ಜಗಳೂರು: ತಾಲೂಕಿನ ಹಲವೆಡೆ ಸೋಮವಾರ ಸಂಜೆ ಸುರಿದ ಗುಡುಗು ಸಹಿತ ಬಿರುಗಾಳಿ ಮಳೆಗೆ ಬಾಳೆ ಬೆಳೆ ನೆಲಕಚ್ಚಿವೆ.
ತಾಲೂಕಿನ ತೋರಣಗಟ್ಟೆ, ಜಮ್ಮಾಪುರ, ಕಲ್ಲೇದೇವರಪುರ, ಆಕನೂರು, ಕಟ್ಟಿಗೆಹಳ್ಳಿ, ಅರಿಶಿಣಗುಂಡಿ, ನಿಬಗೂರು, ಬಿದರಕೆರೆ, ಲಿಂಗಣ್ಣನಹಳ್ಳಿ ಗ್ರಾಮಗಳಲ್ಲಿ ಅರ್ಧ ತಾಸಿಗೂ ಅಧಿಕ ಮಳೆ ಸುರಿದಿದ್ದು, ಬಾಳೆ ಗಿಡಗಳು ಗೊನೆ ಸಹಿತ ನೆಲಕ್ಕೆ ಮುರಿದು ಬಿದ್ದಿವೆ.
ಕಳೆದ ವರ್ಷ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಒಂದು ಕಡೆ ಸಂತೋಷವಾದರೆ, ಮತ್ತೊಂದು ಕಡೆ ಬಾಳೆ ಬೆಳೆದ ರೈತರು ನಷ್ಟ ಅನುಭವಿಸುವಂತಾಗಿದೆ. 20 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಬಾಳೆ ಹಾಳಾಗಿದೆ.
ತೋರಣಗಟ್ಟೆ ಗ್ರಾಮದ ಹುಲಿಕುಂಟಪ್ಪ, ಕಟ್ಟಿಗೆಹಳ್ಳಿ ಗ್ರಾಮದ ಕೆ.ಎಸ್. ಬಸವರಾಜ್, ಕೆ.ಬಿ. ಕರಿಬಸವನಗೌಡ, ಸಿದ್ದಮ್ಮ, ಚೇತನ್ ಕುಮಾರ್, ಕೆ.ಎನ್. ರವಿಕುಮಾರ್ ಮತ್ತಿತರ ರೈತರ ಬಾಳೆ ಗಿಡಗಳು ನೆಲಕ್ಕೆ ಅಪ್ಪಳಿಸಿವೆ.
ಕಳೆದ ವರ್ಷ ಮಳೆ ಬಾರದಿದ್ದರೂ ಅಂತರ್ಜಲ ಮಟ್ಟ ಕುಸಿತದಿಂದ ನೀರು ಇಲ್ಲದೇ ನೀರು ಖರೀದಿಸಿ, ಲಕ್ಷಾಂತರ ರೂ. ಖರ್ಚು ಮಾಡಿ ಬಾಳೆ ಬೆಳೆದಿದ್ದರು.
ತೋಟಗಾರಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ರೈತರಾದ ಬಸವರಾಜ್, ಸಿದ್ದಮ್ಮ, ಕರಿಬಸವನಗೌಡ ಮತ್ತಿತರ ರೈತರು ಆಗ್ರಹಿಸಿದ್ದಾರೆ.