ನವದೆಹಲಿ: ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ತೂಗುಗತ್ತಿ ಪಾಕಿಸ್ತಾನದ ಮೇಲೆ ತೂಗುತ್ತಿದೆ. ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆ ನಡೆಯುತ್ತಿದ್ದು, ಅಲ್ಲಿ ಪಾಕಿಸ್ತಾನ ಕೇಂದ್ರಿತ ಡಿ-ಕಂಪನಿ ವಿಚಾರವನ್ನು ಭಾರತ ಪ್ರಸ್ತಾಪಿಸಿದೆ. ಸಂಘಟಿತ ಅಪರಾಧ ಮತ್ತು ಉಗ್ರ ಚಟುವಟಿಕೆಗಳ ಪಾಕ್ ಸಿಂಡಿಕೇಟ್ನ ಮುಖವನ್ನು ಭಾರತ ಅನಾವರಣಗೊಳಿಸಿದೆ.
ವಿಶ್ವಸಂಶ್ಥೆಯ ಭದ್ರತಾ ಸಮಿತಿಯ ಉನ್ನತ ಮಟ್ಟ ಮುಕ್ತ ಚರ್ಚೆಯ ವೇಳೆ ಭಾರತದ ಪ್ರತಿನಿಧಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ನಮ್ಮ ಗಡಿಯ ಉದ್ದಗಲಕ್ಕೂ ಪ್ರಾಯೋಜಿತ ಭಯೋತ್ಪಾದನೆ ನಡೆಯುತ್ತಿದೆ. ಈ ರೀತಿಯ ಭಯೋತ್ಪಾದನೆಗೆ ಒಳಗಾಗುತ್ತಿರುವ ಸಂತ್ರಸ್ತ ದೇಶ ನಮ್ಮದು. ಟ್ರಾನ್ಸ್ನ್ಯಾಷನಲ್ ಆರ್ಗನೈಸ್ಡ್ ಕ್ರೈಮ್ ಆ್ಯಂಡ್ ಟೆರರಿಸಂ ನಡುವೆ ಇರುವ ಭಯಾನಕ ಕೊಂಡಿಯ ನೇರ ಅನುಭವ ಭಾರತಕ್ಕೆ ಆಗಿದೆ ಎಂಬ ವಿಚಾರವನ್ನು ಸಾಕ್ಷಿ ಸಮೇತ ವಿವರಿಸಿದ್ದಾರೆ.
ಇದನ್ನೂ ಓದಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಮುಳುವಾಗುತ್ತಾ ‘ನಯಾ ಪಾಕಿಸ್ತಾನ್’ ನಕ್ಷೆ?
ಪಾಕಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿರುವ ದಾವೂದ್ ಇಬ್ರಾಹಿಂ ನೇತೃತ್ವದ ಡಿ-ಕಂಪನಿ ಒಂದು ಆರ್ಗನೈಸ್ಡ್ ಕ್ರೈಮ್ ಸಿಂಡಿಕೇಟ್ ಎಂಬುದನ್ನೂ ಭಾರತ ಉಲ್ಲೇಖಿಸಿದೆ. ಮಾದಕ ವಸ್ತು, ಚಿನ್ನ ಕಳ್ಳಸಾಗಣೆಯಿಂದ ಹಿಡಿದು ಅಕ್ರಮ ಶಸ್ತ್ರಾಸ್ತ್ರ ಸಾಗಣೆ, ಅದೇ ರೀತಿ 1993ರ ಮುಂಬೈ ಸರಣಿ ಸ್ಫೋಟದಂತಹ ಕುಕೃತ್ಯಗಳಲ್ಲಿ ಡಿ-ಕಂಪನಿ ನೇರವಾಗಿ ಭಾಗಿಯಾಗಿದೆ. ಮುಂಬೈ ಸರಣಿ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಮುಗ್ದರು ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರ ಬದುಕಿಗೆ ಆದ ಹಾನಿಯ ಪ್ರಮಾಣ ಇನ್ನೂ ಅಧಿಕ. ಇಷ್ಟಾಗ್ಯೂ, ಆತನಿಗೆ ಮತ್ತು ಆತನ ಕಂಪನಿಗೆ ಪಾಕಿಸ್ತಾನ ರಾಜಾಶ್ರಯ ನೀಡಿದೆ.
ಇದನ್ನೂ ಓದಿ: ಗುಜರಾತ್ನ ಜುನಾಗಢ್ ತನ್ನದೆನ್ನಲು ಪಾಕಿಸ್ತಾನಕ್ಕೆ ಧೈರ್ಯ ನೀಡಿದ್ದು ಈ ವಿದ್ಯಮಾನ; ಜನರೇ ಬುದ್ಧಿ ಕಲಿಸಿದ್ದು ಹೇಗೆ?
ಉಗ್ರ ನಿಗ್ರಹದ ವಿಚಾರದಲ್ಲಿ ಪಾಕಿಸ್ತಾನ ವಿಶ್ವಸಂಸ್ಥೆಯ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುತ್ತಿಲ್ಲ. ಮೇಲ್ನೋಟಕ್ಕೆ ಸುಳ್ಳು ಹೇಳುತ್ತ ಅದು ಅಕ್ರಮ ಶಸ್ತ್ರಾಸ್ತ್ರಗಳ ಸಾಗಣೆ, ಮಾದಕ ವಸ್ತು ಕಳ್ಳಸಾಗಣೆ, ಉಗ್ರರ ನೆಲೆಯಾಗಿ ರೂಪುಗೊಂಡಿದೆ. ಹೀಗಾಗಿ ಎಫ್ಎಟಿಎಫ್ನಂತಹ ಸಂಸ್ಥೆಗಳೊಂದಿಗೆ ವಿಶ್ವಸಂಸ್ಥೆಯ ಸಹಕಾರ ಇನ್ನಷ್ಟು ಹೆಚ್ಚಾಗಬೇಕು. ಜಾಗತಿಕವಾಗಿ ಭಯೋತ್ಪಾದನೆ ನಿಗ್ರಹ, ಟೆರರ್ ಫಂಡಿಂಗ್ ಮುಂತಾದವುಗಳಿಗೆ ತಡೆ ಹಾಕಬೇಕು ಎಂದು ಭಾರತ ಆಗ್ರಹಿಸಿದೆ. (ಏಜೆನ್ಸೀಸ್)
ರಫೆಲ್ ಸ್ಕ್ವಾಡ್ರನ್ ನಲ್ಲಿದ್ದವರು ಏರ್ಇಂಡಿಯಾ ಪೈಲಟ್ ಕ್ಯಾಪ್ಟನ್ ದೀಪಕ್ ಸಾಠೆ