ಉಡುಪಿ: ಕರಾವಳಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಜಿಲ್ಲಾ ಸಮಾವೇಶದಲ್ಲಿ ಭಿನ್ನಮತದ ಅಲೆ ಗೋಚರಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲೇ ಸಭೆ ನಡೆದರೂ ಕೇರೇ ಎನ್ನದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೈರಾಗಿದ್ದಾರೆ. ಮತ್ತೊಂದೆಡೆ ಬ್ಲ್ಯಾಕ್ಮೇಲ್ ನಡೆಯುವುದಿಲ್ಲ ಎಂದು ಡಿಕೆಶಿ ಟಾಂಗ್ ನೀಡಿದ್ದಾರೆ.
ಭಾನುವಾರ ಉಡುಪಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಾವೇಶ ಸಂದರ್ಭದಲ್ಲಿ ಪ್ರಮೋದ್ ಮಧ್ವರಾಜ್ ಅವರ ಅನುಪಸ್ಥಿತಿ ಎದ್ದುಕಂಡಿದ್ದಷ್ಟೇ ಅಲ್ಲ, ಅವರ ಬೆಂಬಲಿಗರ ಶಕ್ತಿ ಪ್ರದರ್ಶನ ಪ್ರಯತ್ನವೂ ನಡೆಯಿತು. ಸಮಾವೇಶ ಸ್ಥಳದ ಆವರಣದಲ್ಲಿ ಪ್ರತ್ಯೇಕ ಶಾಮಿಯಾನ ಅಳವಡಿಸಿಕೊಂಡಿದ್ದ ಪ್ರಮೋದ್ ಬೆಂಬಲಿಗರು ಮೌನ ಪ್ರತಿಭಟನೆಗೆ ಸಜ್ಜಾಗಿದ್ದರು. ಆದರೆ ಬಳಿಕ ಡಿಕೆಶಿ ಬರುತ್ತಿದ್ದಂತೆ ಜೈಕಾರ ಕೂಗಿ ಸಭೆಯಲ್ಲಿ ಪಾಲ್ಗೊಂಡರು. ಜಿಲ್ಲಾ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿರುವ ಪ್ರಮೋದ್ ಬೆಂಬಲಿಗರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸುವ ಭರವಸೆ ನೀಡಲಾಯಿತು.
ಪ್ರಮೋದ್ ಅನುಪಸ್ಥಿತಿ ಹಾಗೂ ಅವರ ಬೆಂಬಲಿಗರ ನಡೆಯಿಂದ ಸ್ವಲ್ಪ ಅಸಮಾಧಾನಗೊಂಡಂತಿದ್ದ ಡಿ.ಕೆ.ಶಿವಕುಮಾರ್, ಅದನ್ನು ಕೊನೆಯಲ್ಲಿ ಮಾತಿನ ಮೂಲಕ ಪರೋಕ್ಷವಾಗಿ ಹೊರಹಾಕಿದ್ದಾರೆ. ಮನೆ ಎಂದಮೇಲೆ ಭಿನ್ನಾಭಿಪ್ರಾಯ ಇರುತ್ತದೆ ನಿಜ, ಹಾಗಂತ ನನ್ನಿಂದಲೇ ಪಕ್ಷ ಅಂತ ಬ್ಲ್ಯಾಕ್ಮೇಲ್ ಮಾಡಬಹುದು ಎಂದು ಭಾವಿಸಿದ್ದರೆ ಅದು ಭ್ರಮೆ. ಯಾರಾದರೂ ಪಕ್ಷ ಬಿಟ್ಟು ಹೋಗುವವರಿದ್ದರೆ ಗೌರವವಾಗಿ ಕಳಿಸಿಕೊಡೋಣ, ಯಾರೂ ಶಾಶ್ವತ ಅಲ್ಲ, ಕಾಂಗ್ರೆಸ್ನಲ್ಲಿ ಇರುವುದು ಸೌಭಾಗ್ಯ. ಮೊದಲು ಶಿಸ್ತು ಬೇಕು, ಅಧಿಕಾರ ಎಲ್ಲರಿಗೂ ಸಿಗುತ್ತದೆ. ಜಿಲ್ಲೆಯಲ್ಲಿ ಒಬ್ಬರೂ ಶಾಸಕರಿಲ್ಲ, ಕಾರ್ಯಕರ್ತರು ಏನು ಮಾಡಬೇಕು? ಎಲ್ಲಿ ತ್ಯಾಗ, ಶ್ರಮ ಇಲ್ಲವೋ ಅಲ್ಲಿ ಫಲ ಇಲ್ಲ. ಚಾಡಿ ಹೇಳುವುದು ಬಿಡಿ, ನಾನಂತೂ ಯಾವ ಚಾಡಿಯನ್ನೂ ಕೇಳುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನಂತರ ಜಿಲ್ಲಾ ಕಾಂಗ್ರೆಸ್ನೊಂದಿಗೆ ಪ್ರಮೋದ್ ಅಂತರ ಕಾಯ್ದುಕೊಂಡಿದ್ದಾರೆ. ಜಿಲ್ಲಾ ಕಾಂಗ್ರೆಸ್ನ ಯಾವುದೇ ಚಟುವಟಿಕೆಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ. ಇದೀಗ ಅಧ್ಯಕ್ಷರ ಮುಂದೆಯೇ ಗೈರಾಗುವ ಮೂಲಕ ತನ್ನ ರಾಜಕೀಯ ನಡೆಯ ಬಗ್ಗೆ ಕುತೂಹಲ ಮೂಡಿಸಿದ್ದಾರೆ.
ಗಂಡ ಕೊಟ್ಟ, ಹೆಂಡತಿ ಕೊಡಲಿಲ್ಲ; ಅಷ್ಟಕ್ಕೇ ಮಹಿಳೆಯ ತಲೆಗೆ ಗುಂಡಿಕ್ಕಿ ಕೊಂದೇ ಬಿಟ್ರು!