ದೆಹ್ರಾಡೂನ್: ಲಡಾಖ್ ಬಿಕ್ಕಟ್ಟು ಪರಿಹಾರಿದ ನಿಟ್ಟಿನಲ್ಲಿ ಚೀನಾದೊಂದಿಗೆ ನಡೆಸುತ್ತಿರುವ ಮಾತುಕತೆ ಫಲ ನೀಡಲಾರಂಭಿಸಿದೆ. ಗಲ್ವಾನ್ ಕಣಿವೆಯಲ್ಲಿ ನಿಯೋಜಿಸಿದ್ದ ತನ್ನ ಸೇನೆಯನ್ನು ಚೀನಾ ಹಂತ ಹಂತವಾಗಿ ಹಿಂದಕ್ಕೆ ಪಡೆದುಕೊಳ್ಳುತ್ತಿದೆ ಎಂದು ಸೇನಾಪಡೆ ಮುಖ್ಯಸ್ಥ ಜನರಲ್ ಎಂ.ಎಂ. ನರವಾನೆ ತಿಳಿಸಿದ್ದಾರೆ.
ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಶನಿವಾರ ಆಯೋಜನೆಗೊಂಡಿದ್ದ ನಿರ್ಗಮನ ಪಥಸಂಚಲನ ಕಾರ್ಯಕ್ರಮದ ನಂತರದಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡಿದರು. ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸದ್ಯ ನಡೆಯುತ್ತಿರುವ ಮಾತುಕತೆ ಪ್ರಕ್ರಿಯೆ ನಂತರದಲ್ಲಿ ಉಭಯ ರಾಷ್ಟ್ರಗಳ ನಡುವಿನ ಎಲ್ಲ ಭಿನ್ನಾಭಿಪ್ರಾಯಗಳು ಕೊನೆಗೊಳ್ಳಲಿವೆ ಎಂಬ ಆಶಾಭಾವ ವ್ಯಕ್ತಪಡಿಸಿದರು.
ಭಾರತೀಯ ಸೇನಾಪಡೆ ಗಲ್ವಾನ್ ನದಿಯ ಉತ್ತರ ಭಾಗದಿಂದ ಹಿಂದಕ್ಕೆ ಸರಿಯುತ್ತಿದೆ. ಮಾತುಕತೆ ಮುಂದುವರಿದಂತೆ ಗಡಿ ಭಾಗದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿ ತಿಳಿಗೊಳ್ಳಲಿದೆ ಎಂದು ಹೇಳಿದರು.
ಇದನ್ನೂ ಓದಿ: ಕೃತಕವಾಗಿ ವ್ಯಾಪ್ತಿ ವಿಸ್ತರಿಸಿದರೆ ಅದನ್ನು ಒಪ್ಪಲಾಗದು ಎಂದ ಭಾರತ
ಭಾರತ ಮತ್ತು ಚೀನಾದ ಸೇನಾಪಡೆಗಳು ಲಡಾಖ್ನ ಪೂರ್ವ ಭಾಘದ ಪ್ಯಾಂಗಾಂಗ್ ತ್ಸೊ, ಗಲ್ವಾನ್ ಕಣಿವೆ, ಡೆಮ್ಚಾಕ್ ಮತ್ತು ದೌಲತ್ ಬೇಗ್ ಓಲ್ಡೀಗಳಲ್ಲಿ ಕಳೆದ 5 ವಾರಗಳಿಂದ ಪರಸ್ಪರ ಬಿರುಗಣ್ಣು ಬಿಟ್ಟುಕೊಂಡು ಕುಳಿತಿದ್ದವು. ಚೀನಾ ಅಂದಾಜು 5 ಸಾವಿರಕ್ಕೂ ಹೆಚ್ಚು ಯೋಧರನ್ನು ಈ ಪ್ರದೇಶಗಳಲ್ಲಿ ನಿಯೋಜಿಸಿ, ಯುದ್ಧೋನ್ಮಾದ ತೋರಿತ್ತು.
ಚೀನಾ ಸೇನಾಪಡೆಯ ಈ ಅತಿಕ್ರಮಣಕ್ಕೆ ಭಾರತೀಯ ಯೋಧರು ದಿಟ್ಟ ಪ್ರತಿರೋಧ ಒಡ್ಡಿದ್ದರು. ಅಲ್ಲದೆ, ತಕ್ಷಣವೇ ಹಿಂದಕ್ಕೆ ಸರಿದು ಏಪ್ರಿಲ್ನಲ್ಲಿದ್ದ ಪರಿಸ್ಥಿತಿ ಮೂಡಿಸುವಂತೆ ಚೀನಾದ ಮೇಲೆ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ಪ್ರತಿನಿಧಿಗಳು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಾತುಕತೆಯಲ್ಲಿ ತೊಡಗಿಕೊಂಡು ಉದ್ವಿಗ್ನತೆ ಶಮನಕ್ಕೆ ಪ್ರಯತ್ನಿಸುತ್ತಿದ್ದರು.
ನಟಿ ರಮ್ಯಾ ಕೃಷ್ಣನ್ ಕಾರಿನಲ್ಲಿ ಪತ್ತೆಯಾಯ್ತು ನೂರಕ್ಕೂ ಹೆಚ್ಚು ಮದ್ಯದ ಬಾಟಲ್ಗಳು…!