More

    ಜಲಸಿರಿ ಯೋಜನೆ ಕಾಮಗಾರಿ ಚುರುಕು

    ಮಂಗಳೂರು: ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷೆಯ ಜನತೆಗೆ 24*7 ಕುಡಿಯುವ ನೀರು ಪೂರೈಸುವ 792 ಕೋಟಿ ರೂ. ವೆಚ್ಚದ ಜಲಸಿರಿ ಯೋಜನೆ ಕಾಮಗಾರಿ ಭರದಿಂದ ಮುನ್ನಡೆಯುತ್ತಿದೆ. ಇದಕ್ಕೆ ಬೇಕಾದ ಬೃಹತ್ ಗಾತ್ರದ ಸಿಮೆಂಟ್ ಪೈಪ್‌ಗಳು ತಮಿಳುನಾಡಿನಿಂದ ಪೂರೈಕೆಯಾಗಿವೆ.

    ಕುಡ್ಸೆಂಪ್ ವತಿಯಿಂದ ನಡೆಯುವ ಈ ಯೋಜನೆಯಲ್ಲಿ ನಗರದ 20 ಕಡೆಗಳಲ್ಲಿ ಬೃಹತ್ ಜಲ ಸಂಗ್ರಹಗಾರ ಸ್ಥಾವರ ನಿರ್ಮಾಣವಾಗಲಿದೆ. ಎಲ್ಲ ವಾರ್ಡ್‌ಗಳಲ್ಲಿ ಇರುವ ನೀರು ಪೂರೈಕೆಯ ಹಳೇ ಪೈಪ್‌ಗಳನ್ನು ತೆಗೆದು ಹೊಸ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಪೈಪ್‌ಗಳು ಉತ್ತಮವಾಗಿರುವ ಕಡೆ ಬದಲಾವಣೆ ಮಾಡುತ್ತಿಲ್ಲ. ಎಲ್ಲೆಲ್ಲಿ ಹೊಸ ಪೈಪ್‌ಗಳ ಅವಶ್ಯಕತೆ ಇದೆ ಎಂಬುದರ ಬಗ್ಗೆ ಸರ್ವೇ ಮಾಡಲಾಗುತ್ತಿದೆ.

    ತುಂಬೆಯಲ್ಲಿ ಎರಡು ಸ್ಥಾವರ: ತುಂಬೆ ವೆಂಟೆಡ್ ಡ್ಯಾಂ ಸಮೀಪ ರಾಮಲ್‌ಕಟ್ಟೆಯಲ್ಲಿ ಹೊಸದಾಗಿ 20 ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಸ್ಥಾವರ ಹಾಗೂ ಶುದ್ಧೀಕರಣ ಪ್ರಕ್ರಿಯೆ ಸಂದರ್ಭ ಹೊರಬಿಡುವ ನೀರು ಮರುಬಳಕೆ ಘಟಕ (ಬ್ಯಾಕ್‌ವಾಷ್ ಟ್ರೀಟ್‌ಮೆಂಟ್ ಪ್ಲಾಂಟ್) ನಿರ್ಮಾಣವಾಗಲಿದೆ.

    20 ಜಲಸಂಗ್ರಹಗಾರ ಸ್ಥಾವರ: ನಂದಿಗುಡ್ಡೆ ಮೈದಾನದ ಬಳಿ, ಉದಯನಗರ, ಕೋಡಿಪಾಡಿ, ನೆಹರು ಮೈದಾನ, ತಿರುವೈಲುವಿನ ಅಮೃತ ನಗರ, ಶಕ್ತಿನಗರ, ಮೇರಿಹಿಲ್, ಕೃಷ್ಣಾಪುರ, ಮೋರ್ಗನ್ಸ್‌ಗೇಟ್, ಪಣಂಬೂರಿನ ಮೀನಕಳಿಯ, ಕಂಕನಾಡಿ ವೆಲೆನ್ಸಿಯಾದ ಸಿಮೆಟ್ರಿ, ಕುಂಜತ್ತಬೈಲು, ಪಚ್ಚನಾಡಿಯ ಸಂತೋಷ್‌ನಗರ, ಎನ್‌ಐಟಿಕೆ ಬಳಿ, ಲೋಹಿತ್‌ನಗರದ ನೆಕ್ಕಿಲಗುಡ್ಡ, ಜಯನಗರದ ಹೋಲಿಹಿಲ್, ಬಜಾಲ್‌ನ ಜೆ.ಎಂ.ರೋಡ್ ಬಳಿ, ಕುಳಾಯಿಯ ಕಾನ, ಕಾವೂರಿನ ಎಂ.ವಿ.ಶೆಟ್ಟಿ ಕಾಲೇಜು ಬಳಿ ಹಾಗೂ ಕೋಡಿಕಲ್‌ನಲ್ಲಿ ಜಲಸಂಗ್ರಹಗಾರ ಸ್ಥಾವರ ನಿರ್ಮಾಣವಾಗಲಿದೆ.

    ಎರಡು ನೆಲಮಟ್ಟದ ಸ್ಥಾವರ: ಪಾಲಿಕೆ ವ್ಯಾಪ್ತಿಯ ಲೇಡಿಹಿಲ್ ಸಮೀಪದ ಅಫೀಸರ್ಸ್‌ ಕ್ಲಬ್ ಬಳಿ ಹಾಗೂ ಬಾಳದಲ್ಲಿ ತಲಾ 10 ಲಕ್ಷ ಲೀಟರ್ ಸಾಮರ್ಥ್ಯದ ಎರಡು ನೆಲ ಹಂತದ ಜಲಸಂಗ್ರಹ ಸ್ಥಾವರಗಳು ನಿರ್ಮಾಣವಾಗಲಿದೆ. ಈ ಜಲಸ್ಥಾವರದಿಂದ ಚಿಲಿಂಬಿ ಹಾಗೂ ಆಶೋಕನಗರ ಪ್ರದೇಶ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ನಗರದಲ್ಲಿ ನೀರು ಸರಬರಾಜು ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ 8 ಇಂಟರ್ ಮೀಡಿಯೆಟ್ ಪಂಪ್‌ಹೌಸ್ ನಿರ್ಮಾಣಗೊಳ್ಳಲಿದೆ.

    ಸೋರಿಕೆ ತಡೆಗೆ ಬಲ್ಕ್ ಫ್ಲೋ ಮೀಟರ್: ಪ್ರಸ್ತುತ ಡ್ಯಾಂನಿಂದ ಓವರ್‌ಹೆಡ್ ಟ್ಯಾಂಕ್‌ವರೆಗೆ ಸರಬರಾಜು ಆಗುವಾಗ ಸಾಕಷ್ಟು ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ. ಇದನ್ನು ತಡೆಗಟ್ಟಲು ಪಾಲಿಕೆ ಅಧಿಕಾರಿಗಳು ಅಷ್ಟೇ ಪ್ರಯತ್ನಿಸಿದರೂ ಎಲ್ಲಿ ಸೋರಿಕೆ ಆಗುತ್ತಿದೆ ಹಾಗೂ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಇದೀಗ ತುಂಬೆ ಜಾಕ್‌ವೆಲ್‌ನಿಂದ ಓವರ್‌ಹೆಡ್‌ಗಳವರೆಗೆ ನೀರು ಸರಬರಾಜು ಮಾರ್ಗ ಮಧ್ಯೆ 181 ಸಗಟು ನೀರು ಹರಿಯುವಿಕೆ ಮೀಟರ್ (ಬಲ್ಕ್ ಪ್ಲೋ ಮೀಟರ್) ಅಳವಡಿಸಲು ಉದ್ದೇಶಿಸಲಾಗಿದೆ. ನೀರು ಸೋರಿಕೆ ಎಲ್ಲಿ ಆಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ತುಂಬೆಯಿಂದ ಪಂಪ್ ಮಾಡಿದ ಪ್ರಮಾಣದಲ್ಲಿಯೇ ನೀರು ಟ್ಯಾಂಕ್‌ವರೆಗೂ ಬರುತ್ತಿದೆಯೇ ಎಂಬುದನ್ನು ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಪರಿಶೀಲಿಸಲಾಗುತ್ತದೆ. ಮನೆಗಳಿಗೆ ನೀರು ವಿತರಣಾ ಜಾಲವನ್ನೂ ಉನ್ನತೀಕರಣಕ್ಕೆ ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಂಗಳೂರು ನಗರದ ಜನತೆಗೆ ನಿರಂತರ ಕುಡಿಯುವ ನೀರು ಕಲ್ಪಿಸಲು ಸರಬರಾಜು ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಜಲಸಿರಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಪ್ರಸ್ತುತ ಈ ಕಾಮಗಾರಿ ಮುಗಿಯುವವರೆಗೂ ನಗರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲಾಗುವುದು.

    ಪ್ರೇಮಾನಂದ ಶೆಟ್ಟಿ, ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts