ಬೆಂಗಳೂರು: ವಾತಾವರಣದಲ್ಲಿ ಅಧಿಕ ತಾಪಮಾನ ಇರುವುದರಿಂದ ಲೋಕಸಭಾ ಚುನಾವಣೆ ಮತ ಕೇಂದ್ರಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಈ ಸಂಬಂಧ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದು, ಮತದಾನದ ದಿನ ಶಾಖಾಘಾತದಿಂದ ಸಂಭವಿಸುವ ಆರೋಗ್ಯ ಸಮಸ್ಯೆಗಳ ನಿರ್ವಹಣೆಗೆ ವೈದ್ಯಕೀಯ ಕಿಟ್ ಸೇರಿ ಅಗತ್ಯ ಚಿಕಿತ್ಸಾ ಪರಿಕರಗಳನ್ನು ಜಿಲ್ಲಾ ಚುನಾವಣೆ ಅಧಿಕಾರಿಗಳಿಗೆ ಪೂರೈಕೆ ಮಾಡಬೇಕು ಎಂದು ಹೇಳಿದ್ದಾರೆ.
ಪ್ರತಿ ಮತ ಕೇಂದ್ರಕ್ಕೂ ಒಆರ್ಎಸ್ ದ್ರಾವಣ ಒದಗಿಸಬೇಕು. ತುರ್ತು ಸಂದರ್ಭದಲ್ಲಿ ಅಗತ್ಯ ಔಷಧ ಹಾಗೂ ಮಾನವ ಸಂಪನ್ಮೂಲದೊಂದಿಗೆ ಆಂಬುಲೆನ್ಸ್ ಸೇವೆ ಲಭ್ಯತೆ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಶಾಖಾಘಾತದಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕವಾಗಿ ಕರಪತ್ರ ಹಂಚಬೇಕು ಎಂದು ತಿಳಿಸಿದ್ದಾರೆ.