ಬೆಂಗಳೂರು: ಸದಾ ಯಾವುದಾದರೂ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ರಶ್ಮಿಕಾ ಮಂದಣ್ಣ ಇದೀಗ ಮತ್ತೊಂದು ಸ್ಫೋಟಕ ಸುದ್ದಿಗೆ ಕಾರಣರಾಗಿದ್ದಾರೆ.ದುಬೈನ ಸಿನಿಮಾ ವಿಮರ್ಶಕ ಒಬ್ಬರ ಪ್ರಕಾರ ರಶ್ಮಿಕಾ ಮಂದಣ್ಣರನ್ನು ಕನ್ನಡ ಸಿನಿಮಾದಿಂದ ಬ್ಯಾನ್ ಮಾಡಲಾಗಿದೆಯಂತೆ!
ರಕ್ಷಿತ್ ಶೆಟ್ಟಿ ಜೊತೆಗೆ ಬ್ರೇಕಪ್ ಮಾಡಿಕೊಂಡ ರಶ್ಮಿಕಾ ಮಂದಣ್ಣ ಗೀತಾ ಗೋವಿಂದಂ ಚಿತ್ರದ ಮುಖಾಂತರ ಸುದ್ದಿಯಾಗಿದ್ದರು. ಈ ವಿಚಾರವಾಗಿ ಅವರು ಕನ್ನಡ ಸಿನಿಮಾ ಅಭಿಮಾನಿಗಳ ವಿರೋಧಕ್ಕೆ ಗುರಿಯಾಗಿದ್ದರು, ನಂತರ ಅನೇಕ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಅವರು ಯಶಸ್ಸಿನ ಬೆನ್ನೇರಿದ್ದರು. ನಂತರ ಅವರು ಕನ್ನಡದ ಪೊಗರು ಸಿನಿಮಾದಲ್ಲಿ ನಟಿಸಿದ್ದ ಸಂದರ್ಭದಲ್ಲಿ ಅವರ ಬಾಯಿಂದಲೇ ಬಂದಿದ್ದ ಡೈಲಾಗ್ನಿಂದಾಗಿ ಟ್ರೋಲ್ಗೆ ಒಳಗಾಗಿದ್ದರು. ಇತ್ತೀಚೆಗೆ ಕಾಂತಾರ ಸಿನಿಮಾ ತೆರೆಗೆ ಬಂದ ಮೇಲೆ ರಿಷಭ್ ಶೆಟ್ಟಿ ಕೂಡ ರಶ್ಮಿಕಾರನ್ನ ಕೈ ಸನ್ನೆ ಮೂಲಕ ಟ್ರೋಲ್ ಮಾಡಿದ್ದರು.
ಇದೀಗ ದುಬೈನ ಸಿನಿಮಾ ವಿಮರ್ಶಕ, ಸೆನ್ಸಾರ್ ಮಂಡಳಿಯ ಸದಸ್ಯ ಉಮೈರ್ ಸಂಧು ರಶ್ಮಿಕಾ ಮಂದಣ್ಣ ಬಗ್ಗೆ ಟ್ವೀಟ್ ಮಾಡಿದ್ದು ಅದು ಭಾರಿ ಸಂಚಲನ ಮೂಡಿಸುತ್ತಿದೆ.
ಸಿನಿಮಾ ವಿಮರ್ಶಕ ಉಮೈರ್ ಸಂಧು ರಶ್ಮಿಕಾ ಮಂದಣ್ಣರನ್ನ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಕನ್ನಡ ಸಿನಿಮಾಗಳಿಗೆ ಗೌರವ ಕೊಡದ ಹಿನ್ನೆಲೆಯಲ್ಲಿ ರಶ್ಮಿಕಾರನ್ನ ಬ್ಯಾನ್ ಮಾಡಲಾಗಿದೆ ಎಂದು ಸಂಧು ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ. ಆದರೆ ಈ ವಿಚಾರವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಯಾವುದೇ ಅಧಿಕೃತ ಘೋಷಣೆ ಹೊರ ಬಿದ್ದಿಲ್ಲ. ಈ ವಿಚಾರ ಇನ್ನು ಯಾವ ದಿಕ್ಕನ್ನು ಪಡೆದುಕೊಳ್ಳುತ್ತದೆ ಎನ್ನುವುದು ಕುತೂಹಲಕಾರಿ ಸಂಗತಿ.