ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರಣಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ತಾವು ಅವರೊಂದಿಗೆ ಇದ್ದ ಫೋಟೋಗಳನ್ನೂ ಶೇರ್ ಮಾಡಿಕೊಂಡು, ಹಳೇ ನೆನಪುಗಳನ್ನು ಹಂಚಿಕೊಂಡಿದ್ದಾರೆ.
2014ರಲ್ಲಿ ನಾನು ದೆಹಲಿಗೆ ಹೊಸಬನಾಗಿದ್ದೆ. ಆ ಸಮಯದಲ್ಲಿ ಪ್ರಣಬ್ ಮುಖರ್ಜಿಯವರು ನನಗೆ ಆಶೀರ್ವದಿಸಿ, ಮಾರ್ಗದರ್ಶನ, ಬೆಂಬಲ ನೀಡಿದರು. ಅವರೊಂದಿಗೆ ನಾನು ನಡೆಸಿದ ಮಾತುಕತೆ, ಸಂವಹನ ಯಾವತ್ತೂ ನನಗೆ ಖುಷಿಕೊಡುವಂಥದ್ದಾಗಿದೆ. ಪ್ರಣಬ್ ಮುಖರ್ಜಿಯವರ ಕುಟುಂಬ, ಸ್ನೇಹಬಳಗ, ದೇಶಾದ್ಯಂತ ಇರುವ ಬೆಂಬಲಿಗರಿಗೆ ನನ್ನ ಸಾಂತ್ವನಗಳು ಎಂದು ಮೋದಿಯವರು ಮೊದಲ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಪ್ರಣಬ್ ಮುಖರ್ಜಿಯವರು ರಾಷ್ಟ್ರಪತಿಯಾದ ನಂತರ ರಾಷ್ಟ್ರಪತಿ ಭವನಕ್ಕೆ ಸಾಮಾನ್ಯ ಜನರ ಪ್ರವೇಶವನ್ನು ಇನ್ನಷ್ಟು ಸುಗಮಗೊಳಿಸಿದರು. ಅಷ್ಟೇ ಅಲ್ಲ, ಕಲಿಕೆ, ನಾವೀನ್ಯತೆ, ಸಂಸ್ಕೃತಿ, ವಿಜ್ಞಾನ, ಸಾಹಿತ್ಯದ ಕೇಂದ್ರವನ್ನಾಗಿ ಪರಿವರ್ತಿಸಿದರು. ಪ್ರಮುಖ ವಿಚಾರಗಳಲ್ಲಿ ಅವರು ನೀಡಿದ ಸಲಹೆಗಳನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ನಿಧನ
ತಮ್ಮ ರಾಜಕೀಯ ಜೀವನದಲ್ಲಿ ಆರ್ಥಿಕ ಮತ್ತು ಕಾರ್ಯತಂತ್ರದ ಸಚಿವಾಲಯಗಳಲ್ಲಿ ಕಾರ್ಯ ನಿರ್ವಹಿಸಿ, ಮರೆಯಲಾಗದ ಕೊಡುಗೆಗಳನ್ನು ನೀಡಿದ್ದಾರೆ. ಪ್ರಣಬ್ಮುಖರ್ಜಿ ಅತ್ಯುತ್ತಮ ಸಮಸದೀಯ ಪಟುವಾಗಿದ್ದರು. ಮಾತು, ನಿರ್ಧಾರಗಳೆಲ್ಲ ಸ್ಪಷ್ಟವಾಗಿರುತ್ತಿತ್ತು..ಹಾಗೇ ಹಾಸ್ಯ ಮಾಡುತ್ತಿದ್ದರು ಎಂದೂ ನೆನಪಿಸಿಕೊಂಡಿದ್ದಾರೆ.
ಭಾರತರತ್ನ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಇಡೀ ದೇಶವೇ ದುಃಖ ವ್ಯಕ್ತಪಡಿಸುತ್ತಿದೆ. ಈ ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಅಳಿಸಲಾಗದ ಗುರುತು ಸೃಷ್ಟಿಸಿ ಹೋಗಿದ್ದಾರೆ. ಅವರೊಬ್ಬ ಮೇಧಾವಿ, ಉನ್ನತ ರಾಜನೀತಿಜ್ಞ, ಸಮಾಜದ ಎಲ್ಲವರ್ಗದವರೂ ಇಷ್ಟಪಡುತ್ತಿದ್ದ ರಾಜಕಾರಣಿ ಎಂದು ಮೋದಿಯವರು ಟ್ವೀಟ್ನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)
ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್ ಇನ್ನಷ್ಟು ಹತ್ತಿರ; ಎರಡನೆಯ ಹಂತದ ಪರೀಕ್ಷೆಗೆ ಸಿದ್ಧತೆ