ಬೆಂಗಳೂರು: ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರ ಈಗಾಗಲೇ ರಾಜ್ಯ ಸೇರಿ ವಿದೇಶಗಳಲ್ಲಿ ಬಿಡುಗಡೆಯಾಗಿದೆ. ಇಂಡಿಯಾ ವರ್ಸಸ್ ಇಂಗ್ಲೆಂಡ್ ಬಿಡುಗಡೆಗೆ ಕತಾರ್ ರಾಜಧಾನಿ ದೋಹಾ ನಗರಕ್ಕೆ ನಾಳೆ (ಫೆ.21ರಂದು) ನಾಗತಿಹಳ್ಳಿ ಚಂದ್ರಶೇಖರ್ ತೆರಳಿದ್ದಾರೆ.
ದೋಹಾ ನಗರದಲ್ಲಿ ಚಲನಚಿತ್ರದ ಬಿಡುಗಡೆ ಜತೆಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಿರ್ದೇಶಕರು ಚಿತ್ರದ ಬಗ್ಗೆ, ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಇದೇ ವೇಳೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಸ್ವೀಕರಿಸಲಿದ್ದಾರೆ.
‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರವು ವಸಿಷ್ಠ ಸಿಂಹ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ನಟಿಸಿದ ಮೊದಲ ಸಿನಿಮಾ. ಅವರಿಗೆ ನಾಯಕಿಯಾಗಿ ಮಾನ್ವಿತಾ ಕಾಮತ್ ನಟಿಸಿದ್ದು, ಮಿಕ್ಕಂತೆ ಅನಂತನಾಗ್, ಸುಮಲತಾ ಅಂಬರೀಷ್, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ ಅವರ ಪುತ್ರಿ ಕನಸು ಬರೆದಿರುವ ‘ಅಕ್ಷಾಂಶ-ರೇಖಾಂಶ’ ಎಂಬ ಕಾದಂಬರಿಯನ್ನು ಈ ಚಿತ್ರ ಆಧರಿಸಿದೆ. ಆ ಕಥೆಯನ್ನು ಮೂಲವಾಗಿಟ್ಟುಕೊಂಡು ಅದಕ್ಕೆ ಪೂರಕ ಚಿತ್ರಕಥೆ, ಸಂಭಾಷಣೆ ರಚಿಸಿ ಸಿನಿಮಾ ಆಗಿಸಿದ್ದಾರೆ ನಿರ್ದೇಶಕರು.