ಭಾಲ್ಕಿ: ಸಂತರು, ಶರಣರ ಸಂಗದಿಂದಲೇ ಜೀವನ ಪಾವನವಾಗಲಿದೆ ಎಂದು ಹುಲಸೂರಿನ ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರಿ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ಮೊರಂಬಿ ಗ್ರಾಮದಲ್ಲಿ ನಂದಿ, ಬಸವೇಶ್ವರ ಮೂರ್ತಿ ಪ್ರಾಣಪ್ರತಿಷ್ಠಾಪನೆ ದ್ವಿತೀಯ ವರ್ಷಾಚರಣೆ ನಿಮಿತ್ತ ಗುರುವಾರ ಏರ್ಪಡಿಸಿದ್ದ ಬಸವ ಉತ್ಸವ-ಮೊರಂಬಿ ಉತ್ಸವ ಉದ್ಘಾಟಿಸಿದ ಅವರು, ಕಲ್ಯಾಣ ಕರ್ನಾಟಕದಲ್ಲೇ ಉತ್ತಮ ಬಸವೇಶ್ವರ ಮೂರ್ತಿ ಮೊರಂಬಿಯಲ್ಲಿ ಕಂಡಿದೆ. ಸಾಕ್ಷಾತ್ ಬಸವೇಶ್ವರರೇ ಬಂದು ಕುಳಿತಂತಿದೆ ಎಂದರು.
೮೪ ಲಕ್ಷ ಜೀವರಾಶಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠವಾಗಿದ್ದು, ಸಂಸ್ಕಾರಯುತ ಜೀವನ ಸಾಗಿಸಬೇಕು. ಗೋಧಿಗೆ ಸಂಸ್ಕಾರ ಕೊಟ್ಟರೆ ಹಿಟ್ಟು, ಹಿಟ್ಟಿಗೆ ಸಂಸ್ಕಾರ ಕೊಟ್ಟರೆ ಚಪಾತಿ, ಚಪಾತಿಗೆ ಸಂಸ್ಕಾರ ಕೊಟ್ಟರೆ ಪ್ರಸಾದವಾದಂತೆ ಮನಷ್ಯ ಜೀವನಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದ ಕಾಯಕವಾಗಲಿದೆ ಎಂದು ಹೇಳಿದರು.
ಗೋರ್ಟಾದ ಶ್ರೀ ಪ್ರಭು ದೇವರು ಮಾತನಾಡಿ, ಜೀವನ ಉತ್ತಮ ಮಾಡಿಕೊಳ್ಳಬೇಕಾದರೆ ಶರಣರ ಸಂಗ ಮಾಡಬೇಕು. ದುಶ್ಚಟ, ದುರ್ಗುಣಗಳನ್ನು ಬಿಟ್ಟು ಸಾರ್ಥಕ ಬದುಕು ಕಂಡುಕೊಳ್ಳಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ರಮೇಶ ಮೇತ್ರೆ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಮೇತ್ರೆ ಪ್ರಾಸ್ತಾವಿಕ ಮಾತನಾಡಿದರು. ಕಿರಿಯ ಅಭಿಯಂತರ ಬಾಬುರಾವ ಮೊಳಕೀರೆ, ಪಿಡಿಒ ಜಿತೇಂದ್ರ ಮಚಕುರಿ, ಗ್ರಾಪಂ ಸದಸ್ಯ ಗುಂಡಪ್ಪ ಆಳ್ಳೆ, ಗುರುಕಿರಣ ನೀಲಕಂಠ, ವೆಂಕಟರಾವ ಬಿರಾದಾರ, ಜಿತೇಂದ್ರ ಉಚ್ಚೇಕರ, ಅವಿನಾಶ ಗುರಯ್ಯ ಇತರರಿದ್ದರು. ಶಿವಾನಂದ ಬಸವರಾಜ ಸ್ವಾಗತಿಸಿದರು. ಅವಿನಾಶ ಹಿರೇಮಠ ನಿರೂಪಣೆ ಮಾಡಿದರು. ಗುರುಕಿರಣ ಉಚ್ಚೇಕರ ವಂದಿಸಿದರು. ನಂದಿ ಬಸವೇಶ್ವರ ಭಾವಚಿತ್ರದೊಂದಿಗೆ ಕುಂಭ ಮೆರವಣಿಗೆ, ಶ್ರೀ ಕರಿ ಹನುಮಾನ ಭಜನಾ ಮಂಡಳಿಯಿಂದ ವಚನ ಗಾಯನ ಜರುಗಿತು.