ರಾಂಚಿ: ಜಾರ್ಖಂಡ್ನ ಕಾಂಗ್ರೆಸ್ ಶಾಸಕ ಜೈಮಂಗಲ್ ಸಿಂಗ್ ಮನೆಯ ಮೇಲೆ ಮತ್ತು ಕಾಂಗ್ರೆಸ್ ಶಾಸಕ ಪ್ರದೀಪ್ ಯಾದವ್ ಆಸ್ತಿಗಳ ಮೇಲೆ ಇಂದು (ನ.4) ಐಟಿ ರೇಡ್ ಆಗಿದೆ.
ಕುತೂಹಲಕಾರಿ ವಿಷಯ ಏನಪ್ಪಾ ಅಂದ್ರೆ ನಿನ್ನೆಯಷ್ಟೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಇ.ಡಿ. ಮತ್ತು ಕೇಂದ್ರ ಸರ್ಕಾರಕ್ಕೆ ತಪ್ಪು ಮಾಡಿದ್ರೆ ತಮ್ಮನ್ನು ಬಂಧಿಸುವಂತೆ ಸವಾಲು ಹಾಕಿದ್ದರು.
ಹೇಮಂತ್ ಸೊರೆನ್ ಗುರುವಾರ (ಅ.27) ಇ.ಡಿ.ಯ ಮುಂದೆ ವಿಚಾರಣೆಗಾಗಿ ಹಾಜರಾಗಬೇಕಿತ್ತು. ಆದರೆ ಅವರು ಛತ್ತೀಸ್ಗಢ ಸರ್ಕಾರ ಆಯೋಜಿಸಿದ್ದ ಬುಡಕಟ್ಟು ಉತ್ಸವದಲ್ಲಿ ಭಾಗವಹಿಸಲು ರಾಯ್ಪುರಕ್ಕೆ ತೆರಳಿದ್ದರು. ತೆರಳುವ ಮುನ್ನ ತಮ್ಮ ಅಧಿಕೃತ ನಿವಾಸದ ಹೊರಗೆ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕರ್ತರಿಗೆ ಬಿಜೆಪಿ ವಿರುದ್ಧ ಸುದೀರ್ಘ ರಾಜಕೀಯ ಹೋರಾಟಕ್ಕೆ ಸಿದ್ಧರಾಗಿರಲು ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಜೈಮಂಗಲ್ ಸಿಂಗ್ ‘ರಾಂಚಿ, ಬರ್ಮೊ ಮತ್ತು ಪಾಟ್ನಾದಲ್ಲಿರುವ ನನ್ನ ಆಸ್ತಿಗಳ ಮೇಲೆ ಐಟಿ ದಾಳಿ ನಡೆಸುತ್ತಿದೆ. ಅವರು ಇತರ ಕೆಲವು ರಾಜಕಾರಣಿಗಳ ವಿರುದ್ಧವೂ ದಾಳಿ ನಡೆಸುತ್ತಿದ್ದಾರೆಂದು ಕೇಳಿದೆ. ಬಿಜೆಪಿಯ ವಿರುದ್ಧ ಮಾತನಾಡುವವರು ದಾಳಿಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದರು. (ಏಜೆನ್ಸೀಸ್)