ಚಿಕ್ಕೋಡಿ: ಆಡಳಿತ ನಿರ್ವಹಣೆಗೆ ಸವಾಲಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಲು ಒತ್ತಾಯಿಸಿ ಬೆಳಗಾವಿ ಚಳಿಗಾಲ ಅಧಿವೇಶನ ಮುಗಿಯುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜಯ ಬಡಿಗೇರ ಹೇಳಿದರು.
ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ೋಷಿಸುವಂತೆ ಒತ್ತಾಯಿಸಿ ಪಟ್ಟಣದ ಮಿನಿವಿಧಾನಸೌಧದ ಎದುರು ಸೋಮವಾರ ಆರಂಭಗೊಂಡ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಜಿಲ್ಲೆ ರಚನೆಗೆ ಬೇಕಾದ ಬಹುತೇಕ ಕಚೇರಿಗಳು ಚಿಕ್ಕೋಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಅಥಣಿ, ಕಾಗವಾಡ ಮತ್ತು ಹುಕ್ಕೇರಿ ತಾಲೂಕುಗಳನ್ನೊಳಗೊಂಡ ಪ್ರದೇಶವನ್ನು ಎರಡು ದಶಕಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರೂ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕೇಂದ್ರ ಬೆಳಗಾವಿಯಿಂದ 225 ಕಿ.ಮೀ ದೂರವಿರುವ ಅಥಣಿ, ರಾಯಬಾಗ ತಾಲೂಕಿನ ಕೊನೆಯ ಹಳ್ಳಿಯ ಜನರ ನಿತ್ಯ ಪರದಾಟ ತಪ್ಪಿಸಬೇಕೆಂದರೆ ಪ್ರತ್ಯೇಕ ಚಿಕ್ಕೋಡಿ ಜಿಲ್ಲೆ ರಚನೆ ಆಗಲೇಬೇಕು. ಸೋಮವಾರದಿಂದ ಆರಂಭಗೊಂಡಿರುವ ಬೆಳಗಾವಿ ಅಧಿವೇಶನದಲ್ಲಿ ಹೊಸ ಜಿಲ್ಲೆ ರಚನೆ ಘೋಷಣೆ ಆಗಲೇಬೇಕು. ಇಲ್ಲದಿದ್ದರೆ ಜಿಲ್ಲಾ ರಚನೆ ಹೋರಾಟ ಉಗ್ರಸ್ವರೂಪ ಪಡೆದುಕೊಳ್ಳಲಿದೆ ಎಂದರು.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಉಪಾಧ್ಯಕ್ಷ ಶ್ರೀಕಾಂತ ಅಸೋದೆ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಕರವೇ ತಾಲೂಕು ಅಧ್ಯಕ್ಷ ನಾಗೇಶ ಮಾಳಿ, ಅಮೂಲ ನಾವಿ, ರಾಜೇಂದ್ರ ಪಾಟೀಲ, ಶ್ರೀಕಾಂತ ಚೌಗಲಾ, ಬಾಳು ಕೋರೆ, ಖಾನಪ್ಪ ಬಾಡಕರ, ಚಿದಾನಂದ ಶಿರೋಳಿ, ವಿಜಯ ಬ್ಯಾಳೆ, ಸೂರಜ ತೋರಸೆ, ರಮೇಶ ಡಂಗೇರ, ಕುಮಾರ ಪಾಟೀಲ, ಮಹೇಶ ಕಾಂಬಳೆ, ಸಚಿನ ದೊಡಮನಿ, ಮಲ್ಲಿಕಾರ್ಜುನ ಸಾಬನೆ, ವಿನಾಯಕ ಘಟ್ಟಿ ಇತರರಿದ್ದರು.