ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೇಲೆಕೇರಿ, ಹೊಳೆಗದ್ದೆ ಹಾಗೂ ಶಿರೂರುಗ ಟೋಲ್ಗಳಲ್ಲಿ ಶುಲ್ಕ ವಸೂಲಿಯನ್ನು ತಕ್ಷಣ ಬಂದ್ ಮಾಡಲು ಗುತ್ತಿಗೆ ಕಂಪನಿ ಐಆರ್ಬಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೂಚಿಸಿದರು.
ನೆರೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಹೆದ್ದಾರಿಯಲ್ಲಿ ಕಾರವಾರದ ಸುರಂಗ ಮಾರ್ಗದ ಒಳಗೆ ನೀರು ಬರುತ್ತಿದೆ. ಮಣ್ಣು ಕುಸಿಯುತ್ತಿದೆ. ಇದರಿಂದ ಅದರಲ್ಲಿ ಸಂಚಾರ ಮಾಡಲು ಸುರಕ್ಷತೆ ಇರುವ ಬಗ್ಗೆ ನಿಮ್ಮ ಬಳಿ ಪ್ರಮಾಣಪತ್ರವಿದೆಯೇ ಎಂದು ಪ್ರಶ್ನಿಸಿದರು.
ಆದರೆ, ಐಆರ್ಬಿ ಅಧಿಕಾರಿಗಳು ಪ್ರಮಾಣಪತ್ರ ಇರುವ ಬಗ್ಗೆ ಸ್ಪಷ್ಟ ಉತ್ತರ ನೀಡಲಿಲ್ಲ. ಕಾಲಾವಕಾಶ ಪಡೆದು, ವಾಪಸ್ ಬಂದ ಅಧಿಕಾರಿಗಳು ಇನ್ನೊಮ್ಮೆ ಸಮೀಕ್ಷೆ ಮಾಡಿ ಪ್ರಮಾಣಪತ್ರ ನೀಡುತ್ತೇವೆ ಎಂದರು.
ಇದರಿಂದ ಸಿಟ್ಟಿಗೆದ್ದ ಸಚಿವರು ಸುರಂಗ ಮಾರ್ಗ ಓಡಾಟಕ್ಕೆ ಸುರಕ್ಷಿತವಾಗಿರುವ ಬಗ್ಗೆ ಪ್ರಮಾಣಪತ್ರವೇ ಇಲ್ಲದೇ ಹೇಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿರಿ. ಅವಗಢ ಸಂಭವಿಸಿದರೆ ಯಾರು ಜವಾಬ್ದಾರರು..?ಸುರಂಗದಲ್ಲಿ ವಾಹನ ಸಂಚಾರವನ್ನು ತಕ್ಷಣ ಬಂದ್ ಮಾಡಿ ಎಂದರು.
ಕಳೆದ 9 ವರ್ಷಗಳಿಂದ ಐಆರ್ಬಿ ಎಂಬ ಶನಿ ನಮ್ಮ ಜಿಲ್ಲೆಗೆ ಒಕ್ಕರಿಸಿದೆ. 146 ಕಿಮೀ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ 2017 ರಲ್ಲೇ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಇದುವರೆಗೂ ಮುಗಿದಿಲ್ಲ.
ಸಂಪೂರ್ಣ ಕಾಮಗಾರಿ ಆಗದೆಯೇ 2020 ರಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಅಸಮರ್ಪಕ ರಸ್ತೆಯಿಂದ ಸಾವಿರಾರು ಜೀವಗಳು ಬಲಿಯಾಗಿವೆ. ಪ್ರಯಾಣಿಕರಿಗೆ, ಇನ್ಶುರೆನ್ಸ್ ಕಂಪನಿಗಳಿಗೆ ಕೋಟ್ಯಂತರ ರೂ. ನಷ್ಟವಾಗಿದೆ.
ಇದನ್ನೋ ಓದಿ: ಮನೆಯಲ್ಲಿ ಅಡಗಿ ಕುಳಿತಿದ್ದ 50ಕ್ಕೂ ಹೆಚ್ಚು ಹಾವಿನಮರಿ ಕಂಡು ಬೆಚ್ಚಿಬಿದ್ದ ಕುಟುಂಬಸ್ಥರು
ಹೆದ್ದಾರಿ ಪಕ್ಕದಲ್ಲಿ ಜಮೀನು, ಮನೆಗಳಿಗೆ ನೀರು ತುಂಬುತ್ತಿದೆ. ಇದ್ಯಾವುದರ ಬಗ್ಗೆಯೂ ಐಆರ್ಬಿ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂದರು.
ಇದರಿಂದ ಐಆರ್ಬಿ ಹಾಗೂ ಕೇಂದ್ರ ಸರ್ಕಾರದ ಜತೆ ಆದ ಒಪ್ಪಂದದ ದಾಖಲೆಗಳನ್ನು ಪರಿಶೀಲಿಸಬೇಕಿದೆ.
ಇದೇ ವಾರದಲ್ಲಿ ಇನ್ನೊಂದು ಸಭೆ ನಡೆಸಲಿದ್ದು, ಎಲ್ಲ ದಾಖಲೆಗಳನ್ನು ಕಂಪನಿ ಒದಗಿಸಬೇಕು. ಅಲ್ಲಿಯವರೆಗೆ ಟೋಲ್ ಸಂಗ್ರಹ ಬೇಡ ಎಂದರು.
ಶೀಘ್ರ ಪರಿಣಿತ ಇಂಜಿನಿಯರ್ಗಳ ತಂಡದೊಂದಿಗೆ ಮಾಜಾಳಿಯಿಂದ ಭಟ್ಕಳವರೆಗೆ ಸ್ವತಃ ತೆರಳಿ ಪರಿಶೀಲನೆ ನಡೆಸಲಿದ್ದೇನೆ. ಸಮಸ್ಯೆಗಳನ್ನು ಐಆರ್ಬಿ ಬಗೆಹರಿಸದೇ ಇದ್ದರೆ ಸರ್ಕಾರದಿಂದ ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದರು.
ಶಾಸಕ ಸತೀಶ ಸೈಲ್ ಮಾತನಾಡಿ, ಇದ್ದ ರಸ್ತೆಯನ್ನೇ ಅಭಿವೃದ್ಧಿ ಮಾಡಿ ಟೋಲ್ ವಸೂಲಿ ಮಾಡಲಾಗುತ್ತಿದೆ. ಹಳೆಯ ಸೇತುವೆಗಳನ್ನು ಬಳಸಿಕೊಳ್ಳಲಾಗಿದೆ. ಇದ್ದ ಬಸ್ ನಿಲ್ದಾಣಗಳನ್ನು ಕೆಡವಿ, ಹೊಸದನ್ನು ನಿರ್ಮಾಣ ಮಾಡಿಲ್ಲ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಈಶ್ವರ ಕಾಂದೂ, ಪ್ರೊಬೇಷನರಿ ಐಎಎಸ್ ಅಽಕಾರಿ ಜುಬಿನ್ ಮಹಾಪಾತ್ರ, ಡಿವೈಎಸ್ಪಿ ವ್ಯಾಲೆಂಟೇನ್ ಡಿಸೋಜಾ ವೇದಿಕೆಯಲ್ಲಿದ್ದರು.
……