ತರೌಬಾ: ನಾಯಕ ಯಶ್ ಧುಲ್, ಉಪನಾಯಕ ಶೇಕ್ ರಶೀದ್ ಸಹಿತ ಭಾರತ ಕಿರಿಯರ ತಂಡದ 6 ಆಟಗಾರರು ಕರೊನಾ ಪಾಸಿಟಿವ್ ಆಗಿದ್ದಾರೆ. ಇದರಿಂದಾಗಿ ಧುಲ್ ಮತ್ತು ಶೇಕ್ ಬುಧವಾರ ನಡೆದ ಐರ್ಲೆಂಡ್ ವಿರುದ್ಧ 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ನಡೆದ ಪಂದ್ಯದಿಂದ ಹೊರಗುಳಿದರು. ಆರಾಧ್ಯ ಯಾದವ್, ವಾಸು ವತ್ಸ್ ಮತ್ತು ಮಾನವ್ ಪರಖ್ ಮತ್ತು ಸಿದ್ಧಾರ್ಥ್ ಯಾದವ್ ಸೋಂಕಿತರಾಗಿರುವ ಇತರ ಆಟಗಾರರು. ಧುಲ್ ಗೈರಲ್ಲಿ ನಿಶಾಂತ್ ಸಿಂಧು ತಂಡವನ್ನು ಮುನ್ನಡೆಸಿದರು.
ಭಾರತ ತಂಡದ ಮೂವರು ಆಟಗಾರರು ಮಂಗಳವಾರವೇ ಪಾಸಿಟಿವ್ ಆಗಿದ್ದು, ಐಸೋಲೇಷನ್ಗೆ ಒಳಗಾಗಿದ್ದರು. ಈ ನಡುವೆ ಪಂದ್ಯಕ್ಕೆ ಮುನ್ನ ನಾಯಕ ಮತ್ತು ಉಪನಾಯಕ ಕೂಡ ರ್ಯಾಪಿಡ್ ಆಂಟಿಜೆನ್ ಟೆಸ್ಟ್ನಲ್ಲಿ ಪಾಸಿಟಿವ್ ಆದ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಹೊರಗುಳಿದರು. 6 ಆಟಗಾರರು ಐಸೋಲೇಟ್ ಆದ ಕಾರಣ ಭಾರತಕ್ಕೆ ಕಣಕ್ಕಿಳಿಸಲು ಭರ್ತಿ 11 ಆಟಗಾರರಷ್ಟೇ ಲಭ್ಯರಿದ್ದರು. ಆಟಗಾರರು ಬಿಸಿಸಿಐ ವೈದ್ಯಕೀಯ ತಂಡದ ನಿಗಾದಲ್ಲಿದ್ದು, ಆರ್ಟಿ-ಪಿಸಿಆರ್ ಟೆಸ್ಟ್ನಲ್ಲಿ ನೆಗೆಟಿವ್ ವರದಿ ಬಂದರೆ ಮುಂದಿನ ಪಂದ್ಯಕ್ಕೆ ಲಭ್ಯರಾಗುವ ನಿರೀಕ್ಷೆ ಇದೆ.
ಮೊದಲ ಪಂದ್ಯವನ್ನು ಗಯಾನದಲ್ಲಿ ಆಡಿದ್ದ ಭಾರತ ತಂಡ 2ನೇ ಪಂದ್ಯಕ್ಕೆ ಟ್ರಿನಿಡಾಡ್ಗೆ ಪ್ರಯಾಣಿಸಿತ್ತು. ಈ ವೇಳೆ ಸೋಂಕು ಅಂಟಿರುವ ಸಾಧ್ಯತೆ ಇದೆ. ಭಾರತ ತಂಡ ಶನಿವಾರ ಉಗಾಂಡ ವಿರುದ್ಧ ಆಡಬೇಕಿದೆ.
ಭಾರತ ಕಿರಿಯರಿಂದ ಬೃಹತ್ ಮೊತ್ತ: ಆರಂಭಿಕರಾದ ಅಂಗ್ಕ್ರಿಷ್ ರಘುವಂಶಿ (79 ರನ್, 79 ಎಸೆತ, 10 ಬೌಂಡರಿ, 2 ಸಿಕ್ಸರ್) ಮತ್ತು ಹರ್ನೂರ್ ಸಿಂಗ್ (88 ರನ್, 101 ಎಸೆತ, 12 ಬೌಂಡರಿ) ಹಾಕಿಕೊಟ್ಟ ಭದ್ರ ಬುನಾದಿಯ ನೆರವಿನಿಂದ ಭಾರತ ತಂಡ 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ತನ್ನ 2ನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಬೃಹತ್ ಮೊತ್ತ ಪೇರಿಸಿದೆ.
ಕರೊನಾದಿಂದಾಗಿ ಪ್ರಮುಖ ಆಟಗಾರರು ಅಲಭ್ಯರಾದ ನಡುವೆ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ತಂಡ 5 ವಿಕೆಟ್ಗೆ 307 ರನ್ ಪೇರಿಸಿದೆ. ರಘುವಂಶಿ-ಹರ್ನೂರ್ ಜೋಡಿ ಮೊದಲ ವಿಕೆಟ್ಗೆ 164 ರನ್ ಜತೆಯಾಟವಾಡಿತು. ಭಾರತ: 5 ವಿಕೆಟ್ಗೆ 307 (ರಘುವಂಶಿ 79, ಹರ್ನೂರ್ 88, ರಾಜ್ ಬಾವಾ 42, ನಿಶಾಂತ್ 36, ರಾಜ್ಯವರ್ಧನ್ 39*, ಶೆರ್ಜಾದ್ 79ಕ್ಕೆ 3).