ಬೆಳಗಾವಿ: ಮಾಜಿ ಸಿಎಂ ಬಂಗಾರಪ್ಪ ಕುಟುಂಬವನ್ನು ಒಂದಾಗಿಸಲು ನಾನ್ಯಾರು, ನಾನು ಅವರ ಮನೆಯ ಅಳಿಯ ಅಷ್ಟೇ, ಮಗನಲ್ಲ ಎಂದು ನಟ ಶಿವರಾಜಕುಮಾರ್ ಹೇಳಿದ್ದಾರೆ.
ಬಿಜೆಪಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರು ಚುನಾವಣೆ ಪ್ರಚಾರಕ್ಕೆ ಬರ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ಅದೆಲ್ಲವೂ ಗೊತ್ತಿಲ್ಲ ಸರ್ ನನಗೆ ಎಂದು ತಿಳಿಸಿದರು. ಬಂಗಾರಪ್ಪ ಕುಟುಂಬ ಒಂದಾಗಿಸಲು ಶಿವಕುಮಾರ್ ಮುಂದಾಗುತ್ತಿಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೋಡಿ ಅವರನ್ನ ಒಂದು ಮಾಡೋಕೆ ನಾನ್ಯಾರು. ಅವರಾಗಿಯೇ ಒಂದಾಗಬೇಕು ಅಷ್ಟೇ ನಾನೇನು ಮಾಡಕ್ಕಾಗಲ್ಲ. ನಾನು ಆ ಮನೆಯ ಅಳಿಯನೇ ಹೊರತು ಅವರ ಮನೆ ಮಗನಲ್ಲ ಎಂದು ಹೇಳಿದ್ದಾರೆ..
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಪತ್ನಿ, ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್ ಅವರಿಗೆ ಈ ಬಾರಿ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಪಕ್ಷವು ಗೀತಾ ಶಿವರಾಜ್ಕುಮಾರ್ ಅವರನ್ನು ತಮ್ಮ ಪಕ್ಷದಿಂದ ಕಣಕ್ಕಿಳಿಸಲು ನಿರ್ಧಾರ ಮಾಡಿದೆ. 10 ವರ್ಷಗಳ ನಂತರ ಪುನಃ ಚುನಾವಣಾ ಅಖಾಡಕ್ಕೆ ಗೀತಾ ಇಳಿಯುತ್ತಿದ್ದಾರೆ. ಈ ಬಗ್ಗೆ ಪತಿ ಶಿವರಾಜ್ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪತ್ನಿ ಪರವಾಗಿ ಚುನಾವಣಾ ಪ್ರಚಾರಕ್ಕೂ ತೆರಳುವುದಾಗಿ ಹೇಳಿದ್ದಾರೆ.
ಸ್ಟಾರ್ ನಟರು ಚುನಾವಣಾ ಪ್ರಚಾರಕ್ಕೆ ಬರ್ತಾರಾ?: ಸ್ಟಾರ್ ನಟರು ಚುನಾವಣಾ ಪ್ರಚಾರಕ್ಕೆ ಬರ್ತಾರಾ? ಎಂಬ ಪ್ರಶ್ನೆಗೆ, ಇನ್ನೂ ನಾವು ಯಾರಿಗೂ ತೊಂದರೆ ಕೊಡುವುದಕ್ಕೆ ಹೋಗಿಲ್ಲ. ಈ ಬಾರಿ ಬಿಸಿಲು ಜಾಸ್ತಿಯಿದೆ, ಅವರು ಪಾಪ ಒತ್ತಡದಿಂದ ಚುನಾವಣಾ ಪ್ರಚಾರಕ್ಕೆ ಬರಬಾರದು. ನಾನು ಕರೆದ್ರೆ ಬರ್ತಾರೆ. ಹಾಗಂತ ಅವರನ್ನು ಕರೆಯುವುದಕ್ಕೆ ಹೋಗಬಾರದು. ನಮ್ಮ ನಟರಿಗೆ ಯಾವಾಗಲೂ ಆಯ್ಕೆ ಕೊಡಬೇಕು. ಇರೋ ಪ್ರೀತಿ ವಿಶ್ವಾಸ ಹಾಗೆಯೇ ಉಳಿಸಿಕೊಳ್ಳಬೇಕು ಎಂದರು.
ಪೂರ್ತಿ ಚುನಾವಣೆಯಲ್ಲಿ ತೊಡಗಿಸಿಕೊಳ್ಳುತ್ತೇನೆ: ಲೋಕಸಭೆ ಚುನಾವಣೆ ಸಿದ್ಧತೆ ನಡೆಯುತ್ತಿದೆ. ಯಾವಾಗಿಂದ ಚುನಾವಣಾ ಪ್ರಚಾರಕ್ಕೆ ಹೋಗಬೇಕು ಅನ್ನೋದು ತೀರ್ಮಾನ ಆಗಿಲ್ಲ. ಯಾವಾಗ ಹೋಗಬೇಕು ಅವಾಗ ಹೋಗ್ತೀನಿ. ಈ ಬಾರಿ ಪೂರ್ತಿ ಚುನಾವಣೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಗೀತಾ ಸಂಸದರಾಗಬೇಕೆಂದೇ ಚುನಾವಣೆಗೆ ಬಂದಿರೋದು ಎಂದು ಶಿವರಾಜ್ಕುಮಾರ್ ಸ್ಪಷ್ಟಪಡಿಸಿದರು.
ಜೀವನದಲ್ಲಿ ಯಾವಾಗಲೂ ಕಾನ್ಫಿಡೆಂಟ್ ಆಗಿ ಇರಬೇಕು. ಇದು ಎಲೆಕ್ಷನ್ ಅಷ್ಟೇ, ಅದನ್ನು ನಾವೆಲ್ಲರೂ ಎದುರಿಸಬೇಕು, ಎದುರಿಸುತ್ತೇವೆ. ಮನುಷ್ಯ ಬದುಕಿರುವುದೇ ಭರವಸೆ, ನಂಬಿಕೆ ಮೇಲೆ. ಎಲ್ಲರೂ ಗೆಲ್ಲುತ್ತೇವೆ ಅಂತಾನೇ ಹೋಗೋದಲ್ವಾ? ರೇಸ್ ಹೋಗುವವರು ಗೆಲ್ಲುತ್ತೇನೆ ಅಂತಾನೇ ಹೋಗೋದು. ಸೋಲುತ್ತೇನೆ ಅಂತ ಯಾರೂ ಹೋಗಲ್ಲ. ಅಖಾಡದಲ್ಲಿ ಯಾರು ಬಂದ್ರೆ ಏನು? ಒಂದೇ ಸಲಕ್ಕೆ ಸ್ಟಾರ್ ಆಗೋಕೆ ಆಗಲ್ಲ. ನಿಧಾನಕ್ಕೆ ಹೆಜ್ಜೆ ಇಡಬೇಕು.