ಶಿವಮೊಗ್ಗ: ಅಥರ್ವ ಆಯುವೇದ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ 20ನೇ ವಾರ್ಷಿಕೋತ್ಸವ ಮತ್ತು ಆಯುರ್ವೇದಾಚಾರ್ಯ ಡಾ. ಎಂ.ಈಶ್ವರ ರೆಡ್ಡಿ ಅವರ 73ನೇ ಜನ್ಮದಿನೋತ್ಸವ ನಿಮಿತ್ತ ಆರೋಗ್ಯ ಮತ್ತು ಪಂಚಾಚಾರ್ಯ ಪಂಚಸೂತ್ರಗಳು ಕುರಿತ ಆಧ್ಯಾತ್ಮ ಪ್ರವಚನ ಡಿ.19ರಿಂದ 30ರವರೆಗೆ ವಿನೋಬನಗರ ಕಲ್ಲಳ್ಳಿಯ ಶಿವಗಂಗಾ ಯೋಗ ಕೇಂದ್ರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ವೈದ್ಯ ಡಾ. ಮಲ್ಲಿಕಾರ್ಜುನ ಡಂಬಳ ತಿಳಿಸಿದರು.
ವಾರಾಣಾಸಿಯ ಜಂಗಮವಾಡಿ ಮಠದ ಕಾಶಿ ಜಗದ್ಗುರು ಡಾ. ಶ್ರೀ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಶಿವಗಂಗಾ ಯೋಗ ಕೇಂದ್ರ, ವರ್ಲ್ಡ್ ವೈಡ್ ಹಾಲಿಡೇಸ್ ಸಹಯೋಗದಲ್ಲಿ ದ್ವಾದಶ ದಿನಗಳ ಪ್ರವಚನ ನೆರವೇರಲಿದೆ. 19ರಂದು ಸಂಜೆ 6ಕ್ಕೆ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಸಮಾರಂಭ ಉದ್ಘಾಟಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಕೆ.ಬಿ.ಅಶೋಕನಾಯ್ಕ, ಎಂಎಲ್ಸಿಗಳಾದ ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮುಖ್ಯ ಅತಿಥಿಗಳಾಗಿದ್ದು ಯೋಗಗುರು ಸಿ.ವಿ.ರುದ್ರಾರಾಧ್ಯ ಅಧ್ಯಕ್ಷತೆ ವಹಿಸುವರು. ಮುಖಂಡರಾದ ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ಪಿ.ದಿನೇಶ್, ಎಚ್.ಮಲ್ಲಿಕಾರ್ಜುನ ಸ್ವಾಮಿ, ಕೆ.ಇ.ಕಾಂತೇಶ್, ಡಾ. ಎಚ್.ವಿ.ಕೊಟ್ಟೂರೇಶ, ರುದ್ರಮುನಿ ಸಜ್ಜನ್, ಮಹಾಲಿಂಗಯ್ಯ ಶಾಸ್ತ್ರಿ, ಬಿ.ಎಂ.ಲೋಕೇಶಾರಾಧ್ಯ ಶಾಸ್ತ್ರಿ, ನಿವೃತ್ತ ಪ್ರಾಚಾರ್ಯ ವ್ನಿೇಶ್ವರಯ್ಯ ಸೋಲಾಪುರ ಪಾಲ್ಗೊಳ್ಳುವರು ಎಂದರು.
ಮುಖ್ಯವಾಗಿ ಆರೋಗ್ಯ ಸುಧಾರಣೆ ಸೇರಿದಂತೆ ಪ್ರತಿದಿನ ಸಂಜೆ 6ಕ್ಕೆ ವಿವಿಧ ವಿಷಯಗಳ ಕುರಿತು ಇಸ್ರೋ ವಿಜ್ಞಾನಿ ಡಾ. ಬಿ.ಎಚ್.ಎಂ.ದಾರುಕೇಶ, ಸಾವಯವ ಕೃಷಿ ತಜ್ಞೆ ಜಿ.ಎಂ.ಜ್ಯೋತಿ, ಆಯುರ್ವೇದ ವೈದ್ಯೆ ಡಾ. ಬಿ.ಸಿ.ಸುಮತಿ ಸೇರಿದಂತೆ ಹಲವು ಪರಿಣಿತರಿಂದ ಉಪನ್ಯಾಸ ನಡೆಯಲಿದ್ದು ಬಳಿಕ ಕಾಶಿ ಜಗದ್ಗುರುಗಳು ಆಶೀವರ್ಚನ ನೀಡುವರು. ಮೊದಲ ದಿನ ಆಸ್ಪತ್ರೆ ರಹಿತ ಜೀವನ ಪುಸ್ತಕ ಹಾಗೂ ಅಥರ್ವ ಆಯುರ್ಧಾಮ ದಿನದರ್ಶಿಕೆಯನ್ನು ಶ್ರೀಗಳು ಬಿಡುಗಡೆಗೊಳಿಸುವರು ಎಂದು ಹೇಳಿದರು.
30ರಂದು ಸಂಜೆ 6ಕ್ಕೆ ಸಮರೋಪ ಸಮಾರಂಭದಲ್ಲಿ ಎಡೆಯೂರಿನ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಡಾ. ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಬೀಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಮಳಲಿಮಠದ ಶ್ರೀ ನಾಗಭೂಷಣ ಸ್ವಾಮೀಜಿ, ಸಾಲೂರು ಹಿರೇಮಠದ ಶ್ರೀ ಗುರುಲಿಂಗಜಂಗಮ ಸ್ವಾಮೀಜಿ, ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗುರುಕುಟೀರದ ಶ್ರೀ ತೇಜಾನಂದ ಅವಧೂತರು ಜೀವ ಸಹಿತ ಸತ್ಸಂಗ ನಡೆಸಿಕೊಡುವರು. ಬಳಿಕ ಕಾಶಿ ಶ್ರೀಗಳಿಂದ ಪಂಚಾಚಾರ್ಯ ಪಂಚಸೂತ್ರಗಳು ಕುರಿತು ಆಶೀರ್ವಚನ ಇರಲಿದೆ ಎಂದರು.
ಶಿವಗಂಗಾ ಯೋಗ ಕೇಂದ್ರದ ಯೋಗಗುರು ಸಿ.ವಿ.ರುದ್ರಾರಾಧ್ಯ, ಬಿ.ಎಂ.ಲೋಕೇಶ್, ಆಡಳಿತಾಧಿಕಾರಿ ಡಾ. ಬಿ.ಎಂ.ಶಿವಲೀಲಾ, ಮಹಾಲಿಂಗಶಾಸ್ತ್ರಿ, ಜಗದೀಶ್ ಸುದ್ದಿಗೋಷ್ಠಿಯಲ್ಲಿದ್ದರು.