ಹುಲಸೂರು: ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ ಇದ್ದಾಗ ಮಾತ್ರ ಹೆಚ್ಚು ಅಂಕ ಪಡೆದು ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಹೇಳಿದರು.
ತೋಗಲೂರ ಗ್ರಾಮದ ವಿದ್ಯಾಗಿರಿ ಪ್ರೌಢ ಶಾಲೆಯಲ್ಲಿ ಲಿಂ.ಗೌರಮ್ಮ ವೀರಶೆಟ್ಪೆಪ್ಪ ಕಾಮಣ್ಣರವರ ಸ್ಮರಣಾರ್ಥವಾಗಿ ಶರಣ ಸಾಹಿತ್ಯ ಪರಿಷತ್ ಬೀದರ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸತತ ಪ್ರಯತ್ನ ಮತ್ತು ಸಾಧಿಸುವ ಛಲವಿದ್ದರೆ ಗುರಿ ತಲುಪಲು ಸಾಧ್ಯ. ತಾಯಿ-ತಂದೆ ಕಣ್ಣಿಗೆ ಕಾಣುವ ದೇವರು, ಅವರ ಸೇವೆ ಎಂದಿಗೂ ಮರೆಯಬಾರದು. ಗುರು ಹಿರಿಯರ ಮಾರ್ಗದರ್ಶನದಿಂದ ನಡೆದರೆ ಯಾವುದೇ ಸಮಸ್ಯೆ ಬರುವುದಿಲ್ಲ . ಶರಣರ ವಚನ ಸಾಹಿತ್ಯದ ಬಗ್ಗೆ ಮನೆ ಮನೆಗೆ ತೆರಳಿ ಅರಿವು ಮೂಡಿಸುವ ಕೆಲಸ ಪರಿಷತ್ ಮಾಡುತ್ತಿದೆ ಎಂದು ಹೇಳಿದರು.
ನಿವೃತ್ತ ಕೃಷಿ ಅಧಿಕಾರಿ ಶಿಖರೇಶ್ವರ ಶಟಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಓದಿಗೆ ಮಹತ್ವ ನೀಡಿದರೆ ಹೆಚ್ಚಿನ ಅಂಕ ಗಳಿಸಲು ಸಾಧ್ಯ ಎಂದರು.
ಹಿರಿಯ ಸಾಹಿತಿ ವೀರಣ್ಣ ಕುಂಬಾರ ವಚನ ಗಾಯನ, ಕಾಶೀನಾಥ ಭೂರೆ ವಚನ ಪಠಣ ಮಾಡಿದರು. ಸಂಸ್ಥೆ ಅಧ್ಯಕ್ಷ ಸಿದ್ರಾಮಪ್ಪ ಧಬಾಲೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ಹೊನ್ನಾಡೆ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಶಿವರಾಜ ಖಪಲೆ, ಪ್ರಮುಖರಾದ ಮಹೇಶ ಧಬಾಲೆ, ಲೋಕೇಶ ಕುಂಬಾರ, ಬೀರಣ್ಣ ಬೀರಗೊಂಡ ಇದ್ದರು. ಸಂಸ್ಥೆ ಕಾರ್ಯದರ್ಶಿ ರಮೇಶ ಧಬಾಲೆ ಸ್ವಾಗತಿಸಿದರು. ಝರೆಪ್ಪ ನಿರೂಪಣೆ ಮಾಡಿದರು. ಅಂಬಿಕಾ ವಂದಿಸಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.