ಬೆಂಗಳೂರು: ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಮಂಗಳವಾರ ಸಂಜೆ ಹೊರಡಿಸಿದ್ದ ಆದೇಶವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಡೆಹಿಡಿದಿದ್ದಾರೆ.
ಡಿ.ಸಿ. ವರ್ಗಾವಣೆ ಆದೇಶ ಹೊರಬೀಳುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶರತ್ ಅವರ ಜತೆ ದೂರವಾಣಿಯಲ್ಲಿ ಮಾತನಾಡಿ, ವರ್ಗಾವಣೆ ಆದೇಶ ತಡೆಹಿಡಿದಿರುವುದಾಗಿ ತಿಳಿಸಿದರು ಎನ್ನಲಾಗಿದೆ.
‘‘ನೀವು ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ. ಈಗಿರುವ ಸ್ಥಾನದಲ್ಲೇ ಮುಂದುವರಿಯಿರಿ’’ ಎಂದು ಹುರಿದುಂಬಿಸಿದರು ಎಂದು ಮೂಲಗಳು ತಿಳಿಸಿವೆ. ಈ ಎಲ್ಲ ಬೆಳವಣಿಗೆಗಳು ಒಂದು ಗಂಟೆಯ ಅವಧಿಯಲ್ಲಿ ನಡೆದಿರುವುದು ಗಮನಾರ್ಹ.
ಶರತ್ ಅವರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯಕಾರಿ ನಿರ್ದೇಶಕರ ಹುದ್ದೆಗೆ ವರ್ಗ ಮಾಡಲಾಗಿತ್ತು. ಈ ಹುದ್ದೆಯಲ್ಲಿದ್ದ ಸುರಲ್ಕರ್ ವಿಕಾಸ್ ಕಿಶೋರ್ ಅವರನ್ನು ಕಲಬುರಗಿ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಕಲಬುರಗಿ ಜಿಲ್ಲೆಯಲ್ಲಿ ಕರೊನಾ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ 5ಕ್ಕೆ ತಲುಪಿದೆ.
ನಿಯಂತ್ರಣ ಸಾಧ್ಯವಾಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವರ್ಗಾವಣೆಯಾಗಿದೆ ಎಂದೇ ಹೇಳಲಾಗುತ್ತಿತ್ತು. ಆರಂಭದಲ್ಲಿಯೇ ಕ್ವಾರಂಟೈನ್ ಸೇರಿ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಇರುವುದೇ ಸೋಂಕು ಹೆಚ್ಚಳಕ್ಕೆ ಕಾರಣವೆಂದು ಹೇಳಲಾಗುತ್ತಿತ್ತು. ಮಾರುಕಟ್ಟೆ ಆರಂಭಿಸಿದ್ದು, ರೋಗಿಗಳನ್ನು ಹೈದರಾಬಾದ್ಗೆ ಕಳುಹಿಸಿದ್ದು.. ಹೀಗೆ ಅನೇಕ ವಿಚಾರಗಳಲ್ಲಿ ಸಾಕಷ್ಟು ತಪ್ಪುಗಳಾಗಿದ್ದರಿಂದ ಈ ವರ್ಗಾವಣೆ ನಡೆದಿದೆ ಎಂದು ಮೂಲಗಳು ತಿಳಿಸಿದ್ದವು.
ಅರೆಸ್ಟ್ ಆಗಿದ್ದ ಬೆಳಗಾವಿ ಯೋಧ ಬಿಡುಗಡೆ: ಜೈಲಿನಿಂದ ಕರೆದುಕೊಂಡು ಹೋಗಲು ಬಂದಿದ್ದವರು ಯಾರು?