More

    ಭಾರತೀಯ ಸಂಸ್ಕೃತಿ ಮೌಢ್ಯವೋ ವೈಜ್ಞಾನಿಕವೋ?

    ಬಾಹ್ಯಾಂತರಿಕ್ಷಕ್ಕೆ ಹಾರುವವನ ಉಡುಪು- ಆಹಾರ ಸೇವನಾ ಕ್ರಮಗಳ ವೈಚಿತ್ರ್ಯವು ಬಾಹ್ಯಾಂತರಿಕ್ಷದ ಪರಿಚಯವಿಲ್ಲದವನಿಗೆ ನಗೆಪಾಟಲಾಗಿರುವುದಲ್ಲವೇ? ಅಂತೆಯೇ ಅಂತರಂಗ ಪ್ರಪಂಚದ ಪರಿಚಯವಿಲ್ಲದ ನಮಗೆ ಆ ಪ್ರಪಂಚಗಳ ಆಧಾರದ ಮೇಲೆ ನಿಂತಿರುವ ಭಾರತೀಯ ಸಂಸ್ಕೃತಿಯು ಮೌಢ್ಯವೆಂದೆನಿಸಿದರೆ ಅದು ನಮ್ಮ ಆಜ್ಞಾನವೇ ಹೊರತು ಮಹರ್ಷಿಗಳ ತಪ್ಪಲ್ಲ.

    | ಮೈಥಿಲೀ ರಾಘವನ್

    ಎಲ್ಲ ದೇಶಗಳಲ್ಲೂ ಅವರವರ ಮನಃಪರಿಪಾಕ ಅನುಸಾರವಾಗಿ ಸಂಸ್ಕೃತಿಯು ರೂಪುಗೊಂಡಿರುತ್ತದೆ. ಆ ಸಂಸ್ಕೃತಿ/ಮನಸ್ಸಿನ ಸ್ಥಿತಿಯು ನಡವಳಿಕೆಗಳಾಗಿ ಪರಿವರ್ತನೆಗೊಳ್ಳುವುದೇ ನಾಗರಿಕತೆ ಎನಿಸಿಕೊಳ್ಳುವುದು. ಇತರ ಸಂಸ್ಕೃತಿ-ನಾಗರಿಕತೆಗಳ ವಿಚಾರ ಹೇಗೇ ಇದ್ದರೂ ಭಾರತೀಯ ಸಂಸ್ಕೃತಿಯ ಬಗೆಗೆ ಅನೇಕ ಆಕ್ಷೇಪಗಳು ಎದ್ದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

    ಇದಕ್ಕೆ ಪ್ರಧಾನ ಕಾರಣವೆಂದರೆ ಇಲ್ಲಿನ ವಿಚಾರಗಳಲ್ಲಿ ಎದ್ದು ಕಾಣುವ ಮೌಢ್ಯ. ಈ ಸಂಸ್ಕೃತಿಯಿಂದ ಬೆಳೆದು ಬಂದಿರುವ ಬಹುಮಟ್ಟಿನ ಸಂಪ್ರದಾಯಗಳು/ಪದ್ಧತಿಗಳು, ವಿಧಿ-ನಿಷೇಧಗಳ ಪಟ್ಟಿರೂಪದಲ್ಲಿರುವ ಶಾಸ್ತ್ರಗಳು, ಆಚರಣೆಗಳು ಎಲ್ಲವೂ ಅರ್ಥಹೀನವಾಗಿಯೇ ಕಂಡುಬರುತ್ತವೆ. ಊಟ ಮಾಡಲೊಂದು ಸಮವಸ್ತ್ರ (ಯೂನಿಫಾಮ್ರ್)- ಪಂಚೆ, ಉತ್ತರೀಯ! ನೆಲದ ಮೇಲೆಯೇ ಕೂರಬೇಕಂತೆ! ಮಣೆ/ಚಾಪೆಯಂತೂ ಕಡ್ಡಾಯವಂತೆ. ಹೀಗೇಕೆ? ಟೇಬಲ್ ಮೇಲಿಟ್ಟೋ, ನಿಂತಲ್ಲಿಯೋ, ಓಡಾಡುತ್ತಲೋ ತಿಂದರೆ ಬಡಿಸುವವರಿಗೂ ಶ್ರಮ ಕಡಿಮೆಯಾಗುವುದಲ್ಲವೇ? ಹೀಗೆ ತಿಂದರೆ ಅನ್ನ ಅರಗುವುದಿಲ್ಲವೇ? ರುಚಿಸುವುದಿಲ್ಲವೇ? ಪೂಜೆಗೆ ಸ್ನಾನ ಮಾಡಿ ಮಡಿವಸ್ತ್ರವನ್ನೇ ಉಡಬೇಕೆನ್ನುವುದೇಕೆ? ಹಾಗಿಲ್ಲದಿದ್ದರೆ ದೇವರು ಪೂಜೆಯನ್ನು ಒಪ್ಪುವುದಿಲ್ಲವೇ? ಹೀಗೆ ಮೂಢನಂಬಿಕೆಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಇಂದಿನ ಜೀವನಶೈಲಿಗೆ- ಆಧುನಿಕ ಯುಗಕ್ಕೆ ಇವು ಪ್ರಸ್ತುತವಲ್ಲವೆಂದೇ ತೋರುತ್ತವೆ. ಆದ್ದರಿಂದ ಇದು ಮೌಢ್ಯವೆಂಬ ಆಪಾದನೆಯನ್ನು ತಳ್ಳಿಹಾಕುವಂತಿಲ್ಲ.

    ಈ ಸಂಸ್ಕೃತಿಯು ಇಂದಿಗೂ ಅಸಂಖ್ಯಾತ ಜನಮನವನ್ನು ಆಕರ್ಷಿಸುತ್ತಲಿರುವುದೂ ನಿಜವೇ. ಅಂತಹವರು ಇದರಿಂದ ರೂಪುಗೊಂಡ ಆಚಾರ-ವಿಚಾರಗಳನ್ನು ಪಾಲಿಸುತ್ತಿರುವುದನ್ನೂ ಕಾಣಬಹುದಾಗಿದೆ. ಆದ್ದರಿಂದ ಈ ಬಗೆಗೆ ವಿವೇಕಪೂರ್ಣವಾದ ವಿಮರ್ಶೆಯು ಸೂಕ್ತವೇ ಆಗಿದೆ.

    ಯಾವುದೇ ಕಾರ್ಯದ ಅಥವಾ ವಿಧಿ-ನಿಷೇಧಗಳ ಹಿಂದೆಯೂ ಸಾಧಿಸಬೇಕಾದ ಗುರಿಯೊಂದಿದ್ದರೆ ಮಾತ್ರವೇ ಅವುಗಳಿಗೆ ಬೆಲೆಯುಂಟು. ಇಲ್ಲದಿದ್ದರೆ ಅವೆಲ್ಲವೂ ಮೌಢ್ಯ- ವ್ಯರ್ಥ- ಅರ್ಥಹೀನವೆಂದೇ ಪರಿಗಣಿಸಲ್ಪಡುತ್ತವೆ. ವೈಜ್ಞಾನಿಕವೆಂದರೆ ಪ್ರಯೋಗ- ಪರೀಕ್ಷೆಗಳ ಮೂಲಕ ಸಿದ್ಧವಾಗುವಂತಹ- ಸಿದ್ಧಪಡಿಸಬಹುದಾದಂತಹ ಅಂಶಗಳು. ಈ ನಿಟ್ಟಿನಲ್ಲಿ ಭಾರತೀಯ ಸಂಸ್ಕೃತಿಯು ಮೌಢ್ಯವೇ- ವೈಜ್ಞಾನಿಕವೇ ಎಂಬುದನ್ನು ಪರೀಶೀಲಿಸಬೇಕಾಗಿದೆ.

    ಮಹರ್ಷಿ ಮನೋಮೂಲವಾಗಿ ಹೊರಬಂದ ಭಾರತೀಯ ಸಂಸ್ಕೃತಿಯನ್ನು ಅರಿಯಲು ಅವರ ಮನೋಧರ್ಮವನ್ನು ಅರಿಯುವುದು ಅವಶ್ಯಕವಾಗಿದೆ. ಶರೀರದೊಳಗಿನ ಸೂಕ್ಷ್ಮಾತಿಸೂಕ್ಷ್ಮವಾದ ಭಾಗಗಳನ್ನೂ ಆಧುನಿಕ ವಿಜ್ಞಾನಿಗಳು ಪ್ರಯೋಗಶಾಲೆಗಳಲ್ಲಿ ಕುಳಿತು ಸೂಕ್ಷ್ಮದರ್ಶಕ ಯಂತ್ರಗಳ ಮೂಲಕ ಅನ್ವೇಷಿಸಿ ತಿಳಿಸುವಂತೆಯೇ ಮಹರ್ಷಿಗಳೂ ಅನ್ವೇಷಣೆಯನ್ನು ನಡೆಸಿದ್ದಾರೆ. ಅವರ ಶರೀರವೇ ಅವರ ಪ್ರಯೋಗಶಾಲೆ. ಉಪಕರಣಗಳು- ತೀವ್ರ ತಪೋಲಭ್ಯವಾದ ಜ್ಞಾನದೃಷ್ಟಿ- ಯೋಗದೃಷ್ಟಿ. ತಮ್ಮ ಮನಸ್ಸು- ಬುದ್ಧಿ- ಇಂದ್ರಿಯಗಳನ್ನು ಹೊರಪ್ರಪಂಚದಿಂದ ಹಿಂಸೆಳೆದು ಶರೀರದೊಳಗೆ ಯೋಗದೃಷ್ಟಿಯಿಂದ ಮಾತ್ರವೇ ಗೋಚರಿಸುವ ಅಂಶಗಳನ್ನು ಕಂಡರು. ಒಳಬೆಳಗುವ ದೇವತಾಶಕ್ತಿಗಳನ್ನೂ, ಅವುಗಳ ಸೃಷ್ಟಿಕಾರಕ-ಚೈತನ್ಯಪ್ರದ ಪರಮಾತ್ಮನನ್ನೂ ಕಂಡರು. ಅಲ್ಲೊದಗಿದ ಆನಂದಾನುಭವವು ಭೌತಿಕ ಪ್ರಪಂಚದಲ್ಲಿ ದೊರೆಯಬಹುದಾದ ಸುಖದ ಪರಮಾವಧಿಗಿಂತಲೂ ಕೋಟಿಕೋಟಿ ಪಾಲು ಹೆಚ್ಚಿನದೆಂಬುದನ್ನು ಮನಗಂಡರು. ಅತ್ಯುನ್ನತ ಮಟ್ಟದ ಆನಂದಸಾಗರದಲ್ಲಿ ಮಿಂದು- ಮುಳುಗಿ- ವಿಹರಿಸಿದ ಅವರ ಮನಸ್ಸಿನ ಪರಿಪಾಕವೂ ಅಷ್ಟೇ ಉತ್ಕೃಷ್ಟವಾಗಿದ್ದಿತು. ಮಾನವಸಾಮಾನ್ಯರೆಲ್ಲರಿಗೂ ಇಂತಹ ಆನಂದವು ಸಿಗಲೆಂಬ ಔದಾರ್ಯ ಅವರಲ್ಲಿ ಮೂಡಿಬಂದಿತು. ಆತ್ಮಪ್ರಪಂಚದಿಂದ ಹೊರಟ ವಿಚಾರಗಳೇ ಭಾರತೀಯ ಸಂಸ್ಕೃತಿ- ನಾಗರಿಕತೆಗಳಾಗಿರುವುವು. ಇಂತಹ ಪರಮೋನ್ನತ ಉದ್ದೇಶದೊಡಗೂಡಿರುವ ಭಾರತೀಯ ಸಂಸ್ಕೃತಿಯು ಅರ್ಥಹೀನ- ಮೌಢ್ಯ ಹೇಗಾದೀತು?

    ಸಂಸ್ಕೃತಿಯ ವೈಜ್ಞಾನಿಕತೆ: ಒಂದು ಪ್ರಯೋಗವನ್ನು ಯಾವುದೇ ಕಾಲದಲ್ಲಿ ಯಾರೇ ನಡೆಸಿದರೂ ಒಂದೇ ಫಲಿತಾಂಶವು ಸಿಕ್ಕುವುದಾದರೆ ಅದು ವೈಜ್ಞಾನಿಕವೆನಿಸಿಕೊಳ್ಳುತ್ತದೆ. ಭಾರತೀಯ ಸಂಸ್ಕೃತಿಯ ವಿಚಾರವನ್ನು ಈ ಮಾನದಂಡದಿಂದ ಅಳೆಯುವುದಾದರೆ ಸಾವಿರಾರು ವರ್ಷಗಳಿಂದ ಅನೇಕಾನೇಕ ಋಷಿ- ಮಹರ್ಷಿಗಳು ತಪಸ್ಯೆಯಿಂದ ಕಂಡ ವಿಚಾರಗಳು ಸಾಮಾನ್ಯವಾಗಿ ಒಂದೇ ರೀತಿಯಾಗಿರುವುದನ್ನು ಉಪನಿಷತ್ತು- ಪುರಾಣ- ಇತಿಹಾಸಗಳು ಸಾರುತ್ತಿವೆ. ಈ ಸನಾತನ- ಸದಾತನ ಸತ್ಯವನ್ನು ತಲುಪಲು ವಿಧಿಸಲ್ಪಟ್ಟಿರುವ ವಿಧಾನಗಳೂ ಅನೇಕ ಋಷಿ ಮುನಿಗಳಿಂದ ಸುದೃಢಗೊಳಿಸಲ್ಪಟ್ಟಿವೆ.

    ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲೂ ನಮ್ಮ ಸಂಸ್ಕೃತಿಯನ್ನು ನಾವೇ ಅರಿಯದಿರುವುದೇ ಸಂಸ್ಕೃತಿ ನಾಶಕ್ಕೆ ಕಾರಣವೆಂಬ ಕೂಗು ಕೇಳಿಬರುವುದು ಸಂತಸದ ವಿಷಯವಾದರೂ ಇಂದಿನ ವೈಚಾರಿಕ ಪ್ರಪಂಚವು ಯಾವುದೇ ವಿಚಾರವಾದರೂ ಅದರ ‘ಏನು?- ಏಕೆ?- ಹೇಗೆ?’ಗಳಿಗೆ ಉತ್ತರವನ್ನು ಅಪೇಕ್ಷಿಸುತ್ತದೆ. ಆದ್ದರಿಂದ ಭಾರತೀಯ ಸಂಸ್ಕೃತಿಯ ಯಾವುದೇ ಕ್ರಿಯೆ/ ವಿಚಾರವನ್ನು ಸಮಾಜದಲ್ಲಿ ಉಳಿಸಬೇಕಾದರೂ ಅವುಗಳಲ್ಲಿನ ವಿಜ್ಞಾನವನ್ನು ಸಮಗ್ರವಾಗಿ ಅರಿಯುವುದು ಅನಿವಾರ್ಯವೇ ಸರಿ.

    ಇಲ್ಲಿ ಶ್ರೀರಂಗ ಮಹಾಗುರುಗಳ ಅದ್ಭುತ ಕೊಡುಗೆಯು ಅತ್ಯಂತ ಪ್ರಸಕ್ತವಾಗಿದೆ. ಪ್ರತಿಯೊಂದು ಪದಾರ್ಥವೂ ತನ್ನ ಸ್ಪರ್ಶ- ಸೇವನೆ- ಆಘ್ರಾಣಗಳಿಂದ ನಮ್ಮ ಭೌತಿಕ- ದೈವಿಕ- ಆಧ್ಯಾತ್ಮಿಕ ಕ್ಷೇತ್ರಗಳ ಮೇಲೆ ಮಾಡುವ ಪರಿಣಾಮಗಳನ್ನು ನಾಡೀವಿಜ್ಞಾನದ ಮೂಲಕ ಅವರು ನಿಖರವಾಗಿ ಅಳೆದು ತೋರಿಸಿಕೊಟ್ಟರು.

    ಸಂಸ್ಕೃತಿಯ ಆಚರಣೆಗಳಲ್ಲಿನ ಪ್ರತಿಯೊಂದು ಅಂಶವನ್ನೂ ನಿಖರವಾಗಿ ಅಳೆದೇ ವಿಧಿಸಲಾಗಿದೆ ಎಂಬುದಕ್ಕೆ ಸೂಚನಾಮಾತ್ರವಾಗಿ ಕೆಲವು ಉದಾಹರಣೆಗಳೆಂದರೆ, ಇಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ದರ್ಭೆಯು ಸ್ಪರ್ಶಮಾತ್ರದಿಂದಲೇ ಮನಸ್ಸು ಆಧಿದೈವಿಕ- ಆಧ್ಯಾತ್ಮಿಕ ಕ್ಷೇತ್ರಗಳಿಗೆ ಪ್ರವೇಶಿಸಲು ಹೇಗೆ ಪುಷ್ಟಿ ನೀಡುವುದೆಂಬುದನ್ನು ನಾಡೀವಿಜ್ಞಾನದ್ವಾರಾ ನಿರೂಪಿಸಿದರು. ಋಷಿದೃಷ್ಟಿಯಲ್ಲಿ ಆಹಾರ ಸ್ವೀಕಾರವು ಹೊಟ್ಟೆ ತುಂಬುವ ಕೆಲಸವಷ್ಟೇ ಅಲ್ಲ. ಅದೊಂದು ಯಜ್ಞ. ಉದರಕ್ಕೆ ಕೊಡುವ ಆಹಾರವು ದಾಮೋದರನವರೆಗೂ ತಲುಪುವಂತೆ ಇರಬೇಕೆನ್ನುವ ಮಹಾಗುರುಗಳ ಮಾತನ್ನು ಸ್ಮರಿಸಬಹುದಾಗಿದೆ. ಆಹಾರ ಸ್ವೀಕಾರದಲ್ಲಿ ಮನಸ್ಸು, ಪ್ರಾಣಾಪಾನಗಳ ಸ್ಥಾನವನ್ನು ಮುಟ್ಟಿ ಅಲ್ಲಿಗೆ ಆಹುತಿಯನ್ನು ತಲುಪಿಸುವ ಕಾರ್ಯವು ಜರುಗುವುದರೊಂದಿಗೆ ಭಗವತ್ಸ್ಮರಣೆಯಿಂದ ಕೂಡಿರಬೇಕೆಂದಾಗ ಪ್ರಾಣಾಪಾನಗಳ ಮೇಲೆ ಹತೋಟಿ ಇರಬೇಕಾಗುತ್ತದೆ. ಇದನ್ನು ಸಾಧಿಸಲು ನೆಲದ ಮೇಲೆ ಕಾಲು ಮಡಿಸಿ ಕೂರುವ ಭಂಗಿ, ಪಂಚೆ ಮುಂತಾದವುಗಳಿಂದ ಆಗುವ ಕಟ್ಟುಗಳು (ಬಿಗಿತ) ಸಹಕರಿಸುತ್ತವೆ. ಇದಕ್ಕೆ ಒಪ್ಪುವ ಧರ್ಮವುಳ್ಳ ಪದಾರ್ಥಗಳನ್ನು ಆಯ್ದು ಅವುಗಳಿಂದ ತಯಾರಿಸಿದ ಮಣೆ/ ಚಾಪೆಗಳನ್ನೇ ಆಸನಕ್ಕೂ ವಿಧಿಸಲಾಗಿದೆ. ಹೀಗೆ ಎಲ್ಲ ಅಂಶಗಳೂ ಗುರಿಗೆ ಒಪ್ಪುವಂತೆ- ಅರ್ಥಪೂರ್ಣವಾದವುಗಳಾಗಿವೆ.

    (ಲೇಖಕರು ಸಂಸ್ಕೃತಿ ಚಿಂತಕರು, ಅಷ್ಟಾಂಗಯೋಗ ವಿಜ್ಞಾನಮಂದಿರಂ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts