ಶಿವಮೊಗ್ಗ: ಇಂದು ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪರನ್ನು ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪರ ಪುತ್ರಿ ಭೇಟಿ ಮಾಡಿದ್ದಾರೆ. ಈ ಮೂಲಕ ಕಾಗೋಡು ತಿಮ್ಮಪ್ಪ ಬಿಜೆಪಿಗೆ ಸೇರುತ್ತಾರಾ ಎನ್ನುವ ಪ್ರಶ್ನೆಯೂ ಎದ್ದಿದೆ. ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಿ ಟಿಕೆಟ್ ಸಿಗದೇ ಹೋದರೆ ನಂತರ ಮಾಜಿ ಸಚಿವರು ಈ ನಿರ್ಧಾರಕ್ಕೆ ಬರುತ್ತಾರಾ ಎನ್ನುವ ಪ್ರಶ್ನೆಯೂ ಜತೆಯಲ್ಲೇ ಎದ್ದಿದೆ.
ಕಾಗೋಡು ಪುತ್ರಿಗೂ ಆಹ್ವಾನ?
ಈ ನಡುವೆ ಕಾಗೋಡು ಪುತ್ರಿ ರಾಜ ನಂದಿನಿಗೆ ಬಿಜೆಪಿ ಸೇರುವಂತೆ ಆಹ್ವಾನ ನೀಡಲಾಗಿದೆಯಾ ಎನ್ನುವ ವಿಚಾರವೂ ಹರಿದಾಡುತ್ತಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಮಾಜಿ ಸಿಎಂ ಬಿಎಸ್ವೈರನ್ನು ಅವರು ಭೇಟಿ ಮಾಡಿರುವ ಫೋಟೊ ಎಲ್ಲೆಡೆ ಹರಿದಾಡುತ್ತಿದೆ.
ಇದನ್ನೂ ಓದಿ: ಟಿಕೆಟ್ ಆಕಾಂಕ್ಷಿಗಳ ಒಗ್ಗೂಡಿಸಲು ಅಖಾಡಕ್ಕೆ ಕಾಗೋಡು ತಿಮ್ಮಪ್ಪ
ಬಿಎಸ್ವೈ ಜತೆ ರಾಜನಂದಿನಿ ಮಾತುಕತೆ ನಡೆಸಿರುವ ಫೋಟೋ ಲಭ್ಯವಾಗಿದ್ದು ಕಾಗೋಡು ಪುತ್ರಿಗೆ ಹರತಾಳು ಹಾಲಪ್ಪ ಮೂಲಕ ಬಿಜೆಪಿ ಸೇರುವಂತೆ ಮಣೆ ಹಾಕಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹರತಾಳು ಹಾಲಪ್ಪ ರಾಜನಂದಿನಿ ಮೀಟಿಂಗ್?!
ಬೆಂಗಳೂರು ಸೇರಿದಂತೆ ಸಾಗರದಲ್ಲೂ ರಾಜನಂದಿನಿ ಹಾಗೂ ಹರತಾಳು ಹಾಲಪ್ಪ ಮೀಟಿಂಗ್ ನಡೆಸಿದ್ದರು ಎನ್ನಲಾಗಿದೆ. ಪಕ್ಷದಲ್ಲಿ ಉನ್ನತ ಸ್ಥಾನ ನೀಡುವುದಾಗಿ ಭರವಸೆ ನೀಡಿರುವ ಸಾಧ್ಯತೆ ಇದೆ. ಇನ್ನು ಕಾಗೋಡು ತಿಮ್ಮಪ್ಪ ಪಕ್ಷ ಬದಲಾಯಿಸಿದರೆ ಬಿಜೆಪಿಗೆ ಮತ್ತಷ್ಟು ಶಕ್ತಿ ಬರುವ ಸಾಧ್ಯತೆ ಇದೆ.
ಕಾಂಗ್ರೆಸ್ನಲ್ಲಿ ಕಾಗೋಡು ತಿಮ್ಮಪ್ಪರನ್ನು ಕಡೆಗಣಿಸಿದಕ್ಕೆ ಅವರು ಈ ನಿರ್ಧಾರಕ್ಕೆ ಬಂದಿರಬಹುದಾದ ಸಾಧ್ಯತೆ ಇದೆ. ಹಿರಿಯ ನಾಯಕರನ್ನು ಕಡೆಗಣಿಸಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಮುಳುವಾಗಬಹುದಾ ಎನ್ನುವುದನ್ನು ಕಾಂಗ್ರೆಸ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆದ ಮೇಲೆ ತಿಳಿದುಬರಬಹುದು.