ಕಂಪ್ಲಿ: ತಾಲೂಕಿನಲ್ಲಿ ಶನಿವಾರ ಹಾಗೂ ಭಾನುವಾರ ಜಿಟಿಜಿಟಿ ಮಳೆಯಾಗಿದ್ದು, ಭತ್ತದ ಕೊಯ್ಲಿಗೆ ಅಡ್ಡಿಯಾಗಿದೆ.
ತುಂಗಭದ್ರಾ ನದಿ ಪಾತ್ರದ ಸುಮಾರು 2500 ಹೆಕ್ಟೇರ್ನಲ್ಲಿ ಬೆಳೆದ ಭತ್ತ ಕೊಯ್ಲಿಗೆ ಬಂದಿದೆ. ಆದರೆ, ಮಳೆಯಿಂದ ಸಮಸ್ಯೆಯಾಗಿದೆ. ಇದರಿಂದ ಕೊಯ್ಲು ಯಂತ್ರದ ಬಾಡಿಗೆ ಅವಧಿ ಹೆಚ್ಚಾಗಿ ದರವೂ ಹೆಚ್ಚಾಗಲಿದೆ. ಮಳೆಗೆ ಕಾಳು ಉದುರುವ, ಬೆಳೆ ನೆಲಕಚ್ಚುವ ಸಂಭವವಿದೆ. ಈಗಾಗಲೇ ಕೊಯ್ಲು ಮಾಡಿದ ಭತ್ತವನ್ನೂ ಒಣಗಿಸುವುದು ಕಷ್ಟವಾಗಿದೆ.
ತಾಲೂಕಿನ ಸುಮಾರು 15 ಸಾವಿರ ಹೆಕ್ಟೇರ್ನಷ್ಟು ಪ್ರದೇಶದಲ್ಲಿ ಬೆಳೆದ 1010, ಆರ್ಎನ್ಆರ್, ಸೋನಾ ಮಸೂರಿ ತಳಿಗಳ ಭತ್ತ ಕೆಲ ಭಾಗದಲ್ಲಿ ತೆನೆ ಬಿಡುವ, ಕೆಲ ಪ್ರದೇಶಗಳಲ್ಲಿ ಗುನ್ನೆ ಒಡೆವ ಹಂತದಲ್ಲಿದ್ದು, 30ರಿಂದ 60 ದಿನದೊಳಗೆ ಕೊಯ್ಲಿಗೆ ಬರಲಿವೆ. ಆದರೆ, ಜಿಟಿಜಿಟಿ ಮಳೆ ಭತ್ತಕ್ಕೆ ಕಣೆ ಕೀಟ ಬಾಧೆ, ದಂಡಾಣು ಚುಕ್ಕೆ ರೋಗ, ಬೊಡ್ಡೆ ಕೊಳೆ ರೋಗ ತಗಲುವ ಆತಂಕವಿದೆ.
ಹೈವೋಲ್ಟೇಜ್ನಿಂದ ಟಿವಿಗಳಿಗೆ ಹಾನಿ: ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಮಳೆ ಜತೆ ಬಿರುಗಾಳಿ ಬಿಸಿದ್ದರಿಂದ ವಿವಿಧೆಡೆ ಟಿಸಿಗಳು ಶಾರ್ಕ್ಸರ್ಕ್ಯೂಟ್ ಆಗಿವೆ. ಹೈವೋಲ್ಟೇಜ್ನಿಂದ ಕೆಲ ಮನೆಗಳಲ್ಲಿ ಟಿವಿಗಳು ಸುಟ್ಟಿವೆ. ಕೆಲವೆಡೆ ಸೆಟ್ಅಪ್ ಬಾಕ್ಸ್ ಮತ್ತು ಪವರ್ ಅಡಾಪ್ಟರ್ಗಳು ಹಾಳಾಗಿರುವುದು ವರದಿಯಾಗಿದೆ. ಹಬೊ ಹಳ್ಳಿಯಲ್ಲಿ 41.8 ಮಿಮೀ, ಹಂಪಸಾಗರ 42.2, ಕೋಗಳಿ 45, ಮಾಲವಿ 38.2, ತಂಬ್ರಹಳ್ಳಿ 34.4 ಮಿಲಿ ಮೀಟರ್ ಮಳೆಯಾಗಿದೆ.