ಕನಕಗಿರಿ: ಪಟ್ಟಣ ಠಾಣಾ ವ್ಯಾಪ್ತಿಗೆ ಒಳಪಡುವ ಗಂಗಾವತಿ ತಾಲೂಕಿನ ವಿಠಲಾಪುರದ ಕೆರೆ ತುಂಬಿಸುವ ಯೋಜನೆಗಾಗಿ ಚಿಕ್ಕಮಾದಿನಾಳ ಬಳಿ ಅಳವಡಿಸಿದ್ದ ಪೈಪ್ಗಳನ್ನು ಜೆಸಿಬಿಯಿಂದ ತೆರವುಗೊಳಿಸಿದ ರೈತನ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.
ವಿಠಲಾಪುರ ಕೆರೆಗೆ 2018-19ನೇ ಸಾಲಿನಲ್ಲಿ ಕುಡಿವ ನೀರು ತುಂಬಿಸುವ ಯೋಜನೆ ಮಂಜೂರಾಗಿದೆ. ಕಾಮಗಾರಿಯ ಟೆಂಡರ್ ಅನ್ನು ಬಿ.ಮಹದೇವಪ್ಪ ಎನ್ನುವವರು ಪಡೆದಿದ್ದು, ಎರಡು ವರ್ಷಗಳಿಂದ ಕೆಲಸ ನಡೆದಿದೆ.
ಇದನ್ನೂ ಓದಿ: 142 ಕೆರೆಗಳನ್ನು ಪುನಶ್ಚೇತನಗೊಳಿಸಿದ ಇಂಜಿನಿಯರ್; 15 ವರ್ಷಗಳಿಂದ ಒಣಗಿದ್ದ ಕೆರೆಯಲ್ಲೂ ನೀರು!
ಯೋಜನಾ ಪತ್ರದಲ್ಲಿರುವಂತೆ ಚಿಕ್ಕಮಾದಿನಾಳ ಸೀಮಾದಲ್ಲಿರುವ ಸಂಪಿನಿಂದ ವಿಠಲಾಪುರ ಕೆರೆಗೆ ಏಳು ಕೊಳವೆ ಮಾರ್ಗವನ್ನು ಮಾಡಿದ್ದಾರೆ. ಅದರಂತೆ ಚಿಕ್ಕ ಮಾದಿನಾಳ ಸೀಮಾದ ಸರ್ವೇ ನಂಬರ್ 2ರಲ್ಲಿ ಯೋಜನೆಯ ಪೈಪ್ಗಳನ್ನು ಜೋಡಿಸಿದ್ದಾರೆ. ಅದಕ್ಕೆ ಜಮೀನಿನ ಮಾಲೀಕ ಗ್ರಾಮದ ಹೊನ್ನಪ್ಪ ಕರಡಿಗುಡ್ಡ ಏ.12ರಂದು ಸಂಜೆ ಜೆಸಿಬಿಯಿಂದ ಪೈಪ್ಲೈನ್ ಕಿತ್ತು ಹಾಕಿದ್ದಾರೆ.
ಅದೇ ಸಮಯದಲ್ಲಿ ಪೈಪ್ಲೈನ್ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ಸಣ್ಣ ನೀರಾವರಿ ಇಲಾಖೆಯ ಎಇ ಸೆಲ್ವಕುಮಾರ್ ಪ್ರಶ್ನಿಸಿದ್ದಾರೆ. ಅದಕ್ಕೆ ರೈತ ಯಾರನ್ನು ಕೇಳಿ ಹೊಲದಲ್ಲಿ ಪೈಪ್ಲೈನ್ ಮಾಡಿರಿ? ಎಂದು ಹೇಳಿ ತೆರಳಿದ್ದಾರೆ.
ಪೈಪ್ ಹಾಳು ಮಾಡಿದ್ದರಿಂದ 3 ಲಕ್ಷ ರೂ.ನಷ್ಟ
ಈ ಕುರಿತು ಸೆಲ್ವಕುಮಾರ್, ಮೇಲಧಿಕಾರಿಗಳಿಗೆ ಮಾಹಿತಿ ನೀಡುವುದರ ಜತೆಗೆ ಪೈಪ್ ಹಾಳು ಮಾಡಿದ್ದರಿಂದ 2-3 ಲಕ್ಷ ರೂ.ನಷ್ಟವಾಗಿದೆ ಎಂದು ರೈತ ಹೊನ್ನಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಪಿಐ ಜಗದೀಶ್ ಕೆಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.