ಕಂಪ್ಲಿ: ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀಲಕ್ಷ್ಮೀವೆಂಕಟರಮಣ ಮತ್ತು ಶನೈಶ್ಚರ ಪ್ರತಿಷ್ಠಾಪನಾ ಚತುರ್ದಶ ವರ್ಧಂತ್ಯುತ್ಸವ ಗುರುವಾರ ಶ್ರದ್ಧಾಭಕ್ತಿಗಳಿಂದ ಜರುಗಿತು.
ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಲಕ್ಷ್ಮೀ ವೆಂಕಟರಮಣ, ಶನೈಶ್ಚರ ದೇವರು ಪ್ರತಿಷ್ಠಾಪನೆಗೊಂಡು 40 ವರ್ಷಗಳಾಗಿದ್ದು ಲಕ್ಷಾಂತರ ಭಕ್ತರು ದರ್ಶನ ಪಡೆಯುವ ಮೂಲಕ ಇಷ್ಟಾರ್ಥ ಸಿದ್ಧಿಸಿಕೊಂಡಿದ್ದಾರೆ. ನಂಬಿದ ದೈವವನ್ನು ಅನನ್ಯ ಭಕ್ತಿಗಳಿಂದ ಆರಾಧಿಸಿದಲ್ಲಿ ಇಷ್ಟಾರ್ಥ ಸಂಕಲ್ಪಗಳು ಈಡೇರಲಿವೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕೃತಿ, ಸಂಸ್ಕಾರ ಮತ್ತು ಮಾನವೀಯತೆಗಳನ್ನು ಕಲಿಸುವಲ್ಲಿ ತಾಯಂದಿರು ಮುಂದಾಗಬೇಕು ಎಂದರು.
ವರ್ಧಂತಿ ನಿಮಿತ್ತ ದೇವಸ್ಥಾನದಲ್ಲಿ ಪಂಚಾಮೃತ, ಅಷ್ಟೋತ್ತರ ಸಹಸ್ರನಾಮ ಅಭಿಷೇಕ, ಗಣಪತಿ ಆದಿತ್ಯಾದಿ ನವಗ್ರಹಸಹಿತ ಶ್ರೀಸೂಕ್ತ, ಪುರುಷ ಸೂಕ್ತ, ಶ್ರೀ ಶನೈಶ್ಚರ ಮಹಾಮೃತ್ಯುಂಜಯ ಹೋಮ, ಅನ್ನಸಂತರ್ಪಣೆ ಸೇರಿ ವಿವಿಧ ಕಾರ್ಯಕ್ರಮ ಜರುಗಿದವು. ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ, ಭವ್ಯಾ ವಿಷ್ಣುರಾಜ್ ಇದ್ದರು.