More

    ಧನುಷ್​-ಐಶ್ವರ್ಯಾ ಡಿವೋರ್ಸ್​ಗೆ ಇದೇ ಕಾರಣ? ವರ್ಷಗಳ ನಂತರ ಬಹಿರಂಗವಾಯಿತು ಸತ್ಯ!

    ಚೆನ್ನೈ: ವಿಚ್ಛೇದನ ಘೋಷಣೆ ಮಾಡಿದ ಎರಡು ವರ್ಷಗಳ ಬಳಿಕ ಮಾಜಿ ತಾರಾದಂಪತಿಯಾದ ನಟ ಧನುಷ್​ ಹಾಗೂ ಸೂಪರ್​ಸ್ಟಾರ್​ ರಜಿನಿಕಾಂತ್​ ಪುತ್ರಿ ಐಶ್ವರ್ಯಾ ರಜಿನಿಕಾಂತ್​ ಇತ್ತೀಚೆಗಷ್ಟೇ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾರೆ. ಕೊನೆಗೂ ತಮ್ಮ ಡಿವೋರ್ಸ್​ಗೆ ಅಧಿಕೃತ ಮುದ್ರೆ ಹೊತ್ತಲು ಮುಂದಾಗಿದ್ದಾರೆ. ಇಬ್ಬರು ಮತ್ತೆ ಒಂದಾಗಬಹುದು ಎಂಬ ಅಭಿಮಾನಿಗಳ ಆಸೆಗೆ ಮಾಜಿ ತಾರಾ ದಂಪತಿ ತಣ್ಣೀರು ಎರೆಚಿದ್ದಾರೆ.

    ಐಶ್ವರ್ಯಾ ಮತ್ತು ಧನುಷ್​ ಬೇರೆಯಾಗಲು ಕಾರಣ ಏನು ಎಂಬ ಪ್ರಶ್ನೆಗೆ ಕಾಲಿವುಡ್​ ಅಂಗಳದಲ್ಲಿ ನಾನಾ ಉತ್ತರಗಳು ಹರಿದಾಡಿತು. ಒಬ್ಬೊಬ್ಬರು ಒಂದು ಸಂಗತಿಯನ್ನು ಬಿಚ್ಚಿಟ್ಟರು. ಅದರಲ್ಲಿ ಅಮಲಾ ಪೌಲ್​ ಜತೆಗಿನ ಅಕ್ರಮ ಸಂಬಂಧ ಆರೋಪವೂ ಒಂದು. ಅಲ್ಲದೆ, ಧನುಷ್​ ಅವರ ಕೆಲಸದ ಸ್ವಭಾವವೇ ಕಾರಣ ಎಂದು ಸ್ನೇಹಿತರು ಹೇಳಿದ್ದರು. ಸಿನಿಮಾವೇ ತನ್ನ ಸರ್ವಸ್ವ ಎಂದು ಭಾವಿಸಿರುವ ಧನುಷ್​, ಕುಟುಂಬಕ್ಕೆ ಸಮಯ ನೀಡುತ್ತಿರಲಿಲ್ಲ. ಇದೇ ವಿಚಾರಕ್ಕೆ ಐಶ್ವರ್ಯಾ ಜತೆ ಜಗಳವು ನಡೆಯುತ್ತಿತ್ತು. ಆದರೆ, ಜಗಳದ ನಂತರವೂ ಧನುಷ್​ ಹೊಸ ಚಿತ್ರಗಳಿಗೆ ಸಹಿ ಹಾಕುತ್ತಿದ್ದರು ಎಂದು ಸ್ನೇಹಿತರೊಬ್ಬರು ಹೇಳಿದ್ದರು.

    ಆದರೆ, ಹಲವು ವರ್ಷಗಳ ಬಳಿಕ ಮತ್ತೊಂದು ಕಾರಣ ಬಹಿರಂಗವಾಗಿದೆ. ಕಾಲಿವುಡ್​ ಹಿರಿಯ ಪತ್ರಕರ್ತ, ಸಿನಿಮಾ ವಿಮರ್ಶಕ ಚೆಯ್ಯರು ಬಾಲು ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಅವರ ಪ್ರಕಾರ ರಜನಿ ಕುಟುಂಬ, ಧನುಷ್​ ಕುಟುಂಬಕ್ಕೆ ಸರಿಯಾದ ಗೌರವ ತೋರದೇ ಇದ್ದಿದ್ದು ಕಾರಣ ಎಂದು ಆರೋಪಿಸಿದ್ದಾರೆ.

    ಧನುಷ್​ ಸ್ಟಾರ್​ ನಟನಾಗಿ ಮಿಂಚುತ್ತಿದ್ದ ಕಾಲದಲ್ಲೇ ಐಶ್ವರ್ಯಾ ಪ್ರೀತಿಯ ಬಲೆಯಲ್ಲಿ ಬಿದ್ದರು. ಐಶ್ವರ್ಯಾ, ಧನುಷ್​ಗಿಂತ ಹಿರಿಯಳು. ಧನುಷ್​ ರಜಿನಿ ಅಳಿಯನಾದಾಗ ಅವರ ಸಹ ಕಲಾವಿದರಿಗೆಲ್ಲ ಧನುಷ್​ ಮೇಲೆ ಅಸೂಹೆ ಇತ್ತಂತೆ. ಆ ಸಮಯದಲ್ಲಿ ರಜಿನಿ ಯಶಸ್ಸಿನ ಉತ್ತುಂಗದಲ್ಲಿದ್ದರು.

    ಐಶ್ವರ್ಯಾ ಮತ್ತು ಧನುಷ್​ 2004ರಲ್ಲಿ ಮದುವೆಯಾದರು. ದಂಪರಿಗೆ ಯಾತ್ರಾ ಮತ್ತು ಲಿಂಗ ಹೆಸರಿನ ಇಬ್ಬರು ಮಕ್ಕಳಿದ್ದರು. 18 ವರ್ಷಗಳ ಕಾಲ ಒಟ್ಟಿಗೆ ಬಾಳಿ ಬದುಕಿದ ದಂಪತಿ ನಡುವೆ ಇದ್ದಕ್ಕಿದ್ದಂತೆ ಏನಾಯಿತು? ಯಾಕೆ ಡಿವೋರ್ಸ್​ ನೀಡಿದರು ಎಂಬ ಪ್ರಶ್ನೆಗೆ ಕಾಲಿವುಡ್​ ಮಂದಿಯನ್ನು ಕಾಡಿತು. ಸಾಕಷ್ಟು ವದಂತಿಗಳು ಹಬ್ಬಿದವು. ಇದೀಗ ಮತ್ತೊಂದು ವದಂತಿಯನ್ನು ಸೆಯ್ಯರು ಬಾಲು ಹರಿಬಿಟ್ಟಿದ್ದಾರೆ. ಅದೇನೆಂದರೆ, ಧನುಷ್ ಅವರ ತಾಯಿ ಮತ್ತು ತಂದೆ ಇಬ್ಬರೂ ರಜನಿ ಮನೆಗೆ ಹೋದಾಗ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಮತ್ತು ಗೌರವದಿಂದ ಕಾಣುತ್ತಿರಲಿಲ್ಲವಂತೆ. ಅಲ್ಲಿಂದ ಶುರುವಾದ ಸಮಸ್ಯೆ ದೊಡ್ಡದಾಗಿ ಸ್ಫೋಟಗೊಂಡಿದೆ ಎಂದು ಚೆಯ್ಯರು ಬಾಲು ಹೇಳಿದ್ದಾರೆ.

    Dhanush

    ಈ ಸಿಟ್ಟಿನಲ್ಲೇ ನಟ ಧನುಷ್ ಪೋಯಸ್ ಗಾರ್ಡನ್​ನಲ್ಲಿ ಬೃಹತ್ ಮನೆ ನಿರ್ಮಿಸಿ, ತಂದೆ-ತಾಯಿಯನ್ನು ಇರಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಚೆಯ್ಯರು ಬಾಲು ಅವರು ಈ ಮಾತು ಎಷ್ಟು ಸತ್ಯವೋ ಆ ದೇವರೆ ಬಲ್ಲ. ಇದೇ ರೀತಿ ಸಾಕಷ್ಟು ಸಿನಿಮಾ ವಿಚಾರಗಳನ್ನು ಚೆಯ್ಯರು ಬಾಲು ಬಹಿರಂಗಪಡಿಸುತ್ತಲೇ ಇರುತ್ತಾರೆ.

    ಅಂದಹಾಗೆ ಪರಸ್ಪರ ಒಪ್ಪಿಗೆ ಮೇರೆಗೆ ಸೆಕ್ಷನ್​ 13 ಬಿ ಅಡಿಯಲ್ಲಿ ಐಶ್ವರ್ಯಾ ಮತ್ತು ಧನುಷ್​ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾರೆ. ತಾವಿಬ್ಬರು ಒಪ್ಪಿ ಬೇರೆಯಾಗುತ್ತಿರುವುದಾಗಿ 2022ರ ಜನವರಿಯಲ್ಲಿ ಸಾಮಾಜಿಕ ಜಾಲತಾಣ ಮೂಲಕ ಘೋಷಣೆ ಮಾಡಿದ್ದರು. ಆ ಸಮಯದಲ್ಲಿ ಈ ಸಂಗತಿ ಅಭಿಮಾನಿಗಳಿಗೆ ಭಾರಿ ಆಘಾತವನ್ನು ಉಂಟುಮಾಡಿತು. ಸುಮಾರು ಎರಡು ವರ್ಷಗಳ ಬಳಿಕ ಇಬ್ಬರು ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಇಬ್ಬರ ಡಿವೋರ್ಸ್​ ಅರ್ಜಿ ವಿಚಾರಣೆ ನಡೆಯಲಿದೆ. ತಮ್ಮ ಮಕ್ಕಳಾದ ಯಾತ್ರ ಮತ್ತು ಲಿಂಗ ಅವರ ಶಾಲಾ ಕಾರ್ಯಕ್ರಮಗಳಲ್ಲಿ ಮಾತ್ರ ಇಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.

    ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ
    2022ರ ಜನವರಿ 17 ರಂದು ಟ್ವೀಟ್​ ಮೂಲಕ ಡಿವೋರ್ಸ್​ ಖಚಿತಪಡಿಸಿದ ಧನುಷ್​, ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ಈ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ ಎಂದು ಧನುಷ್​ ಟ್ವೀಟ್​ ಮಾಡಿದ್ದರು. ಅಲ್ಲದೆ, ಜನರಲ್ಲಿ ಮನವಿಯೊಂದನ್ನು ಮಾಡಿ, ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ ಎಂದಿದ್ದರು.

    ಐಶ್ವರ್ಯಾ ಕೂಡ ಪ್ರತಿಕ್ರಿಯೆ ನೀಡಿ, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದರು.

    ಡಿವೋರ್ಸ್​ ಘೋಷಣೆ ಬಳಿಕ ಕಾಲಿವುಡ್​ ಅಂಗಳದಲ್ಲಿ ಸಾಕಷ್ಟು ಚರ್ಚೆಯಾಯಿತು. ಆದರೆ, ಇದ್ಯಾವುದಕ್ಕೂ ಕಿವಿಗೊಡದೆ ಐಶ್ವರ್ಯಾ ಮತ್ತು ಧನುಷ್​ ತಮ್ಮ ತಮ್ಮ ಸಿನಿಮಾಗಳಲ್ಲಿ ಬಿಜಿಯಾದರು. ಐಶ್ವರ್ಯಾ ನಿರ್ದೇಶನದ ಲಾಲ್​ ಸಲಾಮ್​ ಸಿನಿಮಾ ಕೆಲ ತಿಂಗಳುಗಳ ಹಿಂದಷ್ಟೇ ಬಿಡುಗಡೆಯಾಗಿ ಒಳ್ಳೆಯ ರೆಸ್ಪಾನ್ಸ್​ ಪಡೆದುಕೊಂಡಿತು. ಧನುಷ್​ ಕೂಡ ವಾಥಿ, ಕ್ಯಾಪ್ಟನ್​ ಮಿಲ್ಲರ್​ ಸಿನಿಮಾಗಳಲ್ಲಿ ನಟಿಸಿದರು. ಇದೀಗ ರಾಯನ್​ ಹೆಸರಿನ ಸಿನಿಮಾವನ್ನು ತಾವೇ ನಿರ್ದೇಶನ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ಧನುಷ್​ ಮತ್ತು ಐಶ್ವರ್ಯಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts