| ಚೇತನ್ ನಾಡಿಗೇರ್
ಚಿತ್ರ: ರವಿ ಬೋಪಣ್ಣ
ನಿರ್ದೇಶನ: ರವಿಚಂದ್ರನ್
ನಿರ್ಮಾಣ: ರವಿಚಂದ್ರನ್
ತಾರಾಗಣ: ರವಿಚಂದ್ರನ್, ಸುದೀಪ್, ರಾಧಿಕಾ ಕುಮಾರಸ್ವಾಮಿ, ಕಾವ್ಯಾ ಶೆಟ್ಟಿ, ಮೋಹನ್, ಜೈಜಗದೀಶ್ ಮುಂತಾದವರು
ಸ್ಟಾರ್: 3
“ನೆನಪುಗಳು ನನ್ನ ಬೇಟೆ ಆಡುತ್ತೆ. ಅದನ್ನು ಸಹಿಸಿಕೊಳ್ಳೋ ಶಕ್ತಿ ನನಗಿಲ್ಲ …’
ಅದೇ ಕಾರಣಕ್ಕೆ ರವಿ ಬೋಪಣ್ಣ ಕುಡಿಯುತ್ತಿರುತ್ತಾನೆ. ಅವನಿಗೆ ತನ್ನ ಹಳೆಯದನ್ನು ನೆನಪಿಸಿಕೊಳ್ಳುವುದಕ್ಕೆ ಇಷ್ಟ ಇಲ್ಲ. ಆದರೆ, ಆ ನೆನಪುಗಳು ಬಿಡಬೇಕಲ್ಲ. ಆ ನೆನಪುಗಳು, ಅವನು ಮಾಡಿದ ಕರ್ಮ … ಅವನದೇ ರೂಪದಲ್ಲಿ ಬಂದು ನೆನಪಿಸುತ್ತಿರುತ್ತದೆ. ಹಳೆಯದನ್ನೆಲ್ಲ ಚುಚ್ಚಿಚುಚ್ಚಿ ಕೆದಕುತ್ತಿರುತ್ತದೆ. ಹಾಗಾದರೆ, ಅವನಿಗೆ ನೆನಪುಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲವಾ?
“ರವಿ ಬೋಪಣ್ಣ’, ಮಲಯಾಳಂನ “ಜೋಸೆಫ್ ‘ ಚಿತ್ರದ ರೀಮೇಕ್. ಹಾಗಂತ ಫ್ರೇಮ್ ಟು ಫ್ರೇಮ್ ಕಾಪಿ ಅಲ್ಲ. ಆ ಚಿತ್ರದ ಆತ್ಮವನ್ನು ತೆಗೆದುಕೊಂಡು, ಅದಕ್ಕೆ ತಮ್ಮದೇ ರೂಪ ಕೊಟ್ಟಿದ್ದಾರೆ ರವಿಚಂದ್ರನ್. ಅದಂದು ಪಕ್ಕ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಆದರೆ, ರವಿಚಂದ್ರನ್ ಆ ಕಥೆಗೆ ಹಾಡು, ನೃತ್ಯ, ಗ್ಲಾಮರ್ ಎಲ್ಲವನ್ನೂ ಸೇರಿಸಿ, ತಮ್ಮದೇ ಶೈಲಿಯಲ್ಲಿ ಮಾಡಿದ್ದಾರೆ. ಹಾಗಾಗಿ, “ಜೋಸೆಫ್ ‘ ಚಿತ್ರವನ್ನು ನೋಡಿದವರಿಗೆ, ಈ ಚಿತ್ರ ನಿರಾಸೆಯಾಗಬಹುದು. ನೋಡದಿರುವವರಿಗೆ ಖುಷಿಕೊಡಬಹುದು.
ರವಿಚಂದ್ರನ್ ಎಷ್ಟೇ ಬದಲಾಗಿದ್ದರೂ, ತಮ್ಮ ಶೈಲಿಯನ್ನು ಬದಲಾಯಿಸಿಲ್ಲ. ಅದಕ್ಕೆ ಚಿತ್ರದುದ್ದಕ್ಕೂ ಹಲವು ಕುರುಹುಗಳು ಸಿಗುತ್ತದೆ. ಇಲ್ಲಿ ರವಿಚಂದ್ರನ್ ತಮ್ಮದೇ ಚಿತ್ರದ ಹಲವು ಜನಪ್ರಿಯ ಟ್ಯೂನ್ಗಳನ್ನು ಹಿನ್ನೆಲೆಧ್ವನಿಯಾಗಿ ಬಳಸಿಕೊಂಡಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಹಾಡುಗಳನ್ನು ಬಳಸಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಬಳಸುವ ಸಣ್ಣಸುತ್ತಿಗೆಯಿಂದ ವೈನ್ ಗ್ಲಾಸ್ಗಳನ್ನು ಪೀಸ್ಪೀಸ್ ಮಾಡಿದ್ದಾರೆ. ಇಬ್ಬರು ನಾಯಕಿಯರನ್ನು ಅತ್ಯಂತ ಗ್ಲಾಮರಸ್ ಆಗಿ ತೋರಿಸಿದ್ದಾರೆ. ಉಯ್ಯಾಲೆ, ಗಿಟಾರ್, ಗೆೆಜ್ಜೆ, ಹಣ್ಣ, ಬೆಂಕಿ, ಅಕ್ಷರಗಳನ್ನು ಯಥೇಚ್ಛವಾಗಿ ಬಳಸಿಕೊಂಡಿದ್ದಾರೆ.
ಈ ಅಂಶಗಳು ಚಿತ್ರವನ್ನು ಅದ್ಧೂರಿಯಾಗಿಸಬಹುದು, ಪ್ರತಿ ಫ್ರೇಮನ್ನೂ ಸುಂದರ ಕಾಣಿಸಬಹುದು. ಆದರೆ, ಈ ಅಂಶಗಳೇ ಚಿತ್ರದ ಓಟಕ್ಕೆ ಬ್ರೇಕ್ ಹಾಕುವುದು ಎಂದರೆ ತಪ್ಪಲ್ಲ. ಇವೆಲ್ಲ ಮಾಡುವ ಭರದಲ್ಲಿ ಮೂಲಕ ಕಥೆಯೇ ಮಂಕಾಗಿ ಹೋಗುತ್ತದೆ. “ಜೋಸೆಫ್ ‘ ಚಿತ್ರ ಇಷ್ಟವಾಗುವುದು, ಜನರ ಮನಸ್ಸಿಗೆ ಹತ್ತಿರವಾಗುವುದು ಅದರ ಆಶಯದಿಂದ. ಆದರೆ, ಇಲ್ಲಿ ಬೇರೆಲ್ಲದರ ಮಧ್ಯೆ ಆ ಆಶಯವೇ ಹಿಂದೆ ಸರಿದಂತೆ ಕಾಣುತ್ತದೆ. ಗಂಭೀರವಾದ ಚಿತ್ರವೊಂದು ಈ ಅಂಶಗಳಿಂದ ದುರ್ಬಲಗೊಳ್ಳುತ್ತಾ ಹೋಗುತ್ತದೆ.
ರವಿಚಂದ್ರನ್ ಇಲ್ಲಿ ಮೂರು ಶೇಡ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಹೆಚ್ಚು ಗಮನ ಸೆಳೆಯುವುದು ಒಬ್ಬನಲ್ಲಿರುವ ಇನ್ನೊಬ್ಬನಾಗಿ. ರಾಧಿಕಾ ಕುಮಾರಸ್ವಾಮಿ ಮತ್ತು ಕಾವ್ಯಾ ಶೆಟ್ಟಿ ಇಬ್ಬರೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಹಲವು ಪಾತ್ರಗಳಿದ್ದರೂ ಅವು ಗಮನ ಸೆಳೆಯುವುದಿಲ್ಲ. ನಟ ಮೋಹನ್ಗೆ ಹೆಚ್ಚು ಕೆಲಸವಿಲ್ಲದಿದ್ದರೂ, ಸಂಭಾಷಣೆಕಾರ ಮೋಹನ್ಗೆ ವಿಪರೀತ ಕೆಲಸವಿದೆ. ಅವರ ಹಲವು ಸಂಭಾಷಣೆಗಳು ಕಾಡುತ್ತವೆ, ಯೋಚನೆಗೀಡು ಮಾಡುತ್ತವೆ.
“ರವಿ ಬೋಪಣ್ಣ’ ಚಿತ್ರದ ಹೀರೋ ಎಂದರೆ ಅದು ಛಾಯಾಗ್ರಾಹಕ ಜಿ.ಎಸ್.ವಿ. ಸೀತಾರಾಂ. ಅವರು ರವಿಚಂದ್ರನ್ ಅವರ ಕಣ್ಣಾಗಿ ಇಡೀ ಚಿತ್ರವನ್ನು ಸುಂದರವಾಗಿ ಮತ್ತು ಶ್ರೀಮಂತವಾಗಿ ಕಟ್ಟಿಕೊಟ್ಟಿದ್ದಾರೆ. ಹಿನ್ನೆಲೆ ಸಂಗೀತ ಕೆಲವು ಕಡೆ ಚೆನ್ನಾಗಿ ಮೇಳೈಸಿದೆ. ಗಂಭೀರವಾದ ದೃಶ್ಯಗಳಿಗೆ ಹಿನ್ನೆಲೆಯಾಗಿ “ದಡಕ್ ದಡಕ್ ಈ ಹೃದಯ ಖಡಕ್, ಈ ಹೃದಯ ಚುರುಕ್…’ ಎಂಬ ಹಾಡು ಬರುವುದು ಕಿರಿಕಿರಿಯಾಗುತ್ತದೆ.