ಬೆಂಗಳೂರು: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಗಲಿಕೆಯಿಂದ ಇಡೀ ಕುಟುಂಬ ದುಃಖ ತಪ್ತವಾಗಿದೆ. ಸ್ಪಂದನಾ ನಿಧನರಾಗಿ ನಾಲ್ಕು ದಿನ ಕಳೆದಿರುವುದರಿಂದ ಮೂರು ದಿನದ ಕಾರ್ಯ ಮಾಡಿಲ್ಲ. ಆದರೆ ಐದು ದಿನದ ಕಾರ್ಯ ಮಾಡುವ ಬಗ್ಗೆ ಕುಟುಂಬಸ್ಥರು ನಿರ್ಧಾರ ತೆಗೆದುಕೊಂಡಿದ್ದಾರೆ.
ಹಾಗಾಗಿ ಇಂದು ಹರಿಶ್ಚಂದ್ರ ಘಾಟ್ ನಲ್ಲಿ ವಿಜಯ್ ರಾಘವೇಂದ್ರ ಹಾಗೂ ಕುಟುಂಬ ಹಾಲು, ತುಪ್ಪ ಬಿಟ್ಟಿದ್ದು ವಿಜಯ್ ಅವರ ಜೊತೆ ಸಹೋದರ ಶ್ರೀ ಮುರಳಿ, ತಂದೆ ಚಿನ್ನೇ ಗೌಡ್ರು , ಮಗ ಶೌರ್ಯ ಇದ್ದರು.
ಇಂದು ಮಧ್ಯಾಹ್ನವೇ ಕುಟುಂಬವು ಚಿತಾಭಸ್ಮ ವಿಸರ್ಜನೆ ಮಾಡಲಿದ್ದು, ಅಸ್ತಿ ಬಿಡಲು ಶ್ರೀರಂಗಪಟ್ಟಣಕ್ಕೆ ತೆರಳಲಿದೆ. 11ನೇ ದಿನದ ಕಾರ್ಯ ಸಹ ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ ಎನ್ನಲಾಗಿದೆ. ಗುರುವಾರ ಬಹುತೇಕ ಕುಟುಂಬ ಸದಸ್ಯರು ಜಕ್ಕೂರಿನ ವಿಜಯ್ ರಾಘವೆಂದ್ರ ನಿವಾಸಕ್ಕೆ ತೆರಳಿದ್ದರು. ಶಿವರಾಂ ಅವರ ನಿವಾಸಕ್ಕೆ ಅವರ ಸ್ನೇಹಿತರು ಹೋಗಿದ್ದರು ಎನ್ನಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ಸ್ನೇಹಿತರ ಜತೆಗೆ ಬ್ಯಾಂಕಾಕ್ ಪ್ರವಾಸಕ್ಕೆಂದು ಹೋದಾಗ ಸ್ಪಂದನಾ ಹೃದಯಾಘಾತವಾಗಿ ನಿಧನರಾಗಿದ್ದರು. ಆಗಸ್ಟ್ 8ರ ರಾತ್ರಿ ಥಾಯ್ಲೆಂಡ್ನಿಂದ ಸ್ಪಂದನಾ ಅವರನ್ನು ಬೆಂಗಳೂರಿಗೆ ತರಲಾಗಿತ್ತು. ಆ. 9 ರಂದು ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಆ ನಂತರ ಅವರನ್ನು ಹರಿಶ್ಚಂದ್ರ ಘಾಟ್ನಲ್ಲಿನ ವಿದ್ಯುತ್ ಚಿತಾಗಾರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಅಗ್ನಿ ಸ್ಪರ್ಶ ಮಾಡಲಾಯಿತು.