ಮಡಿಕೇರಿ: ರಿಯಾಲಿಟಿ ಶೋವೊಂದರದಲ್ಲಿ ಮೆಕ್ಯಾನಿಕ್ಗಳ ಕುರಿತು ಅವಹೇಳನ ಮಾಡಿರುವ ಆರೋಪದಡಿ ಖಾಸಗಿ ದೃಶ್ಯವಾಹಿನಿ, ಕಾರ್ಯಕ್ರಮದ ಆಯೋಜಕರು, ತೀರ್ಪುಗಾರರು ಹಾಗೂ ನಿರೂಪಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಡಿಕೇರಿ ಟೂ ವೀಲರ್ಸ್ ಮೆಕ್ಯಾನಿಕ್ಗಳು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಎಸ್.ಮಣಿ ದೇವರಾಜ್, ಮೆಕ್ಯಾನಿಕ್ಗಳು ಖಾಸಗಿ ದೃಶ್ಯ ವಾಹಿನಿಯೊಂದರಲ್ಲಿ ಪ್ರಸಾರವಾದ ರಿಯಾಲಿಟಿ ಶೋದಲ್ಲಿ ಮೆಕ್ಯಾನಿಕ್ಗಳ ಕುರಿತು ಕೀಳು ಮಟ್ಟದ ಸಂಭಾಷಣೆ ಬಳಕೆ ಮಾಡಲಾಗಿದೆ. ಯುವ ಪ್ರತಿಭೆಯೊಬ್ಬಳ ಮೂಲಕ ಮೂಲಕ ಸಂಭಾಷಣೆ ಹೇಳಿಸಲಾಗಿದ್ದು, ಇದು ಇಡೀ ಮೆಕಾನಿಕ್ ಸಮುದಾಯಕ್ಕೆ ನೋವನ್ನುಂಟು ಮಾಡಿದೆ. ಮೆಕಾನಿಕ್ಗಳನ್ನು ಪ್ರೇಮಿಸಿ ವಿವಾಹವಾದರೆ ಜೀವನದುದ್ದಕ್ಕೂ ಗ್ರೀಸ್ ತಿನ್ನಬೇಕಾಗುತ್ತದೆ ಎಂದು ಸಂಭಾಷಣೆ ಹೇಳುವ ಮೂಲಕ ಮೆಕಾನಿಕ್ಗಳನ್ನು ಕೀಳಾಗಿ ಕಾಣಲಾಗಿದೆ. ಅಲ್ಲದೆ ಈ ಅವಹೇಳನಾಕಾರಿ ಸಂಭಾಷಣೆಗೆ ಕಾರ್ಯಕ್ರಮದ ನಿರೂಪಕರು ಹಾಗೂ ತೀರ್ಪುಗಾರರು ಚಪ್ಪಾಳೆ ತಟ್ಟಿ ಹುರಿದುಂಬಿಸಿ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದರು.
ತೀರ್ಪುಗಾರರ ಸ್ಥಾನದಲ್ಲಿದ್ದ ಖ್ಯಾತ ವ್ಯಕ್ತಿಗಳು ಮೆಕಾನಿಕ್ಗಳನ್ನು ಅವಮಾನಿಸಿದಾಗ ವಿರೋಧಿಸದೆ ಪ್ರೋತ್ಸಾಹಿಸಿರುವುದು ವಿಷಾದನೀಯ ಮತ್ತು ಖಂಡನೀಯ. ಇಡೀ ವಿಶ್ವದ ಶೇ.೭೦ ರಷ್ಟು ಕಾರ್ಯಚಟುವಟಿಕೆಗಳು ಮೆಕ್ಯಾನಿಕ್ಗಳಿಂದಲೇ ನಡೆಯುತ್ತದೆ. ಇಂದು ದೇಶದ ವಿಜ್ಞಾನಿಗಳು ಚಂದ್ರಲೋಕವನ್ನು ತಲುಪಿದ್ದಾರೆ ಎಂದರೆ ಅದಕ್ಕೆ ಮೆಕಾನಿಕ್ಗಳೇ ಕಾರಣ. ಮೆಕಾನಿಕ್ಗಳನ್ನು ಮದುವೆಯಾದವರು ಯಾರೂ ಉಪವಾಸದಿಂದ ಬೀದಿ ಪಾಲಾಗಿಲ್ಲ. ಎಲ್ಲರೂ ಗೌರವಯುತವಾಗಿ ಬದುಕು ಸಾಗಿಸುತ್ತಿದ್ದಾರೆ.
ಮೆಕಾನಿಕ್ಗಳನ್ನು ಅವಮಾನಿಸಿರುವ ಮತ್ತು ಮೆಕಾನಿಕ್ಗಳ ವೃತ್ತಿ ಬದುಕಿಗೆ ಅಗೌರವ ತೋರಿರುವ ಕಾರ್ಯಕ್ರಮದ ಸಂಭಾಷಣೆಯ ವಿರುದ್ಧ ರಾಜ್ಯವ್ಯಾಪಿ ಮೆಕಾನಿಕ್ಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಮಡಿಕೇರಿ ಟೂ ವೀಲರ್ಸ್ ಮೆಕ್ಯಾನಿಕ್ಗಳಾದ ನಾವುಗಳು ಕೂಡ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದೇವೆ. ಅದೇ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಕ್ಷಮೆ ಕೇಳದಿದ್ದಲ್ಲಿ ರಾಜ್ಯಾದಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಎಸ್ಪಿ ಗೆ ದೂರು ನೀಡುವ ಸಂದರ್ಭ ಮೆಕಾನಿಕ್ಗಳಾದ ಬಿ.ಯು.ಅನಂತ್, ಎಸ್.ಬಿ.ಕಿರಣ್, ಚಂದ್ರು, ಬಿ.ಎಸ್.ಗಣೇಶ್ ಹಾಗೂ ಪಿ.ಎಂ.ಉಮ್ಮರ್ ಉಪಸ್ಥಿತರಿದ್ದರು.