ಉಪ್ಪಳ (ಕಾಸರಗೋಡು ಜಿಲ್ಲೆ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಕರ್ನಾಟಕದೊಂದಿಗಿನ ಸಂಪರ್ಕವನ್ನು ಸಂಪೂರ್ಣ ಕಡಿದುಕೊಳ್ಳಲು ನಿರ್ಧರಿಸಿರುವ ಕೇರಳ ಸರ್ಕಾರ, ಗಡಿಯ ಎಲ್ಲ ಸಂಪರ್ಕ ರಸ್ತೆಗಳನ್ನು ಮುಚ್ಚಲು ನಿರ್ಧರಿಸಿದೆ. ಇತರ ರಾಜ್ಯಗಳಿಂದ ಕಾಸರಗೋಡು ಜಿಲ್ಲೆ ಮೂಲಕ ಕೇರಳಕ್ಕೆ ಬರುವವರಿಗೆ ಗಡಿಯ ತಲಪಾಡಿ ಚೆಕ್ಪೋಸ್ಟ್ ಮೂಲಕ ನೀಡಲಾಗುತ್ತಿದ್ದ ಪಾಸ್ ವ್ಯವಸ್ಥೆ ಜುಲೈ 4ರಿಂದ ಸ್ಥಗಿತಗೊಳ್ಳಲಿದೆ.
ಉದ್ಯೋಗ ನಿಮಿತ್ತ ಮಂಗಳೂರಿಗೆ ಬರುವವರಿಗೆ ಇನ್ನು ಪಾಸ್ ಸಿಗಲಾರದು. ಮಂಗಳವಾರವೇ ಕೇರಳ ಸರ್ಕಾರ ಗ್ರಾಮಾಂತರದ ಅಂತಾರಾಜ್ಯ ಗಡಿಗಳನ್ನು ಮುಚ್ಚುವ ಕಾರ್ಯ ಆರಂಭಿಸಿತ್ತು. ಗಡಿ ಗ್ರಾಮಗಳಲ್ಲಿ ಪೋಲೀಸರು ಹಾಗೂ ಆರೋಗ್ಯ ಇಲಾಖೆ ಈ ಚಟುವಟಿಕೆ ಚುರುಕುಗೊಳಿಸಿದ್ದು, ಕರ್ನಾಟಕದಿಂದ ಯಾರೊಬ್ಬರನ್ನೂ ಕೇರಳದೊಳಗೆ ಬಿಡಬಾರದೆಂದು ತಾಕೀತು ಮಾಡಿದ್ದಾರೆ. ಪ್ರಮುಖ ರಸ್ತೆಗಳನ್ನು ಮುಚ್ಚಿರುವುದರಿಂದ ಗಡಿ ಗ್ರಾಮಗಳ ಜನರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಮಂಗಳೂರಿಗೆ ಉದ್ಯೋಗ ನಿಮಿತ್ತ ತೆರಳುವವರು ಅತಂತ್ರರಾಗಿದ್ದಾರೆ.
ಇದನ್ನೂ ಓದಿ: ಅನಿಸಿಕೆ| ಮುಕ್ತಿಧಾಮಕ್ಕೊಂದು ಯುಕ್ತ ಸ್ಥಾನ ಅಗತ್ಯ
ಜು.4ರಿಂದ ಹೊಸತಾಗಿ ಪಾಸ್ ನೀಡಲಾಗುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಬಾಧಿತರ ಸಂಖ್ಯೆ ದಿಢೀರ್ ಏರಿಕೆ ಕಂಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
| ಡಾ.ಡಿ.ಸಜಿತ್ ಬಾಬು, ಕಾಸರಗೋಡು ಜಿಲ್ಲಾಧಿಕಾರಿ
ದಕ್ಷಿಣ ಕನ್ನಡದ ಪೆರುವಾಯಿ ಸಮೀಪದ ಬೆರಿಪದವು, ಕನ್ಯಾನ ಸಮೀಪದ ಪಾದೆಕಲ್ಲು, ಮುಗುಳಿ, ಪದ್ಯಾಣ ಸಂಪರ್ಕಿಸುವ ಪೊನ್ನೆಂಗಳ ಮತ್ತಿತರ ಗ್ರಾಮೀಣ ರಸ್ತೆಗಳನ್ನು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇತೃತ್ವದಲ್ಲಿ ಮಣ್ಣು ಹಾಕಿ ಬಂದ್ ಮಾಡಲಾಗಿದೆ. ಎಣ್ಮಕಜೆ ಗ್ರಾಪಂನ ಅಡ್ಕಸ್ಥಳ, ಸ್ವರ್ಗ, ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಕಿನ್ನಿಂಗಾರು, ನೆಟ್ಟಣಿಗೆ, ದೇಲಂಪಾಡಿಯ ಜಾಲ್ಸೂರು, ಕಲ್ಲಪ್ಪಳ್ಳಿ, ವರ್ಕಾಡಿ ಪಂಚಾಯಿತಿ ವ್ಯಾಪ್ತಿಯ ಆನೆಕಲ್ಲು, ತೌಡುಗೋಳಿ, ಪೈವಳಿಕೆಯ ಬೇಡಗುಡ್ಡೆ, ಸುಂಕದಕಟ್ಟೆ ಮೊದಲಾದೆಡೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.
ಈಗ ಕಾಸರಗೋಡು ಸರದಿ: ಲಾಕ್ಡೌನ್ ಆರಂಭದ ದಿನಗಳಲ್ಲಿ ಕಾಸರಗೋಡಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡಾಗ ದಕ್ಷಿಣ ಕನ್ನಡ ಜಿಲ್ಲೆ ಕೇರಳ ಸಂರ್ಪಸುವ ರಸ್ತೆಗಳನ್ನು ಮುಚ್ಚಿತ್ತು. ಇದೀಗ ಕಾಸರಗೋಡು ಜಿಲ್ಲಾಡಳಿತವೇ ರಸ್ತೆ ಮುಚ್ಚಿದೆ.