ಜಗಳೂರು: ನರೇಗಾ ಯೋಜನೆಯಡಿ ಕೆಲಸ ಕೇಳಿದ ಕೂಲಿಕಾರರ ಮೇಲೆ ಪಿಡಿಒ ದಬ್ಬಾಳಿಕೆ ಮಾಡಿದ್ದಾರೆಂದು ಆಪಾದಿಸಿ ಮಂಗಳವಾರ ಉಚ್ಚಂಗಿಪುರ ಗ್ರಾಮಸ್ಥರು ದಿದ್ದಿಗಿ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಳೆದೆರಡು ತಿಂಗಳಿಂದ ಕೆಲಸವಿಲ್ಲದೆ ಬರಿಗೈಯಲ್ಲಿ ಕುಳಿತಿದ್ದೇವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನರೇಗಾದಡಿ ಕೂಲಿ ಕೆಲಸಕ್ಕೆ ಅರ್ಜಿ ಹಾಕಲು ಹೋದರೆ ಗ್ರಾಪಂ ಪಿಡಿಒ ಪಹಣಿ ತಂದವರಿಗೆ ಮಾತ್ರ ಕೆಲಸ ಕೊಡುವುದಾಗಿ ಹೇಳುತ್ತಿದ್ದಾರೆ. ಜಮೀನು ಇಲ್ಲದವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಜನಪ್ರತಿನಿಧಿಗಳು, ಅಧಿಕಾರಿಗಳು ಕೂಲಿಕಾರರಿಗೆ ಕೆಲಸ ನೀಡುವಂತೆ ಸಭೆಗಳಲ್ಲಿ ಹೇಳುತ್ತಾರೆ. ಆದರೆ ಗ್ರಾಪಂ ಅಧಿಕಾರಿಗಳು ಇದಕ್ಕೆ ಕಿವಿಗೊಡುತ್ತಿಲ್ಲ. ಕೂಡಲೇ ನಮಗೆ ಕೆಲಸ ಕೊಡದೇ ಇದ್ದರೆ ತಾಪಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಬಾಲರಾಜ್, ಸದಸ್ಯ ಲಿಂಗರಾಜ್, ಕೂಲಿಕಾರರಾದ ತಿಪ್ಪಮ್ಮ, ಯಲ್ಲಮ್ಮ, ರತ್ನಮ್ಮ, ಸುಲೋಚನಮ್ಮ, ಸಂಜೀವಮ್ಮ, ಯಶೋದಮ್ಮ, ಕೊಲ್ಲಮ್ಮ, ಶಾರದಮ್ಮ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.