ಭೋಪಾಲ್: ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಮೂಲಕ ವಿಪಕ್ಷಗಳ ಮೈತ್ರಿಕೂಟ I.N.D.I.A ದೇಶವನ್ನು ಸಾವಿರ ವರ್ಷಗಳ ಹಿಂದಿನ ಗುಲಾಮಗಿರಿ ಪದ್ದತಿಗೆ ತಳ್ಳಲು ಬಯಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದ ರಾಯ್ಘರ್ನಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಡಿಎಂಕೆ ಹಾಗೂ I.N.D.I.A ಒಕ್ಕೂಟದ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಇತ್ತೀಚಿಗೆ ಮುಂಬೈನಲ್ಲಿ ಘಮಂಡಿಯಾ ಮೈತ್ರಿಕೂಟವನ್ನು ಹೇಗೆ ನಡೆಸಬೇಕೆಂದು ಸಭೆ ನಡೆಸಲಾಯಿತು. ಸಭೆಯಲ್ಲಿ ಘಮಂಡಿಯಾದ ನಾಯಕರು ಸನಾತನ ಧರ್ಮ ಹಾಗೂ ದೇಶದ ಸಂಸ್ಕೃತಿ ಮೇಲೆ ಹೇಗೆ ದಾಳಿ ಮಾಡಬೇಕೆಂಬ ಗುಪ್ತ ಅಜೆಂಡಾವನ್ನು ಹಾಕಿಕೊಂಡಿದ್ದಾರೆ. ಸಾವಿರಾರು ವರ್ಷಗಳಿಂದ ದೇಶವನ್ನು ಒಗ್ಗೂಡಿಸಿರುವ ಚಿಂತನೆ, ಮೌಲ್ಯ ಹಾಗೂ ಸಂಪ್ರದಾಯವನ್ನು ಕೊನೆಗೊಳಿಸಲು ಇವರು ನಿರ್ಧರಿಸಿದಂತೆ ಕಾಣುತ್ತಿದೆ.
ಇದನ್ನೂ ಓದಿ: ಆಂಧ್ರ ವಿಧಾನಸಭೆ ಚುನಾವಣೆಗೆ ಟಿಡಿಪಿ-ಜನಸೇನಾ ಮೈತ್ರಿ: ನಟ ಪವನ್ ಕಲ್ಯಾಣ್
ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರನ್ನು ಪ್ರೇರೇಪಿಸಿದ ಸನಾತನ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಕೊನೆಗೊಳಿಸಲು ಘಮಂಡಿಯಾ ಒಕ್ಕೂಟವು ಸಂಕಲ್ಪ ಮಾಡಿದಂತೆ ಕಾಣುತ್ತಿದೆ. ಮಹಾತ್ಮ ಗಾಂಧಿಯವರು ಸನಾತನ ಧರ್ಮ ತಮ್ಮ ಜೀವನಕ್ಕೆ ಅತ್ಯಗತ್ಯ ಎಂದು ಹೇಳಿದ್ದಾರೆ. ಅವರು ತಮ್ಮ ಜೀವನದುದ್ದಕ್ಕೂ ಶ್ರೀರಾಮನಿಂದ ಪ್ರೇರಣೆಗೊಂಡಿದ್ದರು. ಅವರ ಕೊನೆಯ ಮಾತುಗಳು “ಹೇ ರಾಮ್” ಎಂದು ಹೇಳಿದ್ದರು.
ಸ್ವಾಮಿ ವಿವೇಕಾನಂದರು ಹಾಗೂ ಲೋಕಮಾನ್ಯ ತಿಲಕ್ರವರು ಸನಾತನ ಧರ್ಮದಿಂದ ಪ್ರೇರಿತರಾಗಿದ್ದರು. ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರರು ಸಹ ಸನಾತನ ಧರ್ಮದಿಂದ ಪ್ರೇರಣೆಗೊಂಡು ಮತ್ತೊಮ್ಮೆ ಭಾರತಂಬೆ ಮಡಿಲಲ್ಲಿ ಹುಟ್ಟುವಂತೆ ತಮ್ಮ ಕೊನೆ ಆಸೆಯನ್ನು ಹೇಳುವಂತೆ ಪ್ರೇರೆಪಿಸಿದೆ.
ಬರುವ ದಿನಗಳಲ್ಲಿ ಅವರು ಈ ರೀತಿಯ ಹೇಳಿಕೆಯನ್ನು ಹೆಚ್ಚಿಗೆ ನೀಡುತ್ತಾ ಹೋಗುತ್ತಾರೆ. ಈ ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರು ಸಹ ಜಾಗೃತರಾಗಬೇಕು. ಅವರುಇ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಮೂಲಕ ದೇಶವನ್ನು ಸಾವಿರಾರು ವರ್ಷಗಳ ಹಿಂದಿನ ಗುಲಾಮಗಿರಿಗೆ ತಳ್ಳಲು ಸಿದ್ದರಾಗಿದ್ದಾರೆ. ನಾವು ಇಂತಹ ದುಷ್ಟ ಶಕ್ತಿಗಳನ್ನು ಸಂಘಟನೆಯ ಬಲದ ಮೂಲಕ ತಡೆದು ನಿಲ್ಲಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ಮೈತ್ರಿಕೂಟ I.N.D.I.Aದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.