ಅರ್ಜುನ ಪ್ರಶಸ್ತಿ ರೇಸ್ನಲ್ಲಿರುವ ವಿದ್ಯಾ ಪಿಳ್ಳೆ , ಅದಿತಿ ಅಶೋಕ್, ಐಶ್ವರ್ಯಾ ಪಿಸ್ಸೆ
ಬೆಂಗಳೂರು: ಕರ್ನಾಟಕದ ಸ್ನೂಕರ್ ಆಟಗಾರ್ತಿ ವಿದ್ಯಾ ಪಿಳ್ಳೆ , ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಮತ್ತು ಆಫ್-ರೋಡ್ ರೇಸರ್ ಐಶ್ವರ್ಯಾ ಪಿಸ್ಸೆ ಈ ಬಾರಿ ಅರ್ಜುನ ಪ್ರಶಸ್ತಿ ಸ್ಪರ್ಧೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ಯದ ಬೈಕ್ ರೇಸರ್ ಸಿಎಸ್ ಸಂತೋಷ್ ಹೆಸರು ಕೂಡ ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡಿದೆ. ಇನ್ನು ಹಾಕಿ ಕ್ರೀಡೆಯಲ್ಲಿ ರಾಜ್ಯದ ಕೋಚ್ಗಳಾದ ಬಿಜೆ ಕಾರ್ಯಪ್ಪ ಮತ್ತು ಜುಡ್ ಫೆಲಿಕ್ಸ್ ಹೆಸರು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸುಗೊಂಡಿದೆ.
ಇದನ್ನೂ ಓದಿ: ಏಷ್ಯಾಡ್ ಪದಕ ವಿಜೇತೆ ಈಗ ಕರೊನಾ ವಾರಿಯರ್!
ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಹಲವು ಬಾರಿ ಪದಕ ಜಯಿಸಿರುವ ಚೆನ್ನೈ ಮೂಲದ ವಿದ್ಯಾ ಪಿಳ್ಳೆ ಈ ಹಿಂದೆ ಕೆಲ ಬಾರಿ ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡಿದ್ದರೂ ನಿರಾಸೆ ಅನುಭವಿಸಿದ್ದರು. 2016ರ ರಿಯೋ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದ 22 ವರ್ಷದ ಅದಿತಿ ಅಶೋಕ್ ಭಾರತೀಯ ಗಾಲ್ಫ್ ಯೂನಿಯನ್ನಿಂದ ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡಿದ್ದಾರೆ. ಬೆಂಗಳೂರಿನ 24 ವರ್ಷ ಬೈಕ್ ರೇಸರ್ ಐಶ್ವರ್ಯಾ ಪಿಸ್ಸೆ 2018ರಲ್ಲಿ ವಿಶ್ವ ರ್ಯಾಲಿ ಜಯಿಸಿದ ಭಾರತದ ಮೊದಲ ಮಹಿಳೆ ಎನಿಸಿದ್ದರು.
ಇದನ್ನೂ ಓದಿ: ಧೋನಿ ಸೋಷಿಯಲ್ ಮೀಡಿಯಾದಿಂದ ದೂರ, ಸಾಕ್ಷಿ ಬಳಿ ಇದೆ ಸಿಂಪಲ್ ಕಾರಣ!
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಶಿಫಾರಸುಗಳನ್ನು ಸಲ್ಲಿಸುವ ಅವಧಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಇತ್ತೀಚೆಗೆ ಜೂನ್ 22ರವರೆಗೆ ವಿಸ್ತರಿಸತ್ತು. ಕರೊನಾ ವೈರಸ್ ಹಾವಳಿಯಿಂದಾಗಿ ಈ ಬಾರಿ ಒಂದು ತಿಂಗಳು ತಡವಾಗಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕ್ರಿಯೆ ಆರಂಭಗೊಂಡಿದೆ. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29ರಂದು ರಾಷ್ಟ್ರಪತಿಯಿಂದ ಪ್ರದಾನವಾಗಲಿವೆ.