ವಸಿಷ್ಠ ಸಿಂಹ ಅಭಿನಯಿಸಿರುವ ‘ಕಾಲಚಕ್ರ’ ಚಿತ್ರವು ಇಷ್ಟರಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್ಡೌನ್ನಿಂದಾಗಿ, ‘ಕಾಲಚಕ್ರ’ವೂ ನಿಂತಿತ್ತು. ಇದೀಗ ಮತ್ತೆ ಸುತ್ತುವುದಕ್ಕೆ ಶುರುವಾಗಿದೆ.
ಇದನ್ನೂ ಓದಿ: ರಣವೀರ್ ಪ್ರೊಡಕ್ಷನ್ ಕಂಪನಿ ಹೆಸರು ಕೇಳಿದ್ರೆ ಶಾಕ್ ಆಗ್ತೀರ!
ಹೌದು, ಕಳೆದ ನಾಲ್ಕು ತಿಂಗಳುಗಳಿಂದ ಚಿತ್ರದ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಇದೀಗ ಚಿತ್ರತಂಡದವರು ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದಾರೆ. ‘ತರಗೆಲೆ ಸಂಸಾರ …’ ಎಂಬ ಹಾಡನ್ನು ವರಮಹಾಲಕ್ಷ್ಮೀ ಹಬ್ಬದಂದು ಸಂಜೆ ಯೂಟ್ಯೂಬ್ನ ಆನಂದ್ ಆಡಿಯೋ ಚಾನಲ್ ಮೂಲಕ ಬಿಡುಗಡೆ ಮಾಡಲಾಗಿದೆ. ಸಂತೋಷ್ ನಾಯಕ್ ರಚಿಸಿರುವ ಈ ಹಾಡನ್ನು ಕೈಲಾಶ್ ಖೇರ್ ಹಾಡಿದ್ದಾರೆ. ಇನ್ನು ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ.
‘ಕಾಲಚಕ್ರ’ ಚಿತ್ರವನ್ನು ರಶ್ಮಿ ಫಿಲಂಸ್ ಬ್ಯಾನರ್ನಡಿ ರಶ್ಮಿ ನಿರ್ಮಿಸುತ್ತಿದ್ದು, ಈ ಹಿಂದೆ ‘ನಾನಿ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ರಾಘವೇಂದ್ರ, ಈ ಚಿತ್ರವನ್ನು ಸುಮಂತ್ ಕ್ರಾಂತಿ ಎಂಬ ಹೆಸರಲ್ಲಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕಥೆಯನ್ನೂ ಅವರೇ ರಚಿಸಿದ್ದು, ಸೈಕಲಾಜಿಕಲ್ ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.
ಲಾಕ್ಡೌನ್ಗೂ ಮುನ್ನ, ಸುದೀಪ್ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದರು. ಈಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಟ್ರೇಲರ್ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಚಿಸಿದೆ.
ಇದನ್ನೂ ಓದಿ: ಸಂಭಾವನೆಯಲ್ಲಿ ರಾಜಮೌಳಿಯನ್ನೂ ಮೀರಿಸ್ತಿದ್ದಾರೆ ಕೊರಟಾಲ ಶಿವ
‘ಕಾಲಚಕ್ರ’ ಚಿತ್ರದಲ್ಲಿ ವಸಿಷ್ಠ ಸಿಂಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಿಕ್ಕಂತೆ ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್.ಎಂ. ಸೂರಿ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ಬಿ.ಎ. ಮಧು ಸಂಭಾಷಣೆ ರಚಿಸಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಈ ವರ್ಷದ ಕೊನೆ ಅಥವಾ ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ.
ಸುಶಾಂತ್ ಸಾಯುವ ಮುನ್ನ ಗೂಗಲ್ನಲ್ಲಿ ಸರ್ಚ್ ಮಾಡಿದ್ದೇನು?; ಮುಂಬೈ ಪೊಲೀಸ್ ನೀಡಿದ್ದಾರೆ ಅಚ್ಚರಿಯ ಮಾಹಿತಿ!