ಬೆಂಗಳೂರು: ಹೆಸರಿಲ್ಲದೆ ಭೂಮಿಗೆ ಬಂದ ಉಸಿರನ್ನು, ಉಸಿರು ಬಿಡುವಾಗ ಹೆಸರು ಮಾಡಿಯೇ ಬಿಡಬೇಕು ಎಂದು ಪರಿತಪಿಸುವ ಪ್ರತಿಯೊಬ್ಬರಿಗೂ ಕರುನಾಡ ಪವರ್ ಸ್ಟಾರ್ ನಟ ಪುನೀತ್ ರಾಜ್ಕುಮಾರ್ ಸ್ಪೂರ್ತಿ ಎಂದೇ ಹೇಳಬೇಕು. ಏಕೆಂದರೆ, ಅಪ್ಪು ಮಾಡಿರುವ ಹೆಸರು ಅದೆಷ್ಟು ಎಂದರೆ ಅವರ ನಿಧನದ ಒಂದೂವರೆ ತಿಂಗಳ ಬಳಿಕವೂ ನಟನ ಅಭಿಮಾನಿಗಳ ಕಣ್ಣೀರು ಇನ್ನೂ ಬತ್ತಿಲ್ಲ. ಪುನೀತ್ ನಿಧನದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳು ಬಹಳಷ್ಟು ನೋವು ಅನುಭವಿಸಿದರು. ಆದರೆ, ಕುಟುಂಬ ಮತ್ತು ಅಭಿಮಾನಿಗಳಂತೆ ಮತ್ತು ಅದಕ್ಕೂ ಹೆಚ್ಚು ನಟನ ನೆಚ್ಚಿನ ಸ್ನೇಹಿತರು ದುಃಖ ಪಟ್ಟರು. ಅಪ್ಪು ಅವರ ಆಪ್ತ ಸ್ನೇಹಿತರಲ್ಲಿ ತೆಲುಗಿನ ಖ್ಯಾತ ನಟ ಜೂನಿಯರ್ ಎನ್ಟಿಆರ್ ಕೂಡ ಒಬ್ಬರು. ಎನ್ಟಿಆರ್ ಇಂದು ಮತ್ತೆ ಅಪ್ಪು ಅವರನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
ಹೌದು, ‘RRR’ ಚಿತ್ರದ ಪ್ರಚಾರಕ್ಕೆಂದು ಡಿ.10 ರಂದು ಬೆಂಗಳೂರಿಗೆ ಬಂದ ಇಡೀ ಚಿತ್ರತಂಡ ತಮ್ಮ ಸಿನಿಮಾವನ್ನು ಸ್ವೀಕರಿಸಿಬೇಕೆಂದು ಅಭಿಮಾನಿಗಳನ್ನು ವಿನಂತಿಸಿದರು. ಈ ಸಂದರ್ಭದಲ್ಲಿ, ಎನ್ಟಿಆರ್ ಅವರು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡು ಮತ್ತು ಅವರ ‘ಗೆಳೆಯ ಗೆಳೆಯ‘ ಹಾಡನ್ನು ಹಾಡಿದರು. ಮತ್ತು ನಟ ಕನ್ನಡದಲ್ಲೇ ಮಾತಾಡಿದ್ದು ಎಲ್ಲರ ಗಮನ ಸೆಳೆದಿದೆ. ಈ ಹಾಡನ್ನು ಮೂಲತಃ ನಟ ಎನ್ಟಿಆರ್ ಅವರೆ ‘ಚಕ್ರವ್ಯೂಹ‘ ಚಿತ್ರದಲ್ಲಿ ಪುನ್ನೀತ್ಗಾಗಿ ಹಾಡಿದರು. ಹಾಡನ್ನು ಹಾಡಿ ನಂತರ ಭಾವುಕರಾದ ಎನ್ಟಿಆರ್, ಇನ್ನು ಮುಂದೆ ಈ ಹಾಡನ್ನು ಅಪ್ಪು ಇಲ್ಲದ ಕಾರಣ ಹಾಡುವುದಿಲ್ಲ ಎಂದು ಹೇಳಿದರು. ”ಪುನೀತ್ ಎಲ್ಲೇ ಇದ್ದರೂ ಅವರ ಆಶೀರ್ವಾದ ಸದಾ ನಮ್ಮ ಮೇಲಿರಬೇಕು” ಎಂದು ಹೇಳಿ ನಟ ಮಾತು ಮುಗಿಸಿದರು. ಅದೆಷ್ಟು ದೂರವಿದ್ದರು, ಅಪ್ಪು ಬರೀ ಅವರ ಕುಟುಂಬದ ಮತ್ತು ಅಭಿಮಾನಿಗಳ ಮನದಲ್ಲಿ ಮಾತ್ರ ಅಲ್ಲದೇ, ತಮ್ಮ ಸ್ನೇಹಿತರ ಮನದಲ್ಲೂ ಚಿರಸ್ಥಾಯಿ ಎನ್ನಬಹುದು.