ಬೆಂಗಳೂರು: ಕರ್ನಾಟಕದ ಹಂಪಿಯಲ್ಲಿ ಭಾನುವಾರದಿಂದ ಜಿ-20ರ ಮೂರನೇ ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಭೆ (ಸಿಡಬ್ಲ್ಯೂಜಿ) ಪ್ರಾರಂಭವಾಗಿದ್ದು, ಜು.16ರವರೆಗೆ ನಡೆಯಲಿದೆ. ವಿಜಯನಗರ ವಾಸ್ತುಶಿಲ್ಪ ಶೈಲಿ, ವಿಜಯನಗರ ಸಾಮ್ರಾಜ್ಯದ ಹಿರಿಮೆ-ಗರಿಮೆಯನ್ನು ಇಡೀ ಜಗತ್ತಿಗೆ ಪರಿಚಯಿಸುವ ದೃಷ್ಟಿಯಿಂದ ಹಂಪಿಯಲ್ಲಿ ಜಿ.20 ಶೃಂಗಸಭೆ ಆಯೋಜಿಸಲಾಗಿದೆ.
ಲಂಬಾಣಿ ಕಸೂತಿಗೆ ಮನ್ನಣೆ: ಇಂದಿನಿಂದ ವಸ್ತುಪ್ರದರ್ಶನ ಉದ್ಘಾಟನೆ ನಡೆಯಲಿದೆ. ಕರ್ನಾಟಕದ ಸಂಡೂರಿನ ಕಲಾಕೇಂದ್ರದ 450ಕ್ಕೂ ಹೆಚ್ಚು ಜನ ಲಂಬಾಣಿ ಮಹಿಳೆಯರು 1,300 ವೈವಿಧ್ಯಮಯ ಕಸೂತಿಗಳನ್ನು ಸಿದ್ದಪಡಿಸಿದ್ದು, ಇದು ವಿಶ್ವ ಗಿನ್ನಿಸ್ ದಾಖಲೆಗೆ ಸೇರಲಿದೆ. ಈ ಮೂಲಕ ಜಾಗತಿಕವಾಗಿ ಸಾಂಪ್ರದಾಯಿಕ ಲಂಬಾಣಿ ಕಸೂತಿಗೆ ಮನ್ನಣೆ ದೊರಕಿಸಿ, ಅಂತರಾಷ್ಟ್ರೀಯ ಮಾರುಕಟ್ಟೆ ಸೌಲಭ್ಯ ದೊರಕಿಸುವ ಜೊತೆಗೆ ಸಾಂಪ್ರದಾಯಿಕ ಬದುಕಿನ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗಲಿದೆ.
ಸಭೆಯ ಉದ್ಘಾಟನಾ ಅಧಿವೇಶನವನ್ನು ಇಂದು ಹಂಪಿಯಲ್ಲಿ ಆಯೋಜಿಸಲಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಅವರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.
ನಾಲ್ಕು ಉದ್ದೇಶ ಹೊಂದಿರುವ ಜಿ- 20 ಸಭೆ:
“ಜಾಗತಿಕ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪು ಪ್ರಮುಖ ನಾಲ್ಕು ಉದ್ದೇಶಗಳನ್ನು ಹೊಂದಿದೆ. ಮೊದಲನೆಯದಾಗಿ ಸದಸ್ಯ ರಾಷ್ಟ್ರಗಳ ಸಾಂಸ್ಕೃತಿಕ ಅಸ್ಮಿತೆಯನ್ನು ರಕ್ಷಿಸಿ, ಪುನರ್ ಸ್ಥಾಪಿಸುವುದಾಗಿದೆ. ಎರಡನೇ ಮುಖ್ಯ ಉದ್ದೇಶ ಜನಜೀವನದ ಜತೆಗೆ ಪಾರಂಪರಿಕವಾಗಿ ಬಳಕೆಗೆ ಬಂದ ಪದ್ಧತಿಗಳನ್ನು ಉಳಿಸಿ ಬೆಳೆಸುವುದು ಆಗಿದೆ. ಭಾರತದಲ್ಲಿ ಆರ್ಯುವೇದ ಪದ್ಧತಿ ಬಳಕೆಯಲ್ಲಿದ್ದು, ಹಲವಾರು ಸಂದರ್ಭದಲ್ಲಿ ಆರ್ಯವೇದಲ್ಲಿ ಬಳಕೆಯಲ್ಲಿದ್ದ ಔಷಧೋಪಚಾರಗಳ ಸ್ವಾಮ್ಯ ಹಕ್ಕು (ಪೇಟೆಂಟ್) ಬೇರೆಯವರ ಪಾಲಾಗಿದೆ. ಈ ರೀತಿಯ ಘಟನೆಗಳನ್ನು ತಪ್ಪಿಸುವುದು. ಸಂಸ್ಕೃತಿಯ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳನ್ನು ನಿಯಂತ್ರಿಸುವುದು ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಕೆಲಸವಾಗಿದೆ” ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ನಾಲ್ಕು ಆದ್ಯತೆಗಳ ಕುರಿತೂ ಮಾತನಾಡಿದ ಪ್ರಲ್ಹಾದ್ ಜೋಶಿ ಅವರು,’ಆದ್ಯತೆಗಳು ಸಾಂಸ್ಕೃತಿಕವಾಗಿ ವೈವಿಧ್ಯಮಯವಾದ ಏಕೀಕೃತ ಜಗತ್ತನ್ನು ಪ್ರದರ್ಶಿಸುತ್ತವೆ. ಸಾಂಸ್ಕೃತಿಕ ಪರಂಪರೆಯು ಭೂತಕಾಲದ ಆಧಾರ ಸ್ತಂಭ ಮತ್ತು ಭವಿಷ್ಯದ ಮಾರ್ಗವಾಗಿದೆ. G20, ಸದಸ್ಯ ರಾಷ್ಟ್ರಗಳ ಅಮೂಲ್ಯ ಕೊಡುಗೆಗಳನ್ನು ಎತ್ತಿ ಹಿಡಿಯುವುದು. ವೈವಿಧ್ಯತೆಯಿಂದ ಕೂಡಿರುವ ಜಗತ್ತಿನಲ್ಲಿ, ನಮ್ಮ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯು ನಮ್ಮೆಲ್ಲರನ್ನೂ ಬಂಧಿಸುವ ಎಳೆಯಾಗಿದೆ ಎಂದು ತಿಳಿಸಿದರು.
ಸಂಸ್ಕೃತಿ ಸೇತುವೆಗಳನ್ನು ನಿರ್ಮಿಸಿ ತಿಳುವಳಿಕೆ ಮತ್ತು ಸಹಾನುಭೂತಿಯನ್ನು ಬೆಳೆಸುತ್ತದೆ. ಅಂದಿನಿಂದ ಇದುವರೆಗಿನ ಮಾನವ ಪ್ರಯಾಣವನ್ನು ಪ್ರಶಂಸಿಸಲು ನಮಗೆ ಅನುವು ಮಾಡಿಕೊಡುತ್ತದೆ. ಸಂಸ್ಕೃತಿಯು ಕೇವಲ ನಮ್ಮ ಗುರುತಿನ ಭಾಗವಾಗಿರದೆ ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಜಾಗತಿಕ ಸಾಮರಸ್ಯಕ್ಕೆ ಪ್ರೇರಕ ಶಕ್ತಿಯಾಗಿರುವ ನಮ್ಮ ಇಂದಿನ ಕೆಲಸವು ಭವಿಷ್ಯಕ್ಕೆ ದಾರಿ ಮಾಡಿಕೊಡಲಿ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ , ಭಾರತದ ಜಿ-20 ಪ್ರೆಸಿಡೆನ್ಸಿಯ ಅಡಿಯಲ್ಲಿ 3ನೇ ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಭೆಯನ್ನು ಜುಲೈ 9ರಿಂದ 12ರವರೆಗೆ ಕರ್ನಾಟಕದ ಹಂಪಿಯಲ್ಲಿ ಆಯೋಜಿಸಲಾಗಿದೆ. ಭಾರತದ ಸಂಸ್ಕೃತಿ ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಲಿದೆ. ಜೊತೆಗೆ ಸದಸ್ಯ ರಾಷ್ಟ್ರಗಳ ಐತಿಹಾಸಿಕ ಪಾರಂಪರೆಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಬಗ್ಗೆ ಜಿ-20 ರಾಷ್ಟಗಳು ಸುದೀರ್ಘವಾಗಿ ಚರ್ಚೆ ನಡೆಸಲಿವೆ. ಈ ಸಭೆಯಲ್ಲಿ ದೇಶ-ವಿದೇಶದ 252 ಪ್ರತಿನಿಧಿಗಳು ಭಾಗಿಯಾಗಲಿದ್ದಾರೆಂದು ಎಂದು ತಿಳಿಸಿದರು.
ಜಿ20 ಶೆರ್ಪಾ ಸಭೆ: ಜಿ20 ಶೆರ್ಪಾ ಸಭೆ ಜು.13ರಿಂದ 16ರವರೆಗೆ ನಡೆಯಲಿದೆ. ಜಿ20 ರಾಷ್ಟ್ರಗಳ ಪ್ರಧಾನಿಗಳ ಜೊತೆಗೆ ನೇರ ಸಂಪರ್ಕ ಹೊಂದಿರುವ ಅಧಿಕಾರಿಗಳು ಶೆರ್ಪಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಿ20 ರಾಷ್ಟ್ರಗಳ ಸಭೆಗಳಲ್ಲಿ ಇದೊಂದು ವಿಶೇಷ ಸಭೆಯಾಗಿದೆ. ಸಭೆಯಲ್ಲಿ 20 ದೇಶಗಳ ಪೈಕಿ 19 ದೇಶಗಳ 30 ಪ್ರತಿನಿಧಿಗಳು, 9 ಆಹ್ವಾನಿತ ದೇಶಗಳ 16 ಪ್ರತಿನಿಧಿಗಳು, 4 ಸಂಸ್ಥೆಗಳ ಪ್ರತಿನಿಧಿಗಳು ಸೇರಿ ಒಟ್ಟು 52 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಉಭಯ ಸಭೆಗಳಲ್ಲಿ 200ಕ್ಕೂ ಅಧಿಕ ಅಧಿಕಾರಿಗಳೂ ಪಾಲ್ಗೊಳ್ಳಲಿದ್ದಾರೆ.
ಕೇವಲ 1000 ರೂ. ಅಡ್ವಾನ್ಸ್ ಪಡೆದು ಚಿತ್ರಕ್ಕೆ ಯೆಸ್ ಹೇಳಿದ ಸ್ಟಾರ್ ಹೀರೋ!