ಮಂಗಳೂರು: ಕರ್ಣಾಟಕ ಬ್ಯಾಂಕ್ನ ತಲಾ 10 ರೂ. ಮುಖಬೆಲೆಯ 3,34,00,132 ಈಕ್ವಿಟಿ ಷೇರುಗಳನ್ನು ಎಚ್ಡಿಎಫ್ಸಿ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, ಬಜಾಜ್ ಅಲಯಾನ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, ಕ್ವಾಂಟ್ ಮ್ಯೂಚುಯಲ್ ಫಂಡ್, ಭಾರ್ತಿ ಆಕ್ಸ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, ಬಜಾಜ್ ಅಲಯಾನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ಗಳಿಗೆ (ಪ್ರಸ್ತಾಪಿತ ಹಂಚಿಕೆದಾರರು) ಪ್ರತಿ ಷೇರಿಗೆ 239.52 ರೂ. ಬೆಲೆಯಲ್ಲಿ (ಪ್ರತಿ ಷೇರಿಗೆ 229.52 ರೂ. ಪ್ರೀಮಿಯಂ ಸೇರಿದಂತೆ) ಆದ್ಯತೆಯ ಆಧಾರದ ಮೇಲೆ ಷೇರು ವಿತರಿಸಲು ನಿರ್ದೇಶಕ ಮಂಡಳಿ ನಿರ್ಧರಿಸಿದೆ.
ಇದರಿಂದ ಒಟ್ಟು ರೂ. 799,99,99,616.64 (ಏಳುನೂರ ತೊಂಬತ್ತೊಂಬತ್ತು ಕೋಟಿ ತೊಂಬತ್ತೊಂಬತ್ತು ಲಕ್ಷ ತೊಂಬತ್ತೊಂಬತ್ತು ಸಾವಿರದ ಆರುನೂರ ಹದಿನಾರು ರೂಪಾಯಿ ಮತ್ತು ಅರವತ್ತನಾಲ್ಕು ಪೈಸೆ) ಬಂಡವಾಳ ಸಂಗ್ರಹವಾಗಲಿದೆ. ಈ ಪ್ರಾಶಸ್ತ್ಯದ ಷೇರು ಹಂಚಿಕೆಗಾಗಿ ಬ್ಯಾಂಕ್ ತನ್ನ ಷೇರುದಾರರಿಂದ ಶೇ.99.79 ಅನುಕೂಲಕರ ಮತಗಳನ್ನು ಪಡೆದುಕೊಂಡಿದೆ ಎಂದು ಬ್ಯಾಂಕ್ ಪ್ರಕಟನೆ ತಿಳಿಸಿದೆ.
ಇಂದು ನಡೆದ ಮಂಡಳಿ ಸಭೆಯಲ್ಲಿ ಐದು ಪ್ರಮುಖ ಸಾಂಸ್ಥಿಕ ಹೂಡಿಕೆದಾರರಿಗೆ ಆದ್ಯತೆಯ ಆಧಾರದ ಷೇರು ವಿತರಿಸಿ ಮಾತನಾಡಿದ ಬ್ಯಾಂಕ್ನ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್ ಎಚ್, 800 ಕೋಟಿ ರೂ.ಗಳ ಯಶಸ್ವಿ ಬಂಡವಾಳ ಸಂಗ್ರಹಣೆಯನ್ನು ಪೂರ್ಣಗೊಳಿಸಿದಕ್ಕಾಗಿ ನಾವು ಸಂತೋಷಪಡುತ್ತೇವೆ. ಇದು ಬ್ಯಾಂಕಿನ ಪರಿವರ್ತನೆಯ ಪ್ರಯಾಣದಲ್ಲಿ ಪ್ರಮುಖ ಹೆಜ್ಜೆೆ. ನಮ್ಮ ಎಲ್ಲ ಅಭಿವೃದ್ಧಿ ಚಟುವಟಿಕೆಗಳಿಗೆ ಈ ಬಂಡವಾಳದ ಬೆಳವಣಿಗೆ ಅನುಕೂಲವಾಗಲಿದೆ. ಈ ಬಂಡವಾಳದ ಒಳಹರಿವು ಬ್ಯಾಂಕಿನ ಪ್ರಯಾಣದ ಪ್ರಮುಖ ಘಟ್ಟವಾಗಿದೆ ಎಂದರು.
ಅಭಿವೃದ್ಧಿಯ ಪಯಣಕ್ಕೆ ವೇಗ
ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಮಾತನಾಡಿ, ಈ ಕಾರ್ಯಕ್ಕೆ ಷೇರುದಾರರು ಅನುಮೋದಿಸಿರುವುದು ಬ್ಯಾಂಕಿನ ಪ್ರಯಾಣದಲ್ಲಿ ಪ್ರಮುಖವಾಗಿದೆ. ಬ್ಯಾಂಕಿನ ಅಭಿವೃದ್ಧಿಯ ಪಯಣ ಬಂಡವಾಳ ಹೆಚ್ಚಳದಿಂದ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಬ್ಯಾಂಕಿನ ವ್ಯಾಪ್ತಿ ವಿಸ್ತರಿಸಲು, ಡಿಜಿಟಲ್ ರೂಪಾಂತರ ಅಳವಡಿಸಿಕೊಳ್ಳಲು ಮತ್ತು ನಮ್ಮ ತಾಂತ್ರಿಕ ಸಾಮರ್ಥ್ಯ ಹೆಚ್ಚಿಸಲು, ಪಾಲುದಾರಿಕೆಗಳನ್ನು ಬೆಂಬಲಿಸಲು, ಎಲ್ಲ ಷೇರುದಾರರಿಗೆ ಮೌಲ್ಯ ತಲುಪಿಸಲು ಹಾಗೂ ನಮ್ಮ ಮಹತ್ವಾಕಾಂಕ್ಷೆಗಳನ್ನು ಉತ್ತೇಜಿಸಲು ಇದರಿಂದ ನೆರವಾಗಲಿದೆ ಎಂದು ಹೇಳಿದರು.