ ಗಂಟೆ ಮೊಳಗಿತು.
1942ರಲ್ಲಿ ನೇತಾಜಿ ಸುಭಾಷ್ಚಂದ್ರ ಬೋಸ್ ಸಾರಥ್ಯದಲ್ಲಿ ಮೊದಲ ರೇಡಿಯೊ ಸೇವೆ ‘ಆಜಾದ್ ಹಿಂದ್ ರೇಡಿಯೊ’ ಯಾವ ದೇಶದಲ್ಲಿ ಆರಂಭಗೊಂಡಿತ್ತು ಎಂಬ ಪ್ರಶ್ನೆಯನ್ನು ಗಂಗೂಲಿ-ಸೆಹ್ವಾಗ್ಗೆ 25 ಲಕ್ಷ ರೂ.ಗೆ ಕೇಳಲಾಗಿತ್ತು. ಅದಕ್ಕೆ ಅವರು ಜರ್ಮನಿ ಎಂದು ಸರಿಯಾದ ಉತ್ತರ ನೀಡಿದ್ದರು.
ಒಲಿಂಪಿಯನ್ ದ್ಯುತಿ ಚಂದ್ ಮಾನಹಾನಿ ಸುದ್ದಿ ಪ್ರಕಟ, ವೆಬ್ಸೈಟ್ ಸಂಪಾದಕ ಬಂಧನ