ನವದೆಹಲಿ: ಪ್ರಸಕ್ತ ಐಪಿಎಲ್ ಸೀಸನ್ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ ಗೆಲ್ಲುವ ಕನಸು ಭಗ್ನವಾಗಿದೆ. ಮೇ 22ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ರಾಜಸ್ಥಾನ ರಾಯಲ್ಸ್ 4 ವಿಕೆಟ್ಗಳಿಂದ ಜಯಗಳಿಸಿತು. ಈ ಸೋಲಿನೊಂದಿಗೆ ಈ ಸೀಸನ್ನಲ್ಲಿ ಆರ್ಸಿಬಿ ಆಳ್ವಿಕೆ ಅಂತ್ಯಗೊಂಡಿತು. ಲೀಗ್ ಹಂತದಲ್ಲಿ ಮೊದಲ 8 ಪಂದ್ಯಗಳಲ್ಲಿ 7ರಲ್ಲಿ ಸೋತು ಬಹುತೇಕ ಟೂರ್ನಿಯಿಂದ ಹೊರಗುಳಿದಿದ್ದ ಆರ್ಸಿಬಿ ಅಚ್ಚರಿಯ ರೀತಿಯಲ್ಲಿ ಚೇತರಿಸಿಕೊಂಡು ಸತತ 6ರಲ್ಲಿ ಗೆದ್ದು ಪ್ಲೇ ಆಫ್ ತಲುಪಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಆದರೆ, ಎಲಿಮಿನೇಟರ್ನಲ್ಲಿ ಎಡವಿತು. ಇದರ ಬೆನ್ನಲ್ಲೇ ಆರ್ಸಿಬಿ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದು, ನಟಿ ಕಸ್ತೂರಿ ಶಂಕರ್ ಕೂಡ ಆರ್ಸಿಬಿ ತಂಡವನ್ನು ಅಣಕಿಸಿದ್ದಾರೆ.
ಆರ್ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಗೆದ್ದು ಪ್ಲೇ-ಆಫ್ಗೆ ಅರ್ಹತೆ ಪಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಎಲಿಮಿನೇಟರ್ನಲ್ಲಿ ಆರ್ಸಿಬಿ ಸೋತ ನಂತರ ಸಿಎಸ್ಕೆ ಅಭಿಮಾನಿಗಳು ಬೆಂಗಳೂರು ತಂಡವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು. ಅಭಿಮಾನಿಗಳು ಮಾತ್ರವಲ್ಲ ಸಿಎಸ್ಕೆ ಆಟಗಾರರಾದ ದೀಪಕ್ ಚಹರ್ ಮತ್ತು ಪತಿರಾಣ ಕೂಡ ಟ್ರೋಲ್ ಮಾಡಿದರು. ಇದೀಗ ನಟಿ ಕಸ್ತೂರಿ ಶಂಕರ್ ಆರ್ಸಿಬಿ ವಿರುದ್ಧ ವ್ಯಂಗ್ಯವಾಡಿ, ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಕಸ್ತೂರಿ ಶಂಕರ್, ಆರ್ಸಿಬಿ ಕುರಿತ ಪೋಸ್ಟ್ ಒಂದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತನ್ನ ಪೋಸ್ಟ್ನಲ್ಲಿ ಬೆಂಗಳೂರು ದಂಡು (ಬೆಂಗಳೂರು ಕಂಟೋನ್ಮೆಂಟ್) ರೈಲು ನಿಲ್ದಾಣದ ನೇಮ್ ಬೋರ್ಡ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ಕಂಟೋನ್ಮೆಂಟ್ ಎಂಬ ಹೆಸರನ್ನು ಇಂಗ್ಲಿಷ್ನಲ್ಲಿ ಬೆಂಗಳೂರು ಕಾಂಟ್ ಎಂದು ಎಡಿಟ್ ಮಾಡಲಾಗಿದೆ. ಇದರರ್ಥ ಬೆಂಗಳೂರಿನಿಂದ ಆಗುವುದಿಲ್ಲ ಎಂದು. ಆರ್ಸಿಬಿ ಕೈಯಲ್ಲಿ ಆಗುವುದಿಲ್ಲ ಎನ್ನುವ ಅರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ.
ಆದರೆ, ವಾಸ್ತವವಾಗಿ ಈ ಪೋಸ್ಟ್ ಅನ್ನು ಚೆನ್ನೈ ಆಟಗಾರ ತುಷಾರ್ ದೇಶಪಾಂಡೆ ಹಂಚಿಕೊಂಡಿದ್ದರು. ಏಕೆಂದರೆ, ಚೆನ್ನೈ ಸೋಲಿನಿಂದ ತೀವ್ರ ನಿರಾಸೆಗೊಂಡಿದ್ದ ತುಷಾರ್ ದೇಶಪಾಂಡೆ, ಬೆಂಗಳೂರು ಸೋಲುವವರೆಗೂ ಕಾದು ನೋಡಿ, ನಂತರ ಈ ಫೋಟೋ ಶೇರ್ ಮಾಡಿದ್ದರು. ಈಗ ನಟಿ ಕಸ್ತೂರಿ ಶಂಕರ್ ಕೂಡ ಅದೇ ಚಿತ್ರವನ್ನು ನಕಲು ಮಾಡಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಕಸ್ತೂರಿ ಅವರ ಪೋಸ್ಟ್ ಅನ್ನು ಆರ್ಸಿಬಿ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಈ ಐಪಿಎಲ್ನಲ್ಲಿ ಆರ್ಸಿಬಿ, ಚೆನ್ನೈ ತಂಡವನ್ನು ಸೋಲಿಸಿದ ರೀತಿಯನ್ನು ಕೆಲವರು ಕಸ್ತೂರಿ ಅವರಿಗೆ ನೆನಪಿಸುತ್ತಿದ್ದಾರೆ. ಅಲ್ಲದೆ, ಫಿಕ್ಸಿಂಗ್ ಆರೋಪ ಹೊತ್ತುಕೊಂಡು ಚೆನ್ನೈ ತಂಡ ಎರಡು ವರ್ಷ ಬ್ಯಾನ್ ಆಗಿದ್ದನ್ನು ನೆನಪು ಮಾಡುತ್ತಿದ್ದಾರೆ. ಅಲ್ಲದೆ, ಕಸ್ತೂರಿ ಕುರಿತು ಕೆಲವು ಅಸಭ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
The locals have known for years ….
🤭😃#eesala #illa pic.twitter.com/gektBLqkFZ— Kasturi (@KasthuriShankar) May 23, 2024
ಕಸ್ತೂರಿ ಅವರ ಕುರಿತು
ಕಸ್ತೂರಿ ಶಂಕರ್ ಬಗ್ಗೆ ಹೇಳುವುದಾದರೆ, ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ರಾಜಕೀಯ ಹಾಗೂ ಸಿನಿಮಾಗೆ ಸಂಬಂಧಿಸಿದ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ. ಕಸ್ತೂರಿ ಅವರಿಗೆ ವಯಸ್ಸು 48 ಆದರೂ ಗ್ಲಾಮರ್ ಪ್ರದರ್ಶನ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಹೃದಯದ ಬಡಿತವನ್ನು ಹೆಚ್ಚಿಸುತ್ತಿರುತ್ತಾರೆ. (ಏಜೆನ್ಸೀಸ್)
ಸುಂದರ ಮಹಿಳೆಯರನ್ನು ಸಹ ಬಿಡುವುದಿಲ್ಲ! ಐಶ್ವರ್ಯಾ ರೈ ಬಗ್ಗೆ ಗಂಭೀರ ಆರೋಪ ಮಾಡಿದ ನಟಿ ಕಸ್ತೂರಿ