ಧರ್ಮಶಾಲಾ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಮುಕ್ತಾಯಗೊಂಡಿದ್ದು, ನಿರೀಕ್ಷೆಯಂತೆ ಅತಿಥೇಯರು ಮೇಲುಗೈ ಸಾಧಿಸುವ ಮೂಲಕ ಸರಣಿಯನ್ನು 4-1 ಅಂತರದಲ್ಲಿ ಜಯಿಸಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಕೊನೆಯ ಪಂದ್ಯವನ್ನು ಇನಿಂಗ್ಸ್ ಮತ್ತು 64 ರನ್ಗಳಿಂದ ಗೆದ್ದ ಟೀಮ್ ಇಂಡಿಯಾ ಪ್ರದರ್ಶನದ ಮೂಲಕ ಟೆಸ್ಟ್ಗೆ ಹೊಸ ಮೆರಗು ತಂದಿದಲ್ಲದೆ, ತಮ್ಮ ಆಟದ ಶೈಲಿಯಿಂದ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಿದ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಹಲವು ಆಟಗಾರರಿಗೆ ಕೊಕ್ ನೀಡುವ ಮೂಲಕ ಬಿಸಿಸಿಐ ಶಾಕ್ ನೀಡಿತ್ತು. ಮುಖ್ಯವಾಗಿ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ಗೆ ಕೊಕ್ ನೀಡುವ ಮುಲಕ ಶಾಕ್ ನೀಡಿದ್ದ ಬಿಸಿಸಿಐ ಮುಂಬರುವ ಟಿ-20 ವಿಶ್ವಕಪ್ಗೂ ಈ ಇಬ್ಬರು ಆಟಗಾರರನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಅನುಮಾನ ಎಂದು ಹೇಳಲಾಗಿದೆ.
ಇನ್ನು ಈ ಇಬ್ಬರು ಆಟಗಾರರನ್ನು ಗುತ್ತಿಗೆ ಪಟ್ಟಿಯಿಂದ ಕೈ ಬಿಟ್ಟ ವಿಚಾರ ಕ್ರೀಡಾ ವಲಯದಲ್ಲಿ ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿತ್ತು. ಈ ವಿಚಾರವಾಗಿ ಪರ-ವಿರೋಧದ ಚರ್ಚೆಗಳು ನಡೆದಿದ್ದವು. ಇದೀಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮೊದಲ ಭಾರಿಗೆ ಈ ಬಗ್ಗೆ ಮೌನ ಮುರಿದಿದ್ದು, ಈ ಇಬ್ಬರು ಆಟಗಾರರ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಆಂಗ್ಲರ ವಿರುದ್ಧ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಟೀಮ್ ಇಂಡಿಯಾ
ಇಬ್ಬರೂ ಆಟಗಾರರು ಇನ್ನೂ ಟೀಂ ಇಂಡಿಯಾದ ಯೋಜನೆಗಳ ಭಾಗವಾಗಿದ್ದಾರೆ. ಅವರು ಯಾವಾಗಲೂ ತಂಡದ ಯೋಜನೆಯ ಭಾಗವಾಗಿದ್ದಾರೆ ಮತ್ತು ದೇಶೀಯ ಕ್ರಿಕೆಟ್ ಆಡುವವರು ಯಾವಾಗಲೂ ತಂಡದ ಭಾಗವಾಗಿರುತ್ತಾರೆ. ಬಿಸಿಸಿಐ ಕೇಂದ್ರ ಒಪ್ಪಂದದಿಂದ ಈ ಇಬ್ಬರು ಆಟಗಾರರನ್ನು ಕೈಬಿಡುವಲ್ಲಿ ನನ್ನ ಪಾತ್ರವೇನು ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಯಾವ ಆಟಗಾರನಿಗೆ ಗುತ್ತಿಗೆ ಸಿಗುತ್ತದೆ ಎಂಬುದನ್ನು ನಿರ್ಧರಿಸುವವನು ನಾನಲ್ಲ. ಆಯ್ಕೆ ಮಂಡಳಿ ಇದನ್ನು ನಿರ್ಧರಿಸುತ್ತಾರೆ. ಅಲ್ಲದೇ ಒಪ್ಪಂದದ ಮಾನದಂಡವೂ ನನಗೆ ತಿಳಿದಿಲ್ಲ. 15 ಆಟಗಾರರ ತಂಡವನ್ನು ಆಯ್ಕೆ ಮಾಡುವಾಗ ಮಾತ್ರ ನನ್ನ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುತ್ತದೆ. ಆ ನಂತರ ನಾನು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿ ಆಡುವ ಹನ್ನೊಂದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಇದನ್ನು ಬಿಟ್ಟರೆ ಆಟಗಾರರು ಒಪ್ಪಂದವನ್ನು ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದು ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.