ಹೈದರಾಬಾದ್: ಕರೊನೋತ್ತರದಲ್ಲಿ ಜನರನ್ನು ಚಿತ್ರಮಂದಿರಗಳತ್ತ ಸೆಳೆಯಲು ಚಿತ್ರಮಂದಿರಗಳಲ್ಲಿ ಮದ್ಯ ಸರಬರಾಜು ಮಾಡಬೇಕು ಎಂದು ತೆಲುಗು ಚಿತ್ರರಂಗದ ಉದಯೋನ್ಮುಖ ನಿರ್ದೇಶಕ ನಾಗ್ ಅಶ್ವಿನ್ ಸಲಹೆ ನೀಡಿದ್ದಾರೆ. ಆದರೆ, ಇವರ ಈ ಸಲಹೆ ನೆಟ್ಟಿಗರಿಗೆ ಇಷ್ಟವಾಗಿಲ್ಲ. ಹಾಗಾಗಿ ಅವರೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ನಾಗ್ ಅಶ್ವಿನ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಭಾನುವಾರ ಅವರು ಸಂದೇಶವೊಂದನ್ನು ಹಾಕಿದ್ದು, ಹಲವು ರಾಷ್ಟ್ರಗಳಲ್ಲಿ ಚಿತ್ರಮಂದಿರಗಳಲ್ಲಿ ಮದ್ಯ ಸರಬರಾಜು ಮಾಡಲಾಗುತ್ತದೆ. ಅದರಂತೆ, ಕರೊನೋತ್ತರದಲ್ಲಿ ಜನರನ್ನು ಚಿತ್ರಮಂದಿರಗಳತ್ತ ಸೆಳೆಯಲು ನಮ್ಮಲ್ಲೂ ಬಿಯರ್/ಬ್ರೀಜರ್/ವೈನ್ ಮತ್ತಿತರ ಮದ್ಯದ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟರೆ ಹೇಗೆ ಎಂದು ಸುರೇಶ್ ಬಾಬು ಮತ್ತು ರಾಣಾ ಅವರೊಂದಿಗೆ ಚರ್ಚಿಸಿದ್ದೆ ಎಂದು ಹೇಳಿದ್ದರು.
ಈ ರೀತಿ ಮಾಡುವುದರಿಂದ, ಪ್ರೇಕ್ಷಕರ ಕೊರತೆಯಿಂದ ಬಳಲುತ್ತಿರುವ ಚಿತ್ರಮಂದಿರಗಳನ್ನು ಕಾಪಾಡಲು ಅನುಕೂಲವಾಗುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಈ ಕ್ರಮ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬುದನ್ನು ಸ್ಪಷ್ಟಪಡಿಸುವಂತೆ ಮನವಿ ಮಾಡಿಕೊಂಡಿದ್ದರು.
ಆದರೆ, ನಾಗ್ ಅಶ್ವಿನ್ ಅವರ ಈ ಸಲಹೆ ನೆಟ್ಟಿಗರಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು, ಜನರು ಕುಟುಂಬ ಸಮೇತರಾಗಿ ಚಿತ್ರಮಂದಿರಗಳಿಗೆ ಬರುತ್ತಾರೆ. ಮಕ್ಕಳು ಕೂಡ ಇರುತ್ತಾರೆ. ಹಾಗಾಗಿ, ಚಿತ್ರಮಂದಿರಗಳಲ್ಲಿ ಮದ್ಯ ಮಾರಾಟ ಮಾಡುವುದು ಸರಿಯಲ್ಲ. ಇದರಿಂದ ಚಿತ್ರಮಂದಿರಗಳಲ್ಲಿ ಅನಗತ್ಯ ಗಲಾಟೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ ಶನಿವಾರ ಮರಳಿದ ವಲಸೆ ಕಾರ್ಮಿಕರ ಸಂಖ್ಯೆ ಇಲ್ಲಿದೆ ನೋಡಿ
ನೆಟ್ಟಿಗರ ಈ ವಾದವನ್ನು ಒಪ್ಪಿಕೊಂಡ ನಾಗ್ ಅಶ್ವಿನ್, ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಮತ್ತೊಂದು ಸಂದೇಶ ಹಾಕಿ, ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಹೀಗೆ ಮಾಡುವುದರಿಂದ ಕುಟುಂಬ ಸಮೇತರಾಗಿ ಜನರು ಚಿತ್ರಮಂದಿರಗಳಿಗೆ ಬರುವುದು ಕಡಿಮೆಯಾಗಬಹುದು. ಆದರೆ, ಮಲ್ಟಿಪ್ಲೆಕ್ಸ್ಗಳಲ್ಲಿ ಹೀಗೆ ಮಾಡಿದರೆ ಹೇಗೆ? ಹಾಗೆಂದು ಪ್ರೇಕ್ಷಕರನ್ನು ಸೆಳೆಯಲು ಇರುವುದು ಇದೊಂದೇ ಮಾರ್ಗ ಎಂದೇನಲ್ಲ. ಆದರೂ, ಜನರನ್ನು ಚಿತ್ರಮಂದಿರಗಳತ್ತ ಸೆಳೆಯಲು ಏನು ಮಾಡಬೇಕು ಎಂಬ ಬಗ್ಗೆ ಸಲಹೆ ಕೊಡಿ. ಲಾಕ್ಡೌನ್ ತೆರವುಗೊಂಡು ಚಿತ್ರಮಂದಿರಗಳು ಮತ್ತೆ ಕಾರ್ಯಾರಂಭಿಸುತ್ತಿರುವಂತೆ ನೀವೆಲ್ಲರೂ ಚಿತ್ರಮಂದಿರಗಳಿಗೆ ಬರುತ್ತೀರಾ? ಅಥವಾ ಕಾದುನೋಡುವ ತಂತ್ರಕ್ಕೆ ಮೊರೆಹೋಗುತ್ತೀರಾ ಎಂದು ಸ್ಪಷ್ಟಪಡಿಸುವಂತೆ ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆದರೆ ಇದಕ್ಕೆ ನೆಟ್ಟಿಗರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಹೇಳಲಾಗುತ್ತಿದೆ.
Once In a talk with suresh babu garu and rana, it came up what if theaters get license to serve beer/breezer/wine, like in other countries..could it increase footfalls…could it save the theater business (which does need saving)…wat do you think? Good idea, bad idea?
— Nag Ashwin (@nagashwin7) May 15, 2020
ಕಡುಗೆಂಪು ಸೀರೆಯಲ್ಲಿ ಕೆಂದಾವರೆ ಮಾರಲು ಹೊರಟ ಶ್ರದ್ಧಾ ಶ್ರೀನಾಥ್!