ಕಂಪ್ಲಿ: ಇಲ್ಲಿನ ಶ್ರೀವಾಸವಿ ಕನ್ನಡ ಕಿರಿಯ ಪ್ರಾಥಮಿಕ ಅನುದಾನಿತ ಶಾಲೆ ವಿದ್ಯಾರ್ಥಿಗಳು ಸೋಮವಾರ ಪೇಟೆ ಪ್ರದೇಶದ ಬೀದಿಬದಿ ವ್ಯಾಪಾರಿಗಳ ಬಳಿ ತೆರಳಿ ತಾವೇ ಖುದ್ದು ತಯಾರಿಸಿದ ಶುಭಾಶಯ ಪತ್ರ ನೀಡಿ ಹೊಸ ವರ್ಷದ ಶುಭ ಕೋರಿದರು.
ಮುಖ್ಯಶಿಕ್ಷಕ ರಾಜು ಬಿಲಂಕರ್ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಪಟ್ಟಣದ 60ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳನ್ನು ಖುದ್ದಾಗಿ ಭೇಟಿ ಮಾಡಿ, ಹೊಸವರ್ಷದ ಶುಭಾಶಯ ಕೋರಿದ್ದಾರೆ ಎಂದರು. ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಡಿ.ಶ್ರೀಧರಶ್ರೇಷ್ಠಿ, ಸಹ ಶಿಕ್ಷಕರಾದ ಬಿ.ಗಾಯತ್ರಿ, ವಿ.ಶಿಲ್ಪಾ, ಜಂಬಯ್ಯ, ಎಂ.ಉಷಾ ಇತರರಿದ್ದರು.