ಕೊಳ್ಳೇಗಾಲ: ನಮ್ಮ ಜೀವನದುದ್ದಕ್ಕೂ ಕ್ರೀಡಾ ಮನೋಭಾವನೆ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಎಸ್.ಬಾಲರಾಜು ಹೇಳಿದರು.
ಪಟ್ಟಣದ ಎಂಜಿಎಸ್ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಕಿಚ್ಚ ಪ್ರೀಮಿಯರ್ ಲೀಗ್ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖ. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಅದನ್ನೆ ಕ್ರೀಡಾ ಮನೋಭಾವನೆ ಎನ್ನುವುದು. ಸೋತರೆ ಗೆಲುವಿಗಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.
ಕ್ರಿಕೆಟ್ ಜನಪ್ರಿಯತೆ ಪಡೆದುಕೊಂಡಿರುವ ಕ್ರೀಡೆ. ಇದಕ್ಕಿರುವ ಕ್ರೇಜ್ ಕಡಿಮೆ ಆಗುವುದಿಲ್ಲ. ಕ್ರಿಕೆಟ್ ಆಟಗಾರರು ದೇಶದಲ್ಲೇ ದೊಡ್ಡ ಮಟ್ಟದ ಸಾಧನೆಗಳನ್ನು ಮಾಡಿದ್ದಾರೆ. ಆ ಉದಾಹರಣೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಿ ಎಂದು ಸಲಹೆ ನೀಡಿದರು.
ಕೇಂದ್ರ ಬರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಕ್ರೀಡೆಯಲ್ಲಿ ಜಾತಿ, ಧರ್ಮದ ಭೇದವಿರುವುದಿಲ್ಲ. ನಮ್ಮ ತಂಡ ಗೆಲ್ಲಬೇಕೆಂದು ತಂಡದ ಕ್ರೀಡಾಪಟುಗಳು ಒಗ್ಗಟ್ಟಿನಿಂದ ಆಟವಾಡುತ್ತಾರೆ. ಸಹೋದರ ಭಾವನೆಯಲ್ಲಿ ಮಿಂದೇಳುತ್ತಾರೆ. ಕೊಳ್ಳೇಗಾಲದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯನ್ನು ಮೇರು ನಟ ಕಿಚ್ಚ ಸುದೀಪ್ ಹೆಸರಿನಲ್ಲಿ ಆಯೋಜನೆ ಮಾಡಿರುವುದು ನಿಜಕ್ಕೂ ಶ್ಲಾಘಿಸುವಂತಹದ್ದು ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಎನ್.ವಿ.ಪರಮೇಶ್ವರಯ್ಯ, ನಗರಸಭೆ ಸದಸ್ಯ ರಾಮಕೃಷ್ಣ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಶಿವು ಸರಗೂರು ಮುಖಂಡರಾದ ಎಸ್.ಸಿದ್ದಪ್ಪಾಜಿ, ಕೆ.ಕೆ.ಮೂರ್ತಿ, ನಾಗಣ್ಣ, ಜಗದೀಶ್ ಶಂಕನಪುರ, ಸೋಮಣ್ಣ ಉಪ್ಪಾರ್, ಮಹೇಶ್, ಚಂದ್ರೇಶ್, ರಮೇಶ್, ರವಿ, ಮಲ್ಲಯ್ಯ, ಚೇತನ್ ಇತರರಿದ್ದರು.