More

    ಡಾಂಬರು ಹಾಕಿದ ಎರಡೇ ದಿನದಲ್ಲಿ ಕುಸಿದ ರಸ್ತೆ!

    ಬೆಂಗಳೂರು: ರಾಜ್ಯ ರಾಜಧಾನಿ ಇತ್ತೀಚೆಗೆ ಸಮಸ್ಯೆಗಳ ಆಗರವಾಗಿ ಸುದ್ದಿಯಾಗುತ್ತಿದೆ. ರಸ್ತೆ ಗುಂಡಿ, ಮೆಟ್ರೋ ಪಿಲ್ಲರ್ ದುರಂತ ಮತ್ತು ಪುಡಿ ರೌಡಿಗಳ ಅಟ್ಟಹಾಸದ ಕಾರಣಕ್ಕಾಗಿ ಬೆಂಗಳೂರು ಸಾರ್ವಜನಿಕರಿಗೆ ಸೇಫ್ ಅಲ್ಲ ಎಂಬ ಭಾವನೆ ಉಂಟಾಗಲು ಕಾರಣವಾಗಿತ್ತು.

    ಕಳೆದ ವಾರವಷ್ಟೇ ಹೆಣ್ಣೂರು ಕ್ರಾಸ್​ ಬಳಿ ಮೆಟ್ರೋ ಪಿಲ್ಲರ್​ ದುರಂತದಿಂದ ತಾಯಿ ಮತ್ತು ಮಗ ಸಾವನ್ನಪ್ಪಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ, ಬೆಂಗಳೂರು ತಲೆ ತಗ್ಗಿಸುವಂತಾಗಿತ್ತು. ಜತೆಗೆ ಬೆಂಗಳೂರಿನ ಹಲವೆಡೆ ರಸ್ತೆಗಳು ಕೆಟ್ಟು ಹೋಗಿ, ಗುಂಡಿಗಳು ತಲೆ ಎತ್ತಿರುವುದು ವಾಹನ ಬಳಕೆದಾರರ ಸುಗಮ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿದ್ದು. ರಸ್ತೆ ಗುಂಡಿಗಳಿಂದ ಹಲವರ ಜೀವಕ್ಕೇ ಅಪಾಯ ಎದುರಾಗಿತ್ತು.

    ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಡೆಗೆ ಹಾಗೂ ಗುಣಮಟ್ಟ ರಸ್ತೆ ನಿರ್ಮಾಣದ ಉದ್ದೇಶದಿಂದ ದೇಶದಲ್ಲೇ ಮೊದಲ ಬಾರಿಗೆ ಬಿಬಿಎಂಪಿಯಿಂದ ‘ರ‍್ಯಾಪಿಡ್‌ ರೋಡ್’ ತಂತ್ರಜ್ಞಾನ ಬಳಸಿ ನಿರ್ಮಿಸಿದ್ದ ರಸ್ತೆ ಬಿರುಕು ಬಿಟ್ಟಿತ್ತು. ಇದರಿಂದ, ಮೊದಲೇ ಕಳಪೆ ಕಾಮಗಾರಿಗಳ ವಿಚಾರದಲ್ಲಿ ಅಪಖ್ಯಾತಿ ಹೊಂದಿರುವ ಬಿಬಿಎಂಪಿಗೆ, ಮತ್ತೊಂದು ‘ರ‍್ಯಾಪಿಡ್‌ ಕಳಪೆ’ ಎಂಬ ಹಣೆಪಟ್ಟಿ ಸಿಕ್ಕಿದಂತಾಗಿತ್ತು. ‘ರ‍್ಯಾಪಿಡ್‌ ರೋಡ್’ ತಂತ್ರಜ್ಞಾನದಲ್ಲಿ ಪಾಲಿಕೆ ಫೇಲ್ ಆಗಿದೆ ಎಂದು ಸಾರ್ವಜನಿಕರು ಟೀಕಿಸುವಂತಾಗಿತ್ತು.

    ಒಟ್ಟಿನಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸಮಸ್ಯೆಗಳ ಕೂಪವಾಗಿ ಬದಲಾಗುತ್ತಿದೆ. ಜನರು ಮನೆಯಿಂದ ಹೊರಬರುತ್ತಿದ್ದಂತೆ ಜೀವಭಯದಲ್ಲೇ ಓಡಾಡಬೇಕಾದಂತಹ ಪರಿಸ್ಥಿತಿ ಒಂದೆಡೆ ನಿರ್ಮಾಣವಾಗುತ್ತಿದೆ. ಇದೀಗ ಹೆಣ್ಣೂರು-ಕೊತ್ತನೂರು ಮುಖ್ಯರಸ್ತೆಯಲ್ಲೇ ವಿದ್ಯುತ್ ಕಂಬ ಸಂಪೂರ್ಣವಾಗಿ ನೆಲಕ್ಕೆ ವಾಲಿದೆ.

    ಸದ್ಯ ಬೆಂಗಳೂರಿನ ಕೆಲವೆಡೆ ರಸ್ತೆಗಳು ಕುಸಿಯುತ್ತಿದ್ದು, ಬಿಬಿಎಂಪಿಯ ಕಳಪೆ ಕಾಮಗಾರಿ ಬಯಲಾಗುತ್ತಿದೆ. ಮಹಾಲಕ್ಷ್ಮಿ ಲೇಔಟ್ ಮುಖ್ಯ ರಸ್ತೆ ಸಪ್ತಗಿರಿ ಕಲ್ಯಾಣ ಮಂಟಪದ ಬಳಿಯ ರಸ್ತೆ ಏಕಾಏಕಿ ಕುಸಿದಿದೆ. 3.5 ಅಡಿ ಆಳಕ್ಕೆ ರಸ್ತೆ ಕುಸಿದಿದ್ದು, ಬಿಬಿಎಂಪಿ ನಿರ್ಲಕ್ಷಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಲಮಂಡಳಿಯ ಪೈಪ್ ಲೈನ್ ಹಾದು ಹೋಗಿರುವ ಜಾಗದಲ್ಲಿ ರಸ್ತೆ ಕುಸಿದಿದೆ. ರಸ್ತೆಗೆ ಡಾಂಬರು ಹಾಕಿದ ಎರಡೇ ದಿನದಲ್ಲಿ ರಸ್ತೆ ಕುಸಿದಿದ್ದು, ದೊಡ್ಡ ಗಾತ್ರದ ವಾಹನಗಳ ಸಂಚಾರದಿಂದ ರಸ್ತೆ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    ಒಟ್ಟಿನಲ್ಲಿ ಬೆಂಗಳೂರಿನ ಜನರಿಗೆ ಒಂದರ ಹಿಂದೆ ಒಂದರಂತೆ ಸಾರ್ವಜನಿಕ ಸಮಸ್ಯೆಗಳು ಎದುರಾಗುತ್ತಿವೆ. ಇದು ಆಡಳಿತ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಜನರ ಆಕ್ರೋಶಕ್ಕೂ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts