ಗದಗ: ಕಾಲಮಿಯೊಳಗೆ ಅರ್ಜಿ ವಿಲೇವಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಂದಾಯ ಇಲಾಖೆಯಲ್ಲಿ ಜಾರಿಗೆ ತಂದಿದ್ದ ಯೋಜನೆಯಲ್ಲಿ ಗದಗ ಜಿಲ್ಲೆ ಕಳೆದ ಮೂರು ತಿಂಗಳಿಂದ ಉತ್ತಮ ಸಾಧನೆ ಮಾಡಿದೆ.
ಸಾಮಾನ್ಯ ನಾಗರಿಕರಿಗೆ ನ್ಯಾಯ ಒದಗಿಸುವಲ್ಲಿ ಜಿಲ್ಲಾಡಳಿತ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗದಗ ಜಿಲ್ಲೆಗೆ ಪ್ರಶಂಸನಾ ಪತ್ರ ನೀಡಿದೆ.
‘ಭೂಮಿ’ ಗೆ ಸಂಬಂಧಿಸಿದ ಅರ್ಜಿ ಮತ್ತು ವ್ಯಾಜ್ಯಗಳ ವಿಲೇವಾರಿ ಸಂಬಂಧಿಸಿದ ಯೋಜನೆ ಇದಾಗಿದ್ದು, ಅರ್ಜಿ ಸಲ್ಲಿಸಿದ 7 ದಿನಗಳೊಳಗಾಗಿ ಅರ್ಜಿ ವಿಲೇವಾರಿ ಮಾಡಿ, ಸಾಮಾನ್ಯ ನಾಗರಿಕನಿಗೆ ಕಾಲಮಿತಿಯಲ್ಲಿ ನ್ಯಾಯ ಒದಗಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.
ಆರ್. ಅಶೋಕ ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ ಉಪನೋಂದಣಾಧಿಕಾರಿ ಕಚೇರಿ, ಸಮೀಕ್ಷೆ, ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗೆ ಸಲ್ಲಿಸಿದ ಅರ್ಜಿಗಳು ಹಾಗೂ ಭೂಸ್ವಾಧೀನಕ್ಕಾಗಿ ಸಲ್ಲಿಸಿದ್ದ ಅರ್ಜಿಗಳ ತುರ್ತು ವಿಲೇವಾರಿಗೆ ಆದೇಶಿಸಲಾಗಿತ್ತು.
ಯಾವ ಅರ್ಜಿಗಳು?
ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಲ್ಲಿಸಲಾಗುವ ಭೂಮಿಯ ಕ್ರಯ, ವಿಭಾಗ, ದಾನಪತ್ರ, ಹಕ್ಕು ಮತ್ತು ಋಣ ಅಳವಡಿಕೆಗೆ ಸಂಬಂಧಿಸಿದ ಆನ್ಲೈನ್ ಅರ್ಜಿಗಳನ್ನು 7 ದಿನಗಳ ಒಳಗಾಗಿ, ಆನ್ಲೈನ್ ಅಲ್ಲದ ಅರ್ಜಿಗಳನ್ನು 15 ದಿನಗಳ ಒಳಗಾಗಿ ವಿಲೇವಾರಿ ಮಾಡಲಾಗುತ್ತಿದೆ.
ಸಮೀಕ್ಷೆ ವಿಭಾಗದಲ್ಲಿ ಭೂಮಿಯ ಪೋಡಿ ಮಾಡುವುದು, ಕಂದಾಯ ಇಲಾಖೆಯಲ್ಲಿ ಖಾತಾ ಬದಲಾವಣೆ, ಪಾವತಿ ಖಾತಾ ಮತ್ತು ಭೂಮಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಜಿಲ್ಲಾ ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಆದೇಶಗಳು, ಮಲಪ್ರಭಾ, ತುಂಗಭದ್ರಾ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಗಳಂತ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಿದ್ದಕ್ಕೆ ರಾಜ್ಯ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದೆ.
ಕಾರ್ಯಗತಗೊಳಿಸುವಲ್ಲಿ ಯಶಸ್ವಿ
ಗದಗ ಹೊರತುಪಡಿಸಿ ಬಾಗಲಕೋಟೆ ಮತ್ತು ಧಾರವಾಡ ಜಿಲ್ಲಾಡಳಿತವೂ ಕೂಡ ರಾಜ್ಯ ಸರ್ಕಾರದ ಆದೇಶವನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿವೆ. ಗದಗ ಜಿಲ್ಲೆಗಿಂತಲೂ ಅಧಿಕ ಅರ್ಜಿಗಳ ವಿಲೇಮಾರಿ ಮಾಡಿವೆ. ಹೀಗಿದ್ದರೂ ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಲು ವಿಳಂಬ ಮಾಡಿದ್ದರಿಂದ ಸಮಯ ನಿರ್ವಹಣೆಯಲ್ಲಿ ಗದಗ ಜಿಲ್ಲಾಡಳಿತವೇ ಮುಂದಿದೆ ಎಂಬುದು ವಿಶೇಷ.
ಸಮಸ್ಯೆಗಳೇನಿದ್ದವು?
- ಸಾಮಾನ್ಯ ನಾಗರಿಕರು, ರೈತರು ಭೂಮಿಯ ಕ್ರಯ, ಪೋಡಿ, ಕೃಷಿಯೇತರ ಭೂ ವರ್ಗಾವಣೆ ಪ್ರಕ್ರಿಯೆಗೆ ವಿಳಂಬವಾಗುತ್ತಿತ್ತು.
- ಅರ್ಜಿ ವಿಲೇವಾರಿಗೆ ಸಾಮಾನ್ಯವಾಗಿ 45 ದಿನ ಮಿತಿಯಿದ್ದರೂ ವಿಲೇವಾರಿ ವಿಳಂಬ. ಕಚೇರಿಗೆ ಸುತ್ತಾಟ.
- ದಲ್ಲಾಳಿಗಳ ಹಾವಳಿಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ.
- ಭ್ರಷ್ಟಾಚಾರಕ್ಕೆ ದಾರಿ
ಸಮಸ್ಯೆಗೆ ಪರಿಹಾರ?
ಜನರ ಅಲೆದಾಟ ತಪ್ಪಿಸಲು ಸರ್ಕಾರದಿಂದ ಕಟ್ಟು ನಿಟ್ಟಿನ ಆದೇಶ.
- ನೋಂದಾಯಿತ ಅರ್ಜಿಗೆ 7 ದಿನ, ನೊಂದಾಯಿತವಲ್ಲದ ಅರ್ಜಿಗೆ 15 ದಿನ ಕಾಲಮಿತಿ.
- ದಲ್ಲಾಳಿ ಹಾವಳಿಗಳಿಂದ ಮುಕ್ತಿ. ಜನರಿಗೆ ಉಳಿತಾಯ.
- ಏಪ್ರಿಲ್ ತಿಂಗಳು:
- ಜಿಲ್ಲೆಗಳು – ಅರ್ಜಿಗಳ ವಿಲೇವಾರಿ – ಜಿಲ್ಲಾ ರ್ಯಾಂಕಿಂಗ್
- ಗದಗ – 3114 – 4.0
- ಬಾಗಲಕೋಟೆ – 9158 – 3.97
- ಧಾರವಾಡ – 3212 – 3.57
- ಮಾರ್ಚ್ ತಿಂಗಳು:
- ಜಿಲ್ಲೆಗಳು – ಅರ್ಜಿಗಳ ವಿಲೇವಾರಿ – ಜಿಲ್ಲಾ ರ್ಯಾಂಕಿಂಗ್
- ಬಾಗಲಕೋಟೆ – 13465 – 4.02
- ಗದಗ – 6346 – 3.62
- ಧಾರವಾಡ – 4985 – 3.25
ಫೆಬ್ರವರಿ ತಿಂಗಳು
ಜಿಲ್ಲೆಗಳು – ಅರ್ಜಿಗಳ ವಿಲೇವಾರಿ – ಜಿಲ್ಲಾ ರ್ಯಾಂಕಿಂಗ್
ಧಾರವಾಡ – 5028 – 4.11
ಬಾಗಲಕೋಟೆ – 11117 – 3.89
ಗದಗ – 5349 – 3.63
ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ಈ ಮೊದಲು ಕ್ಲಿಷ್ಟವಾಗುತ್ತಿದ್ದವು. ವ್ಯವಸ್ಥೆ ಮೊದಲಿನಂತಿಲ್ಲ. ಎಲ್ಲವೂ ಪಾರದರ್ಶಕವಾಗಿದ್ದು, ಜನರ ಭೂ ಸಂಬಂಧಿತ ಅರ್ಜಿಗಳಿಗೆ ವೇಗವಾಗಿ ಪರಿಹಾರ ದೊರೆಯುತ್ತಿದೆ.
ವೈಶಾಲಿ ಎಂ.ಎಲ್.
ಗದಗ ಜಿಲ್ಲಾಧಿಕಾರಿ