ನವದೆಹಲಿ: ವಿಶ್ವದ ಅತಿಎತ್ತರದ ರಣಾಂಗಣ ಎನಿಸಿಕೊಂಡಿರುವ ಲಡಾಖ್ನ ಪೂರ್ವಭಾಗದ ವಾಸ್ತವ ಗಡಿರೇಖೆ ಬಳಿಗೆ ಭೀಷ್ಮ ಎಂಬ ಹೆಸರಿನ ಟಿ-90 ಕ್ಷಿಪಣಿ ಸಿಡಿಸುವ ಸಾಮರ್ಥ್ಯದ ಟ್ಯಾಂಕ್ಗಳನ್ನು ಭಾರತ ನಿಯೋಜಿಸಿದೆ. ತನ್ಮೂಲಕ ತಾನು ಕೂಡ ಆಕ್ರಮಣಕಾರಿ ಮನೋಭಾವ ತೋರಿ, ಚೀನಿಯರನ್ನು ಬೆದರಿಸುವ ತಂತ್ರ ಅನುಸರಿಸಿದೆ.
ಟಿ-90 ಕ್ಷಿಪಣಿ ಸಿಡಿಸುವ ಟ್ಯಾಂಕ್ ಜತೆಗೆ ಹೆಗಲ ಮೇಲಿಂದ ಟ್ಯಾಂಕ್ ನಿರೋಧಕ ಕ್ಷಿಪಣಿಗಳನ್ನು ಸಿಡಿಸಬಲ್ಲ ವ್ಯವಸ್ಥೆಯನ್ನು ಕೂಡ ಗಲ್ವಾನ್ ಕಣಿವೆ ವಲಯದಲ್ಲಿ ರಣಾಂಗಣಕ್ಕೆ ಇಳಿಸಲಾಗಿದೆ.
ಸದ್ಯ ಭಾರತ ಮತ್ತು ಚೀನಾದ ಹಿರಿಯ ಮಿಲಿಟರಿ ಕಮಾಂಡರ್ಗಳು ಚುಶುಲ್ ಎಂಬಲ್ಲಿ ಸಭೆ ನಡೆಸಿದ್ದು, ಲಡಾಖ್ನ ಪೂರ್ವಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಶಮನಗೊಳಿಸುವುದು, ಸೇನಾಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಕುರಿತು ಚರ್ಚೆ ನಡೆಸಿದ್ದಾರೆ.
ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಶಿಯಾಕ್ ಮತ್ತು ಗಲ್ವಾನ್ ನದಿಯ ತಟದುದ್ದಕ್ಕೂ ಹೆಚ್ಚಿನ ಸಂಖ್ಯೆಯ ಶಸ್ತ್ರಸಜ್ಜಿತ ಯೋಧರು ಮತ್ತು ಯೋಧರ ಟೆಂಟ್ಗಳನ್ನು ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನಾಪಡೆ ಯೋಧರು ಕೂಡ ಅತಿ ಎತ್ತರದ ಪ್ರದೇಶಗಳಲ್ಲಿ ಕುಳಿತು ಚೀನಾದ ಯೋಧರ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ.
ಇದನ್ನೂ ಓದಿ: ರಾಷ್ಟ್ರದಲ್ಲಿ ಮತ್ತೊಮ್ಮೆ ಲಾಕ್ಡೌನ್ ಜಾರಿ ಮಾಡಲ್ಲ: ಪ್ರಧಾನಿ ಮೋದಿ
ಪೂರ್ವ ಲಡಾಖ್ನ 1,597 ಕಿ.ಮೀ. ಉದ್ದದ ವಾಸ್ತವ ಗಡಿರೇಖೆಯ ಭಾರತದ ನೆಲದಲ್ಲಿ 155 ಎಂಎಂ ಹೌವಿಟ್ಜರ್ಗಳಲ್ಲದೆ ಇನ್ಫೆಂಟ್ರಿ ಕಂಬ್ಯಾಟ್ ವೆಹಿಕಲ್ಗಳನ್ನು ನಿಯೋಜಿಸಲಾಗಿದೆ. ಚುಶುಲ್ ವಲಯದಲ್ಲಿ ಎರಡು ಟ್ಯಾಂಕ್ ರೆಜಿಮೆಂಟ್ಗಳನ್ನು ನಿಯೋಜಿಸಲಾಗಿದೆ. ತನ್ಮೂಲಕ ಸ್ಪಾನ್ಗ್ಗುರ್ ಸಂದಿನ ಮೂಲಕ ಚೀನಿಯರ ಆಕ್ರಮಣದ ಯೋಜನೆಯನ್ನು ವಿಫಲಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಸೇನೆಯನ್ನು ಹಿಂಪಡೆಯುವ ಕುರಿತು ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಚೀನಾದ ಪಿಎಲ್ಎ ಪ್ರಯತ್ನಿಸುತ್ತಿದೆ. ಆದರೆ, ಭಾರತ ಸೇನಾಪಡೆ ಮಾತ್ರ ಇದಾವುದನ್ನೂ ಹಗರುವಾಗಿ ಪರಿಗಣಿಸದಿರಲು ನಿರ್ಧರಿಸಿದೆ. ವಾಸ್ತವ ಗಡಿರೇಖೆಯ ರೂಪರೇಷೆ ಬದಲಿಸುವ ಉದ್ದೇಶದಿಂದಲೇ ಚೀನಾ ಆಕ್ರಮಣಕಾರಿ ಮನೋಭಾವ ತೋರುತ್ತಿರುವುದು ಇದಕ್ಕೆ ಕಾರಣವಾಗಿದೆ.
ಮಿಲಿಟರಿ ಕಮಾಂಡರ್ಗಳ ಪ್ರಕಾರ ಲಡಾಖ್ ಪೂರ್ವಭಾಗದಲ್ಲಿ ದೀರ್ಘಾವಧಿವರೆಗೂ ಪರಿಸ್ಥಿತಿ ನಿಭಾಯಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಂದು ವೇಳೆ ಅಪಾಯ ಎದುರಾದಲ್ಲಿ ತಕ್ಷಣವೇ ಮುಗಿಬೀಳಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ನದಿ ನೀರಿನ ತಾಪಮಾನ ಶೂನ್ಯಕ್ಕಿಂತ ಕಡಿಮೆಗೆ ಇಳಿಕೆಯಾಗಿದೆ. ರಾತ್ರಿಯ ತಾಪಮಾನ ಕುಸಿತದಿಂದಾಗಿ ನದಿ ನೀರು ಹಿಮಗಟ್ಟಲಾರಂಭಿಸಿದೆ. ಇನ್ನು ಸ್ವಲ್ಪಕಾಲದಲ್ಲೇ ಚಳಿಗಾಲ ಆರಂಭವಾಗಲಿದ್ದು, ಆಗ ಈ ಪ್ರದೇಶದಲ್ಲಿ ಇರುವುದು ಅಸಾಧ್ಯವೆನಿಸಿದ ನಂತರದಲ್ಲಿ ಚೀನಿಯರು ಇಲ್ಲಿಂದ ಕಾಲ್ತೆಗೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪ್ಯಾಂಗಾಂಗ್ನ ವಿವಾದಿತ ಪ್ರದೇಶದಲ್ಲಿ ಚೀನಾದ ನಕ್ಷೆ ಬಿಡಿಸಿದ ಚೀನಾ