ಇಸ್ಲಾಮಾಬಾದ್: ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯತ್ತಿದ್ದಾಗ ದುರಂತಕ್ಕೀಡಾಗಿ 97 ಜನರನ್ನು ಬಲಿ ಪಡೆದ ಪಾಕಿಸ್ತಾನದ ವಿಮಾನ ದುರಂತಕ್ಕೆ ಕರೊನಾ ಕಾರಣ…!
ಹೌದು… ಇಂಥದ್ದೊಂದು ಅಚ್ಚರಿಯ ವಿಚಾರವನ್ನು ತನಿಖಾಧಿಕಾರಿಗಳು ಬಯಲು ಮಾಡಿದ್ದಾರೆ. ಆರಂಭದಲ್ಲಿ ವಿಮಾನ ದುರಂತಕ್ಕೆ ಪೈಲಟ್ ಕಾರಣ ಎಂದು ಆರೋಪಿಸಲಾಗಿತ್ತು. ಹಲವು ನಿಗದಿತ ನಿಯಮಗಳ ಪಾಲನೆಯಾಗದಿರುವುದು ಮುಂದುವರಿದ ತನಿಖೆಯಲ್ಲಿ ಗೊತ್ತಾಗಿದೆ ಎಂದು ವಿಮಾನ ಯಾನ ಸಚಿವ ಗುಲಾಂ ಸರ್ವರ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ; ನೂರಾರು ಜನರ ಪ್ರಾಣ ಉಳಿಸಿದ ಏರ್ ಇಂಡಿಯಾ ಸಿಬ್ಬಂದಿ
ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ಲೈನ್ಸ್ ವಿಮಾನ ಕರಾಚಿಯಲ್ಲಿ ಕೆಳಗಿಳಿಯುವ ಕೆಲವೇ ಕ್ಷಣಗಳ ಮುನ್ನ ಲ್ಯಾಂಡಿಂಗ್ ಸಾಧ್ಯವಾಗದೇ ಪಕ್ಕದ ಜನವಸತಿ ಪ್ರದೇಶದ ಮೇಲೆ ಅಪ್ಪಳಿಸಿತ್ತು. ವಿಮಾನ ಹಾರಾಟದ ವೇಳೆ ಪೈಲಟ್ಗಳು ತಮ್ಮ ಗಮನವನ್ನು ಕೇಂದ್ರೀಕರಿಸಿರಲಿಲ್ಲ. ಪ್ರಯಾಣದುದ್ದಕ್ಕೂ ಕರೊನಾ ಮಹಾಮಾರಿಯ ಬಗ್ಗೆಯೇ ಚರ್ಚೆ ನಡೆಸಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ಪೈಲಟ್ ಎಟಿಸಿ ಮೂಲಕ ನೀಡಲಾದ ನಿರ್ದೇಶನಗಳನ್ನು ಪಾಲಿಸಿಲ್ಲ, ಇನ್ನೊಂದೆಡೆ, ಎಟಿಸಿ ಕೂಡ ಇಂಜಿನ್ಗೆ ಧಕ್ಕೆಯಾಗಿರುವುದನ್ನು ಪೈಲಟ್ಗೆ ತಿಳಿಸಿರಲಿಲ್ಲ ಎಂದು ಸಚಿವ ಗುಲಾಂ ಸರ್ವರ್ ಖಾನ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ನಿಗದಿತ ನಿಯಮಗಳ ಪಾಲನೆಯಾಗದಿರುವುದೇ ದುರಂತಕ್ಕೆ ಕಾರಣ ಎಂದು ಹೇಳಿದ್ದಾರೆ.
ಇದನ್ನೂ ಓದಿ; ಪಾಕ್ ವಿಮಾನ ದುರಂತಕ್ಕೆ ಪೈಲಟ್ ಕಾರಣಾದನೇ?
ಲ್ಯಾಂಡಿಗ್ ಸಮಯದಲ್ಲೂ ಪೈಲಟ್ಗಳು ಕರೊನಾ ಬಗ್ಗೆ ಮಾತನಾಡುತ್ತಿದ್ದರು. ಅವರ ಗಮನ ಕೇಂದ್ರೀಕೃತವಾಗಿರಲಿಲ್ಲ. ಅವರ ಕುಟುಂಬಗಳು ಸೋಂಕಿಗೆ ಒಳಗಾಗಿರುವ ಬಗ್ಗೆ ಸಂವಾದ ನಡೆದಿತ್ತು. ವಿಮಾನವನ್ನು ಎತ್ತರಕ್ಕೆ ಕೊಂಡೊಯ್ಯುವಂತೆ ಹೇಳಿದಾಗಲೂ ಪೈಲಟ್ ನಾನು ನೋಡಿಕೊಳ್ಳುತ್ತೇನೆ ಎಂದು ಉತ್ತರಿಸಿದ್ದ. ಇದು ಅತಿಯಾದ ಆತ್ಮವಿಶ್ವಾಸವಾಗಿತ್ತು ಎಂದು ಅವರು ಹೇಳಿದ್ದಾರೆ.
ಕಳೆದ ಮೇ 22ರಂದು ಲಾಹೋರ್ನಿಂದ ಕರಾಚಿಗೆ ಬರುತ್ತಿದ್ದ ಏರ್ಬಸ್ 320 ವಿಮಾನ ವಿಮಾನ ನಿಲ್ದಾಣದ ಬಳಿಯೇ ದುರಂತಕ್ಕೀಡಾಗಿತ್ತು. ಇಬ್ಬರು ಪವಾಸದೃಶ್ಯರಾಗಿ ಬದುಕುಳಿದಿದ್ದರು.
ದುಸ್ವಪ್ನವಾದ ಆನ್ಲೈನ್ ತರಗತಿ; ಆರನೇ ತರಗತಿ ವಿದ್ಯಾರ್ಥಿನಿಯರಿಗೆ ಅತ್ಯಾಚಾರ ಬೆದರಿಕೆ